ಚಿತ್ರದುರ್ಗ: ನಗರದ ಮುರುಘಾ ಮಠದ ದರ್ಬಾರ್ ಹಾಲ್ನಲ್ಲಿದ್ದ 22 ಕೆ.ಜಿ. ತೂಕದ ಶಿವಮೂರ್ತಿ ಮುರುಘಾ ಸ್ವಾಮೀಜಿಯವರ ಬೆಳ್ಳಿ ಪುತ್ಥಳಿ ಕಳ್ಳತನವಾಗಿದೆ.
ಈ ಕುರಿತು ಮಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ಗುರುವಾರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಠದ ಸಿಬ್ಬಂದಿಯೊಬ್ಬರು ಬುಧವಾರ ದರ್ಬಾರ್ ಹಾಲ್ಗೆ ತೆರಳಿದಾಗ ಪುತ್ಥಳಿ ಕಳ್ಳತನ ಆಗಿರುವುದು ಪತ್ತೆಯಾಗಿದೆ. ಜುಲೈ 4ರಂದು ಕಡೆಯದಾಗಿ ಪ್ರತಿಮೆ ನೋಡಿದ್ದಾಗಿ ಅವರು ತಿಳಿಸಿದ್ದಾರೆ. ಮಠದಲ್ಲಿ ಆಂತರಿಕ ತನಿಖೆ ನಡೆಸಿದಾಗ ಪುತ್ಥಳಿ ಕುರಿತ ಯಾವುದೇ ಮಾಹಿತಿ ಲಭ್ಯವಾಗಿಲ್ಲ. 21 ಇಂಚು ಎತ್ತರದ ಪುತ್ಥಳಿಯು ₹ 16 ಲಕ್ಷ ಮೌಲ್ಯ ಹೊಂದಿದೆ. ಮುರುಘಾ ಮಠದ ಟ್ರಸ್ಟ್ ಮತ್ತು ಎಸ್ಜೆಎಂ ವಿದ್ಯಾಪೀಠದ ಆಡಳಿತ ನಿರ್ವಹಣಾ ಸಮಿತಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ ಅವರ ಮೌಖಿಕ ಸೂಚನೆ ಮೇರೆಗೆ ದೂರು ನೀಡಲಾಗುತ್ತಿದೆ ಎಂದು ಅವರು ಬಸವಕುಮಾರ ಸ್ವಾಮೀಜಿ ತಿಳಿಸಿದ್ದಾರೆ.
ಶಿವಮೂರ್ತಿ ಮುರುಘಾ ಸ್ವಾಮೀಜಿ ಪೀಠಾರೋಹಣದ ರಜತೋತ್ಸವ ಆಚರಣೆ ಸಂದರ್ಭದಲ್ಲಿ ವಿವಿಧ ಮಠಾಧೀಶರು ಬೆಳ್ಳಿ ಪುತ್ಥಳಿ ಅರ್ಪಿಸಿದ್ದರು. ಸದ್ಯ ಶಿವಮೂರ್ತಿ ಸ್ವಾಮೀಜಿ ಪೋಕ್ಸೊ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರ ಬಂಧನದ ನಂತರ ಮಠದಲ್ಲಿದ್ದ ಕೆಲ ಛಾಯಾಚಿತ್ರಗಳು ಕೂಡ ಕಾಣೆಯಾಗಿದ್ದವು. ಈ ಬಗ್ಗೆಯೂ ದೂರು ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.