ADVERTISEMENT

ಶ್ರೀರಾಮನನ್ನು ರಾಜಕೀಯಕ್ಕೆ ಬಳಸಿದ ಬಿಜೆಪಿ: ಸಚಿವ ಆರ್‌.ಬಿ.ತಿಮ್ಮಾಪುರ ಆರೋಪ

​ಪ್ರಜಾವಾಣಿ ವಾರ್ತೆ
Published 22 ಜನವರಿ 2024, 16:20 IST
Last Updated 22 ಜನವರಿ 2024, 16:20 IST
ಆರ್‌.ಬಿ.ತಿಮ್ಮಾಪುರ
ಆರ್‌.ಬಿ.ತಿಮ್ಮಾಪುರ   

ಚಿತ್ರದುರ್ಗ: ಚುನಾವಣೆ ಸಮೀಪಿಸಿದ್ದರಿಂದ ಬಿಜೆಪಿಗೆ ಶ್ರೀರಾಮನ ನೆನಪಾಗಿದೆ. ಅಯೋಧ್ಯಯ ರಾಮಮಂದಿರ ರಾಜಕೀಯಕ್ಕೆ ಬಳಕೆಯಾಗುತ್ತಿರುವುದು ದುರದೃಷ್ಟಕರ ಎಂದು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಬೇಸರ ವ್ಯಕ್ತಪಡಿಸಿದರು.

‘ಶ್ರೀರಾಮ ಪ್ರತಿಯೊಬ್ಬರಿಗೂ ಬೇಕಾದ ದೇವರು. ಅಯೋಧ್ಯೆಯ ರಾಮ ದೇಶದ ಸರ್ವರ ದೇವರಾಗಬೇಕಿತ್ತು. ಆದರೆ, ಬಿಜೆಪಿ ಇದನ್ನು ತನ್ನ ರಾಜಕೀಯಕ್ಕೆ ಉಪಯೋಗಿಸಿಕೊಳ್ಳಲು ಮುಂದಾಗಿದೆ. ದೇವರು ಮತ್ತು ಧರ್ಮವನ್ನು ರಾಜಕೀಯಕ್ಕೆ ಬಳಸುವುದು ಅಪಾಯಕಾರಿ’ ಎಂದು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಜನರು ಮತ ಹಾಕಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದಿದ್ದು ದೇವರ ಎದುರು ಕುಳಿತು ಭಜನೆ ಮಾಡಲು ಅಲ್ಲ. ದೇವರ ಮುಂದೆ ಕುಳಿತು ಭಜನೆ ಮಾಡುವುದರಿಂದ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ದೇಶದಲ್ಲಿ ಹಲವು ಸಮಸ್ಯೆಗಳಿವೆ. ಯುವ ಸಮೂಹ ಬೀದಿಗೆ ಬಿದ್ದಿದೆ. ಉದ್ಯೋಗ ಸಿಗದೇ ಪರದಾಡುತ್ತಿದೆ. ಶ್ರೀರಾಮನ ಹೆಸರಿನಲ್ಲಿ ಅಧಿಕಾರ ಪಡೆದವರು ಇದಕ್ಕೆ ಪರಿಹಾರ ಸೂಚಿಸಿ’ ಎಂದರು.

ADVERTISEMENT

‘ನಾನು ಕೂಡ ಹಿಂದೂ. ಧರ್ಮ, ಭಕ್ತಿಯ ಬಗ್ಗೆ ಬೇರೆಯವರಿಂದ ಕಲಿಯುವ ಅಗತ್ಯ ನನಗೆ ಇಲ್ಲ. ಸರ್ವಧರ್ಮಗಳನ್ನು ಸಮಾನವಾಗಿ ಪ್ರೀತಿಸುತ್ತೇನೆ. ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತೇವೆ. ಮತ್ತೊಂದು ಧರ್ಮ ಅವಹೇಳನ ಮಾಡುವ ಪ್ರವೃತ್ತಿ ಬಿಜೆಪಿಯಲ್ಲಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.