ಧರ್ಮಪುರ: ಮಾದಕ ವಸ್ತುಗಳ ಸೇವನೆಯ ಚಟಕ್ಕೆ ಬಲಿಯಾಗಿ ಅಮೂಲ್ಯ ಬದುಕನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಸಿಪಿಐ ಷಣ್ಮುಖಪ್ಪ ಮನವಿ ಮಾಡಿದರು.
ಇಲ್ಲಿನ ಪಂಚಲಿಂಗೇಶ್ವರ ಪದವಿ ಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ಸೇವನೆಯ ವಿರುದ್ಧದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಯುವಕರು ಭಾರತದ ನಿಜವಾದ ಶಕ್ತಿ. ಇಂತಹ ಯುವ ಶಕ್ತಿಯನ್ನು ಮಾದಕದ್ರವ್ಯಗಳು ಹಾಳುಮಾಡುತ್ತಿವೆ. ಗಾಂಜಾ, ಅಫೀಮು, ಹೆರಾಯಿನ್ ಮೊದಲಾದ ಮಾದಕ ದ್ರವ್ಯಗಳನ್ನು ಅಕ್ರಮವಾಗಿ ಪೆಡ್ಲರ್ ಮೂಲಕ ದೇಶದೊಳಕ್ಕೆ ಸಾಗಿಸಲಾಗುತ್ತಿದೆ. ಯುವಕರು ಇವುಗಳ ವ್ಯಸನಕ್ಕೆ ಬಲಿಯಾಗಬಾರದು. ಹತ್ತಿರದ ಪೊಲೀಸ್ ಠಾಣೆ ಅಥವಾ ಕಾಲೇಜಿನ ಮುಖ್ಯಸ್ಥರಿಗೆ ತಿಳಿಸಬೇಕು’ ಎಂದರು.
ಡ್ರಗ್ಸ್ ಪೆಡ್ಲರ್ಗಳು ಕಾಲೇಜು ಕ್ಯಾಂಪಸ್ಗಳನ್ನು ಆಯ್ಕೆ ಮಾಡಿಕೊಂಡು ತಮ್ಮ ಕಾರ್ಯಚಟುವಟಿಕೆ ವಿಸ್ತರಿಸುತ್ತಾರೆ. ಮಾದಕವಸ್ತು ಪೂರೈಕೆ ಜಾಲದ ಬಗ್ಗೆ ವಿದ್ಯಾರ್ಥಿಗಳು ಎಚ್ಚರ ವಹಿಸಬೇಕು ಎಂದು ಪ್ರಾಚಾರ್ಯ ಪ್ರೊ.ವಿ.ವೀರಣ್ಣ ತಿಳಿಸಿದರು.
ವೇದಿಕೆಯಲ್ಲಿ ಪಿಎಸ್ಐ ಬಾಹುಬಲಿ ಎಂ.ಪಡನಾಡ, ಪ್ರೊ.ಬಿ.ಆರ್.ತಿಮ್ಮರಾಜು, ಪ್ರೊ.ಎಂ.ಮಲ್ಲಯ್ಯ, ಪ್ರೊ.ಕೆ.ನಾಗರಾಜ, ಪ್ರೊ.ರಮೇಶ್, ಪ್ರೊ.ರವಿ, ಪೊಲೀಸ್ ನಾಗರಾಜ, ಬಬ್ಬೂರು ನಾಗರಾಜ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.