ADVERTISEMENT

ಅನೈತಿಕ ಚಟುವಟಿಕೆಗಳ ತಾಣವಾಗಿರುವ ಗುರುಭವನ; ಇತ್ತ ತಿರುಗಿ ನೋಡುವುದೇ ಜಿಲ್ಲಾಡಳಿತ?

ಕೊಳಚೆ ಹೊಂಡದಂತಿರುವ ಜಿಲ್ಲಾ ಕೇಂದ್ರದ ಶಿಕ್ಷಕರ ಸದನ,

ಎಂ.ಎನ್.ಯೋಗೇಶ್‌
Published 17 ಜೂನ್ 2024, 7:37 IST
Last Updated 17 ಜೂನ್ 2024, 7:37 IST
ಚಿತ್ರದುರ್ಗದ ಗುರುಭವನದ ಕೆಳಮಹಡಿಯಲ್ಲಿ ನೀರು ತುಂಬಿಕೊಂಡು, ಮದ್ಯದ ಬಾಟಲಿಗಳು ಚೆಲ್ಲಾಡಿರುವುದು
ಚಿತ್ರದುರ್ಗದ ಗುರುಭವನದ ಕೆಳಮಹಡಿಯಲ್ಲಿ ನೀರು ತುಂಬಿಕೊಂಡು, ಮದ್ಯದ ಬಾಟಲಿಗಳು ಚೆಲ್ಲಾಡಿರುವುದು   

ಚಿತ್ರದುರ್ಗ: ಜಿಲ್ಲೆಯ ಶಿಕ್ಷಕರ ವಿವಿಧ ಚಟುವಟಿಕೆಗಳ ಸ್ಥಳವಾಗಬೇಕಿದ್ದ ಗುರುಭವನ ಈಗ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ನಗರದ ಹೃದಯ ಭಾಗ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿರುವ ಗುರುಭವನ ಪಾಳುಕಟ್ಟಡದಂತಿದ್ದು ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಹಳೇ ಮಾಧ್ಯಮಿಕ ಶಾಲಾ ಕ್ರೀಡಾಂಗಣದ ಸುತ್ತಲೂ ಹಲವು ಸರ್ಕಾರಿ ಕಚೇರಿಗಳಿವೆ. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಸರ್ಕಾರಿ ಉರ್ದು ಶಾಲೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸೇರಿದಂತೆ ಹಲವು ಕಟ್ಟಡಗಳಿದ್ದು ಗುರುಭವನವೂ ಒಂದು. ರಸ್ತೆಬದಿಯಲ್ಲೇ ಇರುವ ಈ ಗುರುಭವನವನ್ನು ನೋಡಿದರೆ ಪಾಳು ಕಟ್ಟಡದಂತೆ ಕಾಣುತ್ತದೆ.

ಗುರುಭವನವನ್ನು ಜಿಲ್ಲಾಡಳಿತ ಹಲವು ವರ್ಷಗಳಿಂದ ಚುನಾವಣಾ ಕಾರ್ಯಕ್ಕೆ ಬಳಸಿಕೊಂಡಿತ್ತು. ಮೊದಲ ಹಾಗೂ ಮೇಲ್ಮಹಡಿಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಸಂಗ್ರಹಿಸಿತ್ತು. 2023ರ ವಿಧಾನಸಭಾ ಚುನಾವಣೆವರೆಗೂ ಈ ಕಾರ್ಯಕ್ಕೆ ಬಳಕೆಯಾಗಿತ್ತು. ಆದರೆ ಈಗ ಇವಿಎಂ ಸಂಗ್ರಹಕ್ಕೆ ಬೇರೆ ಕಟ್ಟಡ ಪಡೆಯಲಾಗಿದ್ದು ಗುರುಭವನ ಸಂಪೂರ್ಣವಾಗಿ ಪಾಳು ಬಿದ್ದಿದೆ.

ADVERTISEMENT

1995–96ರಲ್ಲಿ ಶಿಕ್ಷಕರ ಹಣದಲ್ಲಿ ನಿರ್ಮಾಣವಾದ ಭವನ ಶಿಕ್ಷಕ ಬಳಗದ ಹಲವು ಚಟುವಟಿಕೆಗಳಿಗೆ ಬಳಕೆಯಾಗುತ್ತಿತ್ತು. ಶಿಕ್ಷಕರ ಮಕ್ಕಳ ಮದುವೆ, ನಾಮಕರಣ ಮುಂತಾದ ಚಟುವಟಿಕೆಗಳಿಗೆ ನೀಡಲಾಗುತ್ತಿತ್ತು. ಆದರೆ ಈಗ ಯಾವ ಚಟುವಟಿಕೆಗಳೂ ಬಳಸಲಾಗದ ಸ್ಥಿತಿಯಲ್ಲಿ ಗುರುಭವನ ಇದ್ದು ಜಿಲ್ಲಾ ಕೇಂದ್ರದಲ್ಲಿ ಒಂದು ಭವನ ಇಲ್ಲವೆಂಬ ಕೊರಗು ಶಿಕ್ಷಕರನ್ನು ಕಾಡುತ್ತಿದೆ.

ಭವನದ ಕೆಳ ಮಹಡಿಯಲ್ಲಿ ಕೊಳಕು ತುಂಬಿಕೊಂಡಿದ್ದು ಅಲ್ಲಿಗೆ ಮಳೆ ನೀರು ನುಗ್ಗಿದೆ. ಕಟ್ಟೆಯಂತೆ ನೀರು ನಿಂತಿರುವ ಕಾರಣ ಕಟ್ಟಡದ ಭದ್ರತೆಗೆ ಹಾನಿಯಾಗಿದೆ. ಎಲ್ಲೆಂದರಲ್ಲಿ ಬೀಡಿ, ಸಿಗರೇಟು ತುಂಡುಗಳು, ಮದ್ಯದ ಬಾಟಲಿಗಳು ಬಿದ್ದು ಚೆಲ್ಲಾಡುತ್ತಿವೆ. ಕ್ರೀಡಾಂಗಣದಲ್ಲಿ ಹಲವು ಶಾಲೆಗಳ ಮಕ್ಕಳು ಆಟವಾಡುತ್ತಾರೆ, ಸಾರ್ವಜನಿಕರು ಓಡಾಡುತ್ತಾರೆ. ಆದರೆ ಇಲ್ಲಿ ಎಲ್ಲೂ ಒಂದು ಶೌಚಾಲಯವಿಲ್ಲ. ಹೀಗಾಗಿ ಜನರು ಗುರುಭವನದ ಗೋಡೆಗಳನ್ನೇ ಶೌಚಾಲಯ ಮಾಡಿಕೊಂಡಿದ್ದಾರೆ.

ಭವನದ ಹಿಂಭಾಗದಲ್ಲಿರುವ ಒಂದು ಕೊಠಡಿಯಲ್ಲಿ ನಿವೃತ್ತ ನೌಕರರ ಸಂಘದ ಚಟುವಟಿಕೆಗಳನ್ನು ನಡೆಸಲಾಗುತ್ತಿತ್ತು. ಆದರೆ ಈಗ ಅದೂ ಇಲ್ಲವಾಗಿದ್ದು ಕುಡುಕರು, ಕಿಡಿಗೇಡಿಗಳು ಮಲಗುವ ತಾಣವಾಗಿದೆ. ಸಂಜೆಯಾಯಿತೆಂದರೆ ಇಲ್ಲಿ ಒಬ್ಬೊಬ್ಬರೇ ಓಡಾಡಲು ಆಗದಂತಹ ವಾತಾವರಣ ನಿರ್ಮಾಣವಾಗಿದೆ. ಭವನದ ಸುತ್ತಲೂ ಇರುವ ಕಬ್ಬಿಣದ ಕಿಟಕಿ, ಸರಳುಗಳು ಕಳ್ಳರ ಪಾಲಾಗಿವೆ.

ಭವನದ ಮುಖ್ಯ ದ್ವಾರದಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಕಟ್ಟಡದ ಕೆನೊಪಿಯಲ್ಲಿ ಮರಗಳ ಬೇರು ಇಳಿದಿವೆ. ಭವನ ಚುನಾವಣಾ ಭದ್ರತಾ ಕೊಠಡಿಯೂ ಆಗಿದ್ದ ಕಾರಣ ಕಟ್ಟಡದ ಚಿತ್ರಣವೇ ಬದಲಾಗಿ ಹೋಗಿದೆ. ನಿಯಮಾನುಸಾರ ಕಿಟಕಿಗಳನ್ನು ಇಟ್ಟಿಗೆ ಕಟ್ಟಿ ಮುಚ್ಚಲಾಗಿದೆ. ಹೀಗಾಗಿ ಭವನವನ್ನು ಯಾವುದೇ ಚಟುವಟಿಕೆಗಳಿಗೂ ಬಳಸಲಾಗದ ಪರಿಸ್ಥಿತಿ ಇದೆ.

‘ದಿವ್ಯಪ್ರಭು ಅವರು ಜಿಲ್ಲಾಧಿಕಾರಿಯಾಗಿದ್ದಾಗ ಗುರುಭವನ ದುರಸ್ತಿ ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದೆವು. ಕಟ್ಟಡ ದುರಸ್ತಿ ಮಾಡಿಸಿಕೊಡುವುದಾಗಿ ಅವರು ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೂ ಭವನ ದುರಸ್ತಿಯಾಗಿಲ್ಲ, ನಮ್ಮ ಬೇಡಿಕೆ ಈಡೇರಿಲ್ಲ’ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ.ಮಹಾಂತೇಶ್‌ ಹೇಳಿದರು.

ಲಾಭ ತರುತ್ತಿದ್ದ ಗುರುಭವನ: ಜಿಲ್ಲಾಡಳಿತ ಗುರುಭವನವನ್ನು ಚುನಾವಣಾ ಕೆಲಸಕ್ಕೆ ಬಳಸಿಕೊಳ್ಳುವುದಕ್ಕೂ ಮೊದಲು ಭವನವನ್ನು ವಾಣಿಜ್ಯ ಉದ್ದೇಶಗಳಿಗೂ ನೀಡಲಾಗುತ್ತಿತ್ತು. ಖಾಸಗಿ ವಸ್ತುಪ್ರದರ್ಶನ, ಮಾರಾಟ ಮೇಳ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಬಾಡಿಗೆ ನೀಡಲಾಗುತ್ತಿತ್ತು. ಬಂದ ಹಣವನ್ನು ಶಿಕ್ಷಕರ ಕಲ್ಯಾಣ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿತ್ತು. 

‘ಶಿಕ್ಷಕರ ಬೆವರ ಹನಿಯಿಂದ ನಿರ್ಮಾಣಗೊಂಡಿರುವ ಗುರುಭವನವನ್ನು ಕೆಟ್ಟ ಸ್ಥಿತಿಯಲ್ಲಿ ಬಿಟ್ಟಿರುವುದನ್ನು ನೋಡಿದರೆ ನೋವಾಗುತ್ತದೆ. ಈಗಲಾದರೂ ಜಿಲ್ಲಾ ಕೇಂದ್ರದಲ್ಲಿ ಒಂದು ಸುಸಜ್ಜಿತ ಗುರುಭವನ ನಿರ್ಮಾಣ ಮಾಡಬೇಕು. ಈಗಿರುವ ಗುರುಭವನ ದುರಸ್ತಿ ಮಾಡಲಾಗದ ರೀತಿಯಲ್ಲಿ ಹಾಳಾಗಿದೆ. ಹೀಗಾಗಿ ಅದೇ ಜಾಗದಲ್ಲಿ ಹೊಸ ಗುರುಭವನ ನಿರ್ಮಾಣ ಮಾಡಬೇಕು’ ಶಿಕ್ಷಕರು ಒತ್ತಾಯಿಸಿದರು.

ಜಿಲ್ಲಾ ಕೇಂದ್ರದ ಗುರುಭವನದ ಪ್ರವೇಶದ್ವಾರದ ಸ್ಥಿತಿ ಹೀಗಿದೆ..
ಚಿತ್ರದುರ್ಗದ ಗುರುಭವನದ ಹೊರನೋಟ
ಹಿರಿಯೂರು ಗುರುಭವನ
ಮೊಳಕಾಲ್ಮೂರು ಗುರುಭವನ
ಜಿಲ್ಲಾ ಕೇಂದ್ರದಲ್ಲಿ ಇಲ್ಲದ ಸುಸಜ್ಜಿತ ಗುರುಭವನ ಶಿಕ್ಷಕರ ಚುಟುವಟಿಕೆಗಳಿಗೆ ಇಲ್ಲವಾದ ಸ್ಥಳ ಶಿಕ್ಷಕರ ಬೆವರ ಹನಿಗೆ ಬೆಲೆಯೇ ಇಲ್ಲವೇ?
ನಾನು ಹೊಸದಾಗಿ ಬಂದಿದ್ದೇನೆ ಗುರುಭವನ ದುರಸ್ತಿ ಪ್ರಯತ್ನ ಎಲ್ಲಿಯವರೆಗೆ ಬಂದಿದೆ ಎಂಬ ಬಗ್ಗೆ ಪರಿಶೀಲಿಸುತ್ತೇನೆ. ಈ ಕುರಿತು ಹಿರಿಯ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ
ನಾಸಿರುದ್ದೀನ್‌ ಡಿಡಿಪಿಐ ಗುರುಭವನ ಸಮಿತಿ ಅಧ್ಯಕ್ಷ
ಜಿಲ್ಲಾ ಕೇಂದ್ರದ ಗುರುಭವನವನ್ನು ತೀರಾ ಕೆಟ್ಟದಾಗಿ ಇಟ್ಟುಕೊಂಡಿರುವುದು ನಾಚಿಕೆಗೇಡಿನ ಸಂಗತಿ. ಗುರುಭವನಗಳು ಚೆನ್ನಾಗಿದ್ದರೆ ಶಿಕ್ಷಕರ ಚಟುವಟಿಕೆಗಳಿಗೆ ಸಹಕಾರಿಯಾಗುತ್ತದೆ. ಇದರಿಂದ ಮಕ್ಕಳಿಗೂ ಒಳ್ಳೆಯದಾಗುತ್ತದೆ
ಎಚ್‌.ಏಕಾಂತಪ್ಪ ಪ್ರಜಾರಕ್ಷಣಾ ವೇದಿಕೆ
ವಾಣಿಜ್ಯ ಮಳಿಗೆಯಾದ ಭವನ
ಶಿವಗಂಗಾ ಚಿತ್ತಯ್ಯ ಚಳ್ಳಕೆರೆ: ಪಠ್ಯ ಪುಸ್ತಕ ಬೋಧನಾ ತರಬೇತಿ ಕಾರ್ಯಾಗಾರ ವಿಶೇಷ ಉಪನ್ಯಾಸ ಸಭೆ ಸಮಾರಂಭ ಸಾಂಸ್ಕೃತಿಕ ಚಟುವಟಿಕೆ ಉದ್ದೇಶಕ್ಕಾಗಿ ಶಿಕ್ಷಕರ ವಂತಿಗೆ ಹಣದಲ್ಲಿ ನಗರದ ಬಿಇಒ ಕಚೇರಿ ಆವರಣದಲ್ಲಿ ನಿರ್ಮಿಸಲಾಗಿರುವ ಗುರು ಭವನ ವಾಣಿಜ್ಯ ಮಳಿಗೆಯಾಗಿ ಮಾರ್ಪಟ್ಟಿದೆ. ಗುರುಭವನ ನಿರ್ಮಾಣ ಸಮಿತಿ ನಿರ್ಲಕ್ಷ್ಯದಿಂದ ಭವನದ ಆವರಣವನ್ನು ಚಾಲಕರು ಕಾರುಗಳ ನಿಲುಗಡೆ ತಾಣವನ್ನಾಗಿ ಮಾಡಿಕೊಂಡಿದ್ದಾರೆ. ಹಾಗಾಗಿ ಸಭೆ ಸಮಾರಂಭ ಶೈಕ್ಷಣಿಕ ಚಟುವಟಿಕೆ ಕೈಗೊಳ್ಳಬೇಕಾದರೆ ಕಲ್ಯಾಣ ಮಂಟಪ ಛತ್ರ ಹಾಗೂ ಸಮುದಾಯ ಭವನಗಳನ್ನು ಬಾಡಿಗೆಗೆ ಪಡೆಯುವುದು ಅನಿವಾರ್ಯವಾಗಿದೆ. ಗುರುಭವನದ ಜಾಗ ಶಿಕ್ಷಣ ಇಲಾಖೆ ಹೆಸರಿಗೆ ಖಾತೆಯಾಗಿಲ್ಲದ ಕಾರಣ ಭವನ ನಿರ್ಮಾಣಕ್ಕೆ ಶಿಕ್ಷಕರ ವೇತನದ ಹಣ ಬಳಕೆ ಮಾಡಲಾಗಿದೆಯೇ ಹೊರತು ಸರ್ಕಾರದಿಂದ ಯಾವುದೇ ಅನುದಾನ ಪಡೆಯಲು ಸಾಧ್ಯವಾಗಿಲ್ಲ ಎಂಬುದು ಶಿಕ್ಷಕರ ಅಭಿಪ್ರಾಯ. ‘ಶಿಕ್ಷಕರ ವಂತಿಗೆ ₹35 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಗುರುಭವನದಲ್ಲಿ ಶೌಚಾಲಯ ಅಡುಗೆಕೋಣೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಪ್ರತಿ ತಿಂಗಳು ₹50000ಕ್ಕೆ ಭವನವನ್ನು ವಾಣಿಜ್ಯ ಉದ್ದೇಶಕ್ಕೆ ಬಾಡಿಗೆಗೆ ನೀಡಲಾಗಿದೆ. ಮುಂದಿನ ದಿನದಲ್ಲಿ ಗುರುಭವನವನ್ನು ಶೈಕ್ಷಣಿಕ ಉದ್ದೇಶಕ್ಕೆ ಬಳಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಹೇಳಿದರು. ‘2004ರಲ್ಲಿ ಗುರುಭವನ ಕಟ್ಟಡ ಕಾಮಗಾರಿ ಪ್ರಾರಂಭಿಸಿ 2010ರಲ್ಲಿ ಪೂರ್ಣಗೊಳಿಸಲಾಯಿತು. ಸ್ಥಗಿತಗೊಂಡಿರುವ ಗುರುಭವನ ಸಮಿತಿಗೆ ಮರು ಚಾಲನೆ ನೀಡಿ ಅಗತ್ಯ ದಾಖಲೆಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಗುರುಭವನ ಕಟ್ಟಡಕ್ಕೆ ಹೆಚ್ಚುವರಿಯಾಗಿ ಶಿಕ್ಷಕರ ಕಲ್ಯಾಣ ನಿಧಿಯಿಂದ ₹50 ಲಕ್ಷ ಅನುದಾನ ದೊರೆಯುತ್ತದೆ. ಈ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ’ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಆರ್.ಮಾರುತೇಶ್ ಹೇಳಿದರು.
ಶಿಕ್ಷಕರ ಲಕ್ಷಾಂತರ ರೂಪಾಯಿ ಹಣ ವ್ಯರ್ಥ ಸುವರ್ಣಾ ಬಸವರಾಜ್
ಹಿರಿಯೂರು: ತಾಲ್ಲೂಕಿನ ಶಿಕ್ಷಕರು ತಮ್ಮ ವೇತನದಲ್ಲಿ ನೀಡಿದ ದೇಣಿಗೆಯಿಂದ 16 ವರ್ಷದ ಹಿಂದೆ ನಿರ್ಮಿಸಿದ್ದ ಗುರುಭವನ ನಿಗದಿತ ಉದ್ದೇಶಕ್ಕೆ ಬಳಕೆಯಾಗದೇ ಅವ್ಯವಸ್ಥೆಯ ಆಗರವಾಗಿದೆ. ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದ ಗೋವಿಂದೇಗೌಡರ ಅವಧಿಯಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದ ಮುಂಭಾಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪ್ರಧಾನ ರಸ್ತೆಗೆ ಹೊಂದಿಕೊಂಡ ಜಾಗವನ್ನು ಗುರುಭವನಕ್ಕೆ ಮಂಜೂರು ಮಾಡಲಾಗಿತ್ತು. ತಾಲ್ಲೂಕಿನ ಎಲ್ಲಾ ವರ್ಗದ ಶಿಕ್ಷಕರು ತಮ್ಮ ವೇತನಕ್ಕೆ ಅನುಸಾರವಾಗಿ ದೇಣಿಗೆ ನೀಡಿದ್ದರು. ಒಂದು–ಒಂದೂವರೆ ವರ್ಷದಲ್ಲಿ ಕಾಮಗಾರಿ ಮುಗಿಯುತ್ತದೆ ಎಂದು ಭಾವಿಸಿದ್ದ ಶಿಕ್ಷಕರಿಗೆ ಗುರುಭವನ ಇಂದಿಗೂ ಅಪೂರ್ಣವಾಗಿ ಉಳಿದಿರುವುದು ಬೇಸರದ ಸಂಗತಿಯಾಗಿದೆ. ಕೆಲವು ಶಿಕ್ಷಕರಂತೂ ಗುರುಭವನದ ಹೆಸರು ತೆಗೆದರೆ ಸಾಕು ಹತಾಶೆ ವ್ಯಕ್ತಪಡಿಸುತ್ತಾರೆ. ನೆಲಮಾಳಿಗೆಯಲ್ಲಿ ಭೋಜನಾಲಯ ಮೊದಲ ಮಹಡಿಯಲ್ಲಿ ವಿಸ್ತಾರವಾದ ಸಭಾಂಗಣ ಹೊಂದಿರುವ ಗುರುಭವನ ಅವ್ಯವಸ್ಥೆಯ ಆಗರವಾಗಿದೆ. ಶಾಶ್ವತ ವಿದ್ಯುತ್ ಸಂಪರ್ಕವಿಲ್ಲ ನೀರಿನ ವ್ಯವಸ್ಥೆ ಸರಿ ಇಲ್ಲ ಸಭಾಂಗಣದಲ್ಲಿ ಧ್ವನಿ ಪ್ರತಿಧ್ವನಿಸುವ (ಎಕೋ) ಕಾರಣ ಅತಿಥಿಗಳು ಮಾತನಾಡಿದ್ದು ಕೇಳುವುದಿಲ್ಲ. ನೆಲಮಹಡಿ ಸಂಪೂರ್ಣ ಮೆಗಾ ಸೇಲ್ ವ್ಯಾಪಾರಿಗಳಿಗೆ ಸೀಮಿತವಾಗಿದ್ದರೆ ಪ್ರವೇಶದ್ವಾರದ ಆವರಣ ಸಾರ್ವಜನಿಕರ ದ್ವಿಚಕ್ರ ವಾಹನಗಳ ನಿಲುಗಡೆಗೆ ಬಳಕೆಯಾಗುತ್ತಿದೆ. ಶಾಶ್ವತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಕಿಟಕಿ–ಬಾಗಿಲುಗಳು ದುರಸ್ತಿಯಾಗಬೇಕು. ಪ್ರತಿಧ್ವನಿ ಉಂಟಾಗದಂತೆ ನಿಯಂತ್ರಿಸಬೇಕು. ಗಾಳಿ–ಬೆಳಕಿನ ವ್ಯವಸ್ಥೆ ಮಾಡಬೇಕು. ಅಡುಗೆ ಮನೆಗೆ ಬೇಕಿರುವ ಸಾಮಗ್ರಿಗಳನ್ನು ತರಿಸಬೇಕು. ಗುರುಭವನವನ್ನು ಸರಿಯಾದ ರೂಪಕ್ಕೆ ತರಲು ಕನಿಷ್ಟ ₹80 ಲಕ್ಷ ಅಗತ್ಯವಿದೆ ಎಂದು ಶಿಕ್ಷಕರು ಹೇಳುತ್ತಾರೆ.
ಶಿಕ್ಷಕರ ಸಂಘದ ಹೆಸರಲ್ಲಿಲ್ಲ ಜಾಗ ಕೊಂಡ್ಲಹಳ್ಳಿ ಜಯಪ್ರಕಾಶ
ಮೊಳಕಾಲ್ಮುರು: ಇಲ್ಲಿನ ಕೆಇಬಿ ವೃತ್ತದಲ್ಲಿರುವ ಗುರುಭವನದ ಸ್ಥಳವು ಇದುವರೆಗೂ ಶಿಕ್ಷಕರ ಸಂಘದ ಹೆಸರಿಗೆ ನೋಂದಣಿ ಆಗದಿರುವುದು ಗುರುಭವನ ಅಭಿವೃದ್ಧಿಗೆ ಕಂಟಕವಾಗಿ ಪರಿಣಮಿಸಿದೆ ಎಂಬ ಮಾತು ಶಿಕ್ಷಕ ವಲಯದಲ್ಲಿದೆ.‌‌ ‘2004-05ನೇ ಸಾಲಿನಲ್ಲಿ ಸರ್ಕಾರಿ ಜ್ಯೂನಿಯರ್‌ ಕಾಲೇಜು ಆವರಣದಲ್ಲಿ ಗುರುಭವನ ನಿರ್ಮಿಸಲಾಗಿದೆ. ಈ ಸ್ಥಳವು ದಾನಿಯೊಬ್ಬರು ಶಾಲೆ ಕಟ್ಟಲು ನೀಡಿದ್ದ ಸ್ಥಳ. ಈ ಸ್ಥಳವನ್ನು ಗುರುಭವನಕ್ಕೆ ಬಿಟ್ಟುಕೊಡಲು ಅವರ ಕುಟುಂಬ ಸದಸ್ಯರೊಬ್ಬರು ಒಪ್ಪದ ಕಾರಣ ನೋಂದಣಿ ಸಾಧ್ಯವಾಗಿಲ್ಲ. ಇದು ಸರ್ಕಾರ ಮತ್ತು ಶಿಕ್ಷಕರ ಸಂಘಗಳಿಂದ ಯಾವುದೇ ಅನುದಾನ ಬರಲು ಅಡ್ಡಿಯಾಗಿದೆ’ ಎಂದು ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಈರಣ್ಣ ಮಾಹಿತಿ ನೀಡಿದರು. ಶಿಕ್ಷಕ ಕಲ್ಯಾಣ ನಿಧಿಯಿಂದ ಭವನದ ಅಭಿವೃದ್ಧಿ ಕಾರ್ಯಗಳಿಗೆ ₹25 ಲಕ್ಷ ನೀಡಲು ಅವಕಾಶವಿದೆ. ಭವನದ ಸ್ಥಳ ಸಂಘದ ಹೆಸರಿಗೆ ಇಲ್ಲದ ಕಾರಣ ಅನುದಾನ ನೀಡುತ್ತಿಲ್ಲ. ಪಟ್ಟಣ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳು ಸ್ಥಳದ ಸಮಸ್ಯೆ ತಿಳಿಗೊಳಿಸಿ ಸಂಘದ ಹೆಸರಿಗೆ ಕೊಡಿಸಲು ಸಹಕಾರ ನೀಡಬೇಕು. ಭವನದಲ್ಲಿ ಸುಸಜ್ಜಿತ ಸೌಲಭ್ಯಗಳು ಇದ್ದಲ್ಲಿ ಮದುವೆ ಸೇರಿದಂತೆ ಇತರ ಸಮಾರಂಭಗಳಿಗೆ ಬಾಡಿಗೆ ಕೊಟ್ಟಲ್ಲಿ ಸಂಘಕ್ಕೆ ಆದಾಯ ಬರುತ್ತದೆ. ವಿವಿಧ ಚಟುವಟಿಕೆ ಕೈಗೊಳ್ಳಲು ಇದರಿಂದ ಸಾಧ್ಯವಾಗಲಿದೆ’ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ್ ಮನವಿ ಮಾಡಿದರು. ಗುರುಭವನ ಆವರಣದಲ್ಲಿ ಶೌಚಾಲಯ ವ್ಯವಸ್ಥೆ ಊಟದ ಸಭಾಂಗಣ ಅಡುಗೆಮನೆ ನಿರ್ಮಾಣ ಭವನದ ಮುಂಭಾಗದ ಆವರಣದ ಅಭಿವೃದ್ಧಿ ಕಾರ್ಯಗಳು ಶೀಘ್ರ ಆಗಬೇಕಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.