ADVERTISEMENT

ಚಿತ್ರದುರ್ಗ | ಮಗನನ್ನು ಕೊಂದು ಕಾರಿನಲ್ಲಿ ಶವ ಸಾಗಿಸುತ್ತಿದ್ದ ಮಹಿಳಾ ಸಿಇಒ ಬಂಧನ

​ಪ್ರಜಾವಾಣಿ ವಾರ್ತೆ
Published 9 ಜನವರಿ 2024, 5:55 IST
Last Updated 9 ಜನವರಿ 2024, 5:55 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಚಿತ್ರದುರ್ಗ: ತನ್ನ ನಾಲ್ಕು ವರ್ಷದ ಮಗನನ್ನು ಕೊಲೆ ಮಾಡಿ ಮೃತದೇಹವನ್ನು ಬ್ಯಾಗಿನಲ್ಲಿಟ್ಟು ಕಾರಿನಲ್ಲಿ ಸಾಗಣೆ ಮಾಡುತ್ತಿದ್ದ ಖಾಸಗಿ ಸ್ಟಾರ್ಟ್ ಅಪ್ ಕಂಪನಿಯ ಮಹಿಳಾ ಸಿಇಒ ಒಬ್ಬರನ್ನು ಐಮಂಗಲ ಠಾಣೆಯ ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ.

ಬೆಂಗಳೂರಿನ ‘ಮೈಂಡ್‌ಫುಲ್ ಎಐ ಲ್ಯಾಬ್’ ಎಂಬ ಕೃತಕ ಬುದ್ಧಿಮತ್ತೆ ಕಂಪೆನಿಯ ಸಹ ಸಂಸ್ಥಾಪಕಿ ಸುಚನಾ ಸೇಠ್ (39) ಬಂಧಿತ ಮಹಿಳೆ. ಕಾರು ಚಾಲಕನೇ ಆರೋಪಿಯನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದು, ಮೃತದೇಹವನ್ನು ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಆರೋಪಿ ಮಹಿಳೆಯನ್ನು ಗೋವಾ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

ADVERTISEMENT

ಉತ್ತರ ಗೋವಾದ ‘ಸೋಲ್ ಬ್ಯಾನಿಯನ್ ಗ್ರ್ಯಾಂಡ್’ ಹೋಟೆಲ್‌ಗೆ ಮಹಿಳೆ ಪುತ್ರನೊಂದಿಗೆ ಶನಿವಾರ ತೆರಳಿದ್ದಳು. ಸೋಮವಾರ ಕೊಠಡಿ ತೆರವುಗೊಳಿಸಿ ಏಕಾಂಗಿಯಾಗಿ ಹೊರಬಂದಿದ್ದಳು. ಬೆಂಗಳೂರಿಗೆ ಮರಳಲು ಟ್ಯಾಕ್ಸಿ ಬಾಡಿಗೆ ಕೇಳಿದ್ದಳು. ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ಬಾಲಕನ ಬಗ್ಗೆ ವಿಚಾರಿಸಿದ್ದರು. ಸಂಬಂಧಿಕರ ಮನೆಯಲ್ಲಿ ಬಾಲಕನನ್ನು ಬಿಟ್ಟು ಬಂದಿರುವುದಾಗಿ ಮಹಿಳೆ ಸಬೂಬು ನೀಡಿ ಹೊರಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕೊಠಡಿ ಶುಚಿಗೊಳಿಸುವಾಗ ರಕ್ತದ ಕಲೆಗಳನ್ನು ಗಮನಿಸಿದ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ಮಹಿಳೆ ತೆರಳುತ್ತಿದ್ದ ಕಾರಿನ ಚಾಲಕನನ್ನು ಫೋನ್ ಮೂಲಕ ಸಂಪರ್ಕಿಸಿದ್ದಾರೆ. ಕೊಂಕಣಿಯಲ್ಲಿ ಮಾತನಾಡಿದ ಪೊಲೀಸರು, ಘಟನೆ ಬಗ್ಗೆ ಚಾಲಕನಿಗೆ ವಿವರಿಸಿದ್ದಾರೆ. ಆರೋಪಿಯನ್ನು ಪೊಲೀಸರಿಗೆ ಹಿಡಿದುಕೊಡಲು ಸೂಚನೆ ನೀಡಿದ್ದಾರೆ.

ಚಾಲಕನಿಗೆ ಈ ಮಾಹಿತಿ ತಿಳಿದಾಗ ಕಾರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಚಿತ್ರದುರ್ಗದಿಂದ ಹಿರಿಯೂರು ಕಡೆಗೆ ಸಾಗುತ್ತಿತ್ತು. ಐಮಂಗಲ ಸಮೀಪದ ಪೊಲೀಸ್ ಠಾಣೆ ಗಮನಿಸಿದ ಚಾಲಕ, ನೇರವಾಗಿ ಠಾಣೆಗೆ ಕಾರು ತಂದಿದ್ದಾರೆ. ಕಾರಿನ ಡಿಕ್ಕಿ ತೆರೆದಾಗ ಸೂಟ್ ಕೇಸ್ ಬ್ಯಾಗಿನಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಮಹಿಳೆಯನ್ನು ಬಂಧಿಸಿ ಗೋವಾ ಪೊಲೀಸರಿಗೆ ಮಾಹಿತಿ ನೀಡಲಾಯಿತು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.