ಚಳ್ಳಕೆರೆ: ಮಳೆಯ ಅಭಾವದಿಂದ ತೀವ್ರ ಬರಗಾಲ ಆವರಿಸಿರುವ ಕಾರಣ, ಮೊಳಕಾಲ್ಮೂರು ಹಾಗೂ ಚಳ್ಳಕೆರೆ ತಾಲ್ಲೂಕಿನ ಮ್ಯಾಸಬೇಡ ಸಮುದಾಯದ ನೂರಾರು ದೇವರ ದನಗಳಿಗೆ ಪಾವಗಡದ ರಾಮಕೃಷ್ಣ ಸೇವಾಶ್ರಮ ಮತ್ತು ಬೆಂಗಳೂರು ಇನ್ಫೊಸಿಸ್ ಸುಧಾಮೂರ್ತಿ ಫೌಂಡೇಷನ್ ಬಳಗದಿಂದ ಮೇವು ವಿತರಣಾ ಕಾರ್ಯ ಮುಂದುವರಿಯಲಿದೆ ಎಂದು ಪಾವಗಡ ಜಪಾನಂದ ಸ್ವಾಮಿ ಹೇಳಿದರು.
ತಾಲ್ಲೂಕಿನ ಹಿರೇಹಳ್ಳಿ, ಹಾಯ್ಕಲ್ ಮುಂತಾದ ಗ್ರಾಮದ ದೇವರ ದನಗಳಿಗೆ ಗುರುವಾರ ಎರಡು ಲೋಡ್ ಮೇವು ವಿತರಿಸಿ ಅವರು ಮಾತನಾಡಿದರು.
ದೇವರ ದನಗಳ ರಕ್ಷಣೆಗೆ ಇದುವರೆಗೆ ಸೇವಾಶ್ರಮದಿಂದ 300ಕ್ಕೂ ಹೆಚ್ಚು ಟನ್ ಮೇವನ್ನು ಉಚಿತವಾಗಿ ಒದಗಿಸಲಾಗಿದೆ. ನಾಡಿನ ಪಶುಸಂಪತ್ತು ಸಂರಕ್ಷಣೆಗೆ ಮೇವು ಪೂರೈಕೆಗೆ ಮುಂದಾಗುವಂತೆ ಸರ್ಕಾರ ಹಾಗೂ ಸಂಘ ಸಂಸ್ಥೆಗಳನ್ನು ಅವರು ಒತ್ತಾಯಿಸಿದರು.
ಆಶ್ರಮದಿಂದ ನಿರಂತರವಾಗಿ ಮೇವು ಒದಗಿಸುತ್ತಿದ್ದರೂ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ದೊರೆ ನಾಗರಾಜ, ವಕೀಲ ಬೋರಣ್ಣ, ಕಿಲಾರಿ ಬೋಮ್ಮಯ್ಯ, ಗುರುಸ್ವಾಮಿ, ರಾಷ್ಟ್ರೀಯ ಕಿಸಾನ್ ಸಂಘದ ಹೋಬಳಿ ಘಟಕದ ಅಧ್ಯಕ್ಷ ಪ್ರಕಾಶ್, ಕೋನಸಾಗರ, ನೆಲಗೇತನಹಟ್ಟಿ ಬೋರಯ್ಯ, ಹಾಯ್ಕಲ್ ಬೋರಯ್ಯ, ಹಿರೇಹಳ್ಳಿ ಸುರೇಶ್, ಮಂಜುನಾಥ್, ಕಿಲಾರಿ ಚಿನ್ನಯ್ಯ, ಓಬಯ್ಯ, ಪಾಲಯ್ಯ, ಬೋರಯ್ಯ ನೇರಲಗುಂಟೆ ಪ್ರಕಾಶ್, ಸಿದ್ದೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.