ಚಿಕ್ಕಜಾಜೂರು: ಸಮೀಪದ ಅರಸನಘಟ್ಟ ಗ್ರಾಮದಲ್ಲಿ ಸೋಮವಾರ ಬಸವೇಶ್ವರಸ್ವಾಮಿಯ ಕೆಂಡಾರ್ಚನೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಕೆಂಡಾರ್ಚನೆ ಅಂಗವಾಗಿ ಬಸವೇಶ್ವರಸ್ವಾಮಿಯ ಉತ್ಸವಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ, ವೀರಗಾಸೆ ತಂಡ ಹಾಗೂ ಡೊಳ್ಳು ಕುಣಿತದೊಂದಿಗೆ ಮೆರವಣಿಗೆ ಮಾಡಲಾಯಿತು.
ಉತ್ಸವದ ಪಲ್ಲಕ್ಕಿ ದೇವಸ್ಥಾನಕ್ಕೆ ಬರುತ್ತಿದ್ದಂತೆ, ಅರ್ಚಕರು ಅಗ್ನಿಕುಂಡದ ಸುತ್ತ ಕುಂಕುಮ–ಅರಿಶಿನಗಳಿಂದ ಚಿತ್ತಾರ ಬಿಡಿಸಿ, ಎಂಟು ದಿಕ್ಕುಗಳಿಗೂ ಎಡೆ ಹಾಕಿ, ಮಹಾ ಮಂಗಳಾರತಿ ಮಾಡಿದರು. ಪಲ್ಲಕ್ಕಿಯನ್ನು ಹೊತ್ತ ಭಕ್ತರು ಅಗ್ನಿ ಕುಂಡವನ್ನು ಪ್ರವೇಶಿಸಿ, ಮೂರು ಬಾರಿ ಕೆಂಡ ಹಾಯ್ದರು.
‘ಗ್ರಾಮದಲ್ಲಿ ಬೆಂಕಿ ಅವಘಡಗಳಾಗಲಿ, ಜನ–ಜಾನುವಾರುಗಳಿಗೆ ಸಾಂಕ್ರಾಮಿಕ ರೋಗಗಳು ಬಾರದಂತೆ ಮತ್ತು ಉತ್ತಮ ಮಳೆಯಾಗಿ ಬೆಳೆ ಬರಲಿ‘ ಎಂದು ಸ್ವಾಮಿಗೆ ಸಿದ್ಧಪಡಿಸಿದ ಎಡೆಯನ್ನು ಗ್ರಾಮದ ಸುತ್ತ ಸರಗ (ಚರಗ) ಹಾಕಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.