ಮೊಳಕಾಲ್ಮುರು: ‘ನಮ್ಮ ದನಗಳು ಭತ್ತದ ಹೊಟ್ಟು (ಹುಲ್ಲು) ತಿನ್ನುವುದಿಲ್ಲ. ಬದಲಾಗಿ ಮೆಕ್ಕೆಜೋಳದ ಸಪ್ಪೆ ನೀಡುವ ಮೂಲಕ ನೆರವಿಗೆ ಬರಬೇಕು’ ಎಂದು ಜಾನುವಾರು ಮಾಲೀಕರು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರಿಗೆ ಮನವಿ ಮಾಡಿದರು.
ಗುರುವಾರ ತಾಲ್ಲೂಕಿನ ಮುತ್ತಿಗಾರಹಳ್ಳಿ ಮ್ಯಾಸರಹಟ್ಟಿ ಗೋಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗೆ ಗ್ರಾಮಸ್ಥರು ಈ ಮನವಿ ಸಲ್ಲಿಸಿದರು.
ಒಂದು ದಿನ ಸಪ್ಪೆ ಮತ್ತು ಮತ್ತೊಂದು ದಿನ ಭತ್ತದ ಹುಲ್ಲು ನೀಡುವಂತೆ ಹುಲ್ಲು ಸರಬರಾಜು ಗುತ್ತಿಗೆದಾರರಿಗೆ ಸೂಚಿಸಬೇಕು. ನಾಳೆಯಿಂದಲೇ ಇದು ಜಾರಿಗೆ ತರಬೇಕು ಎಂದು ಸ್ಥಳದಲ್ಲಿದ್ದ ತಹಶೀಲ್ದಾರ್ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಹೆಚ್ಚು ಬಿಸಿಲು ಇರುವ ಕಾರಣ ತಕ್ಷಣವೇ ಶೆಡ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ನಂತರ ಬಿ.ಜಿ. ಕೆರೆಯ ಮತಕೇಂದ್ರಕ್ಕೆ ಭೇಟಿ ನೀಡಿ ವ್ಯವಸ್ಥೆ ಬಗ್ಗೆ ಪರಿಶೀಲಿಸಿದರು. ನಂತರ ಆಂಧ್ರಪ್ರದೇಶದ ಗಡಿಭಾಗದ ಎದ್ದಲಬೊಮ್ಮಯ್ಯನ ಹಟ್ಟಿ ಬಳಿ ಸ್ಥಾಪಿಸಿರುವ ಚೆಕ್ಪೋಸ್ಟ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪಟ್ಟಣ ಪಂಚಾಯಿತಿಗೆ ಭೇಟಿ ನೀಡಿ ಅಧಿಕಾರಿಗಳ ಜತೆ ಸಭೆ ನಡೆಸಿ, ಕುಡಿಯುವ ನೀರು, ಚುನಾವಣಾ ಸಿದ್ಧತೆ, ಇ-ಸ್ವತ್ತು ಬಾಕಿ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಹಶೀಲ್ದಾರ್ ಶಂಕರಪ್ಪ, ತಾಲ್ಲೂಕು ಪಂಚಾಯಿತಿ ಇಒ ಕೆ.ಆರ್. ಪ್ರಕಾಶ್, ಪಶು ಇಲಾಖೆಯ ಡಾ. ರಂಗಪ್ಪ, ಜಿಲ್ಲಾ ಪಂಚಾಯಿತಿಯ ನಾಗನಗೌಡ, ಕುಡಿಯುವ ನೀರು ವಿಭಾಗದ ಹರೀಶ್, ಪಿಡಿಒ ಮಲ್ಲಿಕಾರ್ಜುನ್ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.