ಚಿಕ್ಕಜಾಜೂರು: ಅಡಿಕೆ ವ್ಯಾಪಾರಿಯೊಬ್ಬ ಇಲ್ಲಿನ ಇಬ್ಬರು ರೈತರಿಂದ ₹22.54 ಲಕ್ಷ ಮೌಲ್ಯದ ಅಡಿಕೆಯನ್ನು ಖರೀದಿಸಿ, ವಂಚಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಚಿಕ್ಕಜಾಜೂರು ಸಮೀಪದ ಹೊಸಹಳ್ಳಿ ಗ್ರಾಮದ ನಿಂಗರಾಜ್ ಹಾಗೂ ಶ್ರೀಕಾಂತ್ ಎಂಬವರು ವಂಚನೆಗೊಳಗಾದ ರೈತರು.
ಚನ್ನಗಿರಿ ತಾಲ್ಲೂಕಿನ ಗೊಪ್ಪೆನಾಳ್ ಗ್ರಾಮದ ರುದ್ರೇಶ್ ಎಂಬವರಿಗೆ ಏಪ್ರಿಲ್ ತಿಂಗಳಿನಲ್ಲಿ ಇವರು ₹13,24 ಲಕ್ಷ ಹಾಗೂ ₹ 9.30 ಲಕ್ಷ ಮೌಲ್ಯದ ಅಡಿಕೆಯನ್ನು ಮಾರಾಟ ಮಾಡಿದ್ದರು. ವಾರದೊಳಗೆ ಹಣ ಕೊಡುವುದಾಗಿ ತಿಳಿಸಿದ್ದ ರುದ್ರೇಶ್, ಅಡಿಕೆ ಖರೀದಿಸಿದ್ದರು. ಆದರೆ, ತಿಂಗಳಾದರೂ ಹಣವನ್ನು ಕೊಡದಿದ್ದಾಗ ಚನ್ನಗಿರಿಯ ಸಿಪಿಐ ಅವರಿಗೆ ದೂರು ನೀಡಿದ್ದರು.
ರುದ್ರೇಶ್ ಹಾಗೂ ಅವರ ತಾಯಿ ಸಿಪಿಐ ಸಮ್ಮುಖದಲ್ಲಿ ಮೂರು ತಿಂಗಳ ವಾಯಿದೆ ಪಡೆದಿದ್ದರು. ನಂತರ ರುದ್ರೇಶ್ ನಾಪತ್ತೆಯಾಗಿದ್ದಾಗಿ ತಿಳಿದುಬಂದಿದೆ.
‘ಮನೆಯ ಹತ್ತಿರ ಹೋದರೆ ನಮ್ಮ ವಿರುದ್ಧವೇ ಪ್ರಕರಣ ದಾಖಲಿಸುವುದಾಗಿ ಅವರ ತಾಯಿ ಬೆದರಿಕೆ ಹಾಕುತ್ತಿದ್ದಾರೆ. ನಾವು ಸಾಲ ಮಾಡಿ, ಅಡಿಕೆ ಬೆಳೆದು ಮಾರಾಟ ಮಾಡಿದರೆ, ಖರೀದಿದಾರ ತಲೆಮರೆಸಿಕೊಂಡಿದ್ದಾನೆ’ ಎಂದು ನಿಂಗರಾಜ್ ಹಾಗೂ ಶ್ರೀಕಾಂತ್ ತಿಳಿಸಿದ್ದಾರೆ.
ಚಿಕ್ಕಜಾಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.