ADVERTISEMENT

ಅಲ್ಪ ನೀರಿನಲ್ಲಿ ಗಮನ ಸೆಳೆವ ವೈವಿಧ್ಯಮಯ ಬೆಳೆ

ಭಾರತೀಯ ಏರ್‌ಫೋರ್ಸ್‌ ಸಿಗ್ನಲರ್‌ ಆರ್‌.ಎಸ್‌. ರಮೇಶ್‌ ಕೃಷಿ ಕಾಯಕ

ಎಸ್.ಸುರೇಶ್ ನೀರಗುಂದ
Published 29 ಸೆಪ್ಟೆಂಬರ್ 2021, 5:04 IST
Last Updated 29 ಸೆಪ್ಟೆಂಬರ್ 2021, 5:04 IST
ಹೊಸದುರ್ಗ ತಾಲ್ಲೂಕಿನ ಬುರುಡೇಕಟ್ಟೆ ಬಳ್ಳೇಕೆರೆ ಗ್ರಾಮದ ಈಶ್ವರಪ್ಪ ಜಮೀನಿನಲ್ಲಿ ಬೆಳೆದಿರುವ ಅರಣ್ಯ ಹಾಗೂ ತೋಟಗಾರಿಕೆ ಬೆಳೆ (ಎಡಚಿತ್ರ).
ಹೊಸದುರ್ಗ ತಾಲ್ಲೂಕಿನ ಬುರುಡೇಕಟ್ಟೆ ಬಳ್ಳೇಕೆರೆ ಗ್ರಾಮದ ಈಶ್ವರಪ್ಪ ಜಮೀನಿನಲ್ಲಿ ಬೆಳೆದಿರುವ ಅರಣ್ಯ ಹಾಗೂ ತೋಟಗಾರಿಕೆ ಬೆಳೆ (ಎಡಚಿತ್ರ).   

ಹೊಸದುರ್ಗ: ಭಾರತೀಯ ಏರ್‌ಫೋರ್ಸ್‌ ಸಿಗ್ನಲರ್‌ ಆಗಿ
ಕಾರ್ಯ ನಿರ್ವಹಿಸುತ್ತಿರುವ
ಆರ್‌.ಎಸ್‌. ರಮೇಶ್‌ ಅವರು ತಾಲ್ಲೂಕಿನ ಬುರುಡೇಕಟ್ಟೆ ಬಳ್ಳೇಕೆರೆ ಗ್ರಾಮದ ಅವರ ಮಾವ ಈಶ್ವರಪ್ಪ ಅವರ 4 ಎಕರೆ ಜಮೀನಿನಲ್ಲಿ ಅಲ್ಪ ನೀರಿನಲ್ಲಿ ಬೆಳೆದಿರುವ ವೈವಿಧ್ಯಮಯ ಬೆಳೆ ಗಮನ ಸೆಳೆಯುತ್ತಿದೆ.

ಈಶ್ವರಪ್ಪ ಅವರು 4 ಎಕರೆ ಜಮೀನಿಗೂ ತೆಂಗಿನ ಸಸಿ ನಾಟಿ ಮಾಡಲಿಕ್ಕೆ ಮುಂದಾದಾಗ ರಮೇಶ್‌ ಅವರನ್ನು ತಡೆದರು. ಮೊದಲಿಗೆ ಜಮೀನಿನ ತುಂಬೆಲ್ಲ ಇದ್ದ ಬಂಡೆ ಕಲ್ಲುಗಳನ್ನು ತೆಗೆಸಿ ಭೂಮಿ ಸಮತಟ್ಟು ಮಾಡಿಸಿದರು. ಬದುವಿನ ಸುತ್ತಲೂ 3 ಅಡಿ ಟ್ರೆಂಚ್‌ ಹೊಡೆಸಿದ್ದಾರೆ. ಇದರಿಂದಾಗಿ ಜಮೀನಿಗೆ ಬೀಳುವ ಮಳೆನೀರು ಮುಂದೆ ಹರಿಯದೇ ಇಂಗುತ್ತಿದೆ. ತೋಟಗಾರಿಕೆ ಬೆಳೆ ಬೆಳೆಯಲು ಕೊಳವೆಬಾವಿ ಕೊರೆಸಿದಾಗ ಬರೀ ಒಂದೂವರೆ ಇಂಚು ಮಾತ್ರ ನೀರು ಸಿಕ್ಕಿದೆ. ಈ ಅಲ್ಪ ನೀರಿನಲ್ಲಿ ವೈವಿಧ್ಯಮಯ ಬೆಳೆ ಬೆಳೆಯಲು ಪಟ್ಟಣದ ತೋಟಗಾರಿಕೆ ಇಲಾಖೆಯ ಹಿಂದಿನ ಹಿರಿಯ ಸಹಾಯಕ ನಿರ್ದೇಶಕ ಪ್ರಸನ್ನ ಅವರನ್ನು ಸಂಪರ್ಕಿಸಿ ಅಗತ್ಯ ಸಲಹೆ ಪಡೆದಿದ್ದಾರೆ.

2018ರ ಜುಲೈನಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಬದುವಿನ ಸುತ್ತಲೂ 5 ಅಡಿ ಜಾಗ ಬಿಟ್ಟು 148 ತೆಂಗಿನ ಸಸಿ ನಾಟಿ ಮಾಡಿದ್ದಾರೆ. ಮಧ್ಯದಲ್ಲಿ 10X10 ಅಡಿ ವಿಸ್ತೀರ್ಣದಲ್ಲಿ 750 ಶ್ರೀಗಂಧ ಸಸಿ ನಾಟಿ ಮಾಡಿದ್ದಾರೆ. ಶ್ರೀಗಂಧ ಪರಾವಲಂಬಿ ಸಸಿ ಆಗಿರುವುದರಿಂದ ಅದರ ಮಧ್ಯೆ ಕಡಿಮೆ ನೀರಿನಲ್ಲಿ ಬೆಳೆಯುವ ಲಕ್ಷ್ಮಣಫಲ 200, ಸೀತಾಫಲ 50, ಹನುಮಫಲ 30, ರಾಮಫಲ 20, ರಕ್ತಚಂದನ 300, ಮಾವು 20, ಮೂಸಂಬಿ 40, ಕಿತ್ತಳೆ ಹಾಗೂ ಬಟರ್‌ಫ್ರೂಟ್‌ 20, ತೇಗ 100, ಬೀಟೆ 30, ಹೆಬ್ಬೇವು 30, ಹಲಸು 10, ಸಪೋಟಾ 10, ನಿಂಬೆ 12 ಸಸಿಗಳನ್ನು ನಾಟಿ ಮಾಡಿದ್ದಾರೆ. ಸಮಗ್ರ ಕೃಷಿ ಪರಿಚಯದೊಂದಿಗೆ ಅರಣ್ಯ ಹಾಗೂ ತೋಟಗಾರಿಕೆ ಬೆಳೆ ಮಿಶ್ರಣ ಮಾಡಿ ಜಮೀನು ಸ್ವಲ್ಪವೂ ವ್ಯರ್ಥ ಮಾಡದೇ ಬಳಕೆ ಮಾಡಿಕೊಂಡಿರುವುದು ವಿಶೇಷ.

ADVERTISEMENT

ಈ ಎಲ್ಲ ತೋಟಗಾರಿಕೆ ಹಾಗೂ ಅರಣ್ಯ ಗಿಡಗಳಿಗೆ ಒಮ್ಮೆಯೂ ರಾಸಾಯನಿಕ ಗೊಬ್ಬರ ಹಾಕಿಲ್ಲ, ಔಷಧವನ್ನು ಸಿಂಪಡಿಸಿಲ್ಲ. ಮಲ್ಚಿಂಗ್‌ ಮಾಡಿರುವುದರಿಂದ ನೀರು ಆವಿಯಾಗುವುದು ತಡೆಯುತ್ತಿದೆ. ಪ್ರತಿ ವರ್ಷ ಒಣಗಿದ ತೆಂಗಿನ ಗರಿ ಹಾಗೂ ಕೃಷಿ ತ್ಯಾಜ್ಯವನ್ನು ಜಮೀನಿನ ಸುತ್ತಲೂ ಹೊಡೆಸಿರುವ ಟ್ರೆಂಚ್‌ ಗುಂಡಿಗೆ ಸುರಿಯುತ್ತಿದ್ದು ಅದು ನೈಸರ್ಗಿಕ ಗೊಬ್ಬರವಾಗುತ್ತಿದೆ. ನಂತರ ಅದನ್ನು ಗಿಡದ ಬುಡಕ್ಕೆ ಹಾಕಲಾಗುತ್ತಿದೆ. ಕುಟುಂಬದ ಸದಸ್ಯರೆಲ್ಲರ ವೈಯಕ್ತಿಕ ಆರೋಗ್ಯ ಕಾಪಾಡುವುದು ಹಾಗೂ ಆರೋಗ್ಯಕರ ಹಣ್ಣು ಬೆಳೆದು ಸಮಾಜಕ್ಕೆ ಕೊಡಬೇಕು ಎಂಬ ಉದ್ದೇಶದಿಂದ ಸಂಪೂರ್ಣ ಸಾವಯವ ಪದ್ಧತಿಯಲ್ಲಿ ವಿಭಿನ್ನ ಬಗೆಯ ಹಣ್ಣುಗಳನ್ನು ಬೆಳೆಯಲಾಗುತ್ತಿದೆ. 2016ರಿಂದ ಲಕ್ಷ್ಮಣಫಲ ಹಣ್ಣು ಬಿಡುತ್ತಿದ್ದು, ನಾವು ತಿಂದಿದ್ದೇವೆ. ಬಾಯಿಗೆ ರುಚಿ, ಆರೋಗ್ಯ ಪಾಲನೆಗೆ ಹಿತ ಎಂಬ ಅನುಭವವಾಗಿದೆ. ಕೃಷಿ ಜೊತೆಗೆ ಗಿರ್‌, ಜರ್ಸಿ ತಳಿಯ ಹಸುಗಳನ್ನು ಸಾಕಿ ಹೈನುಗಾರಿಕೆಯನ್ನೂ ಮಾಡಲಾಗುತ್ತಿದೆ.

‘ನಾನು ದೆಹಲಿಯಲ್ಲಿಯೇ ಇದ್ದು ದೂರವಾಣಿಯ ಮೂಲಕವೇ ಅಗತ್ಯ ಸಲಹೆ ನೀಡುತ್ತಿದ್ದೇನೆ. ಇಷ್ಟೆಲ್ಲ ಅರಣ್ಯ ಹಾಗೂ ತೋಟಗಾರಿಕೆ ಬೆಳೆ ಬೆಳೆಯಲು ನನ್ನ ಪತ್ನಿ ಬಿ.ಇ. ಶೃತಿ, ಮಾವ ಈಶ್ವರಪ್ಪ, ಅತ್ತೆ ವಿನೋದಮ್ಮ ಸಹಕಾರ ಮುಖ್ಯವಾಗಿದೆ. ಕಳೆದ ವರ್ಷ ಲಾಕ್‌ಡೌನ್‌ ಆಗಿದ್ದಾಗ ಪತ್ನಿ 6 ತಿಂಗಳು ಬಳ್ಳೇಕೆರೆಯಲ್ಲಿದ್ದು, ಬೆಳೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದರಿಂದ ಉತ್ಕೃಷ್ಟವಾಗಿ ಬೆಳೆದಿವೆ’ ಎಂದು ಆರ್‌.ಎಸ್‌. ರಮೇಶ್‌ ವಿವರಿಸಿದರು.

ಲಕ್ಷ್ಮಣಫಲ ಹಣ್ಣಿನ ವಿಶೇಷ

2020ರಲ್ಲಿ 15 ಕೆ.ಜಿ ಲಕ್ಷ್ಮಣಫಲ ಹಣ್ಣು ಸಿಕ್ಕಿತ್ತು. ಆಗ ಆನ್‌ಲೈನ್‌ ಮೂಲಕ ದೆಹಲಿ, ಜಲಂಧರ್‌, ಲಕನೌ, ಚಂಡಿಗಡಕ್ಕೆ ಬುಕ್‌ ಮಾಡಿ ಪ್ರತಿ ಕೆ.ಜಿ. ಲಕ್ಷ್ಮಣಫಲವನ್ನು ₹ 200 ಹಾಗೂ ಆ ಗಿಡದ ಎಲೆಯನ್ನು ₹ 160ರಂತೆ ಮಾರಾಟ ಮಾಡಿದ್ದೆ. ಈ ಹಣ್ಣು ಹಾಗೂ ಎಲೆಯಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿದೆ. ಹೀಗಾಗಿ, ಕ್ಯಾನ್ಸರ್‌ ರೋಗ ನಿವಾರಣೆಗೆ ಹೆಚ್ಚಾಗಿ ಲಕ್ಷ್ಮಣಫಲ ಬಳಸುತ್ತಾರೆ ಎನ್ನುತ್ತಾರೆ ರಮೇಶ್‌.

ವಾರ್ಷಿಕ ₹ 5 ಲಕ್ಷ ಆದಾಯ ನಿರೀಕ್ಷೆ

‘ಲಕ್ಷ್ಮಣಫಲ ಸಸಿ ನಾಟಿ ಮಾಡಿದ 3 ವರ್ಷಗಳ ನಂತರ ಹಣ್ಣು ಬಿಡಲು ಆರಂಭವಾಗುತ್ತದೆ. ಪ್ರತಿ ಲಕ್ಷ್ಮಣಫಲ ಗಿಡದಲ್ಲಿ ಸೀಜನ್‌ನಲ್ಲಿ ಸುಮಾರು 10 ಕೆ.ಜಿ ಹಣ್ಣು ಸಿಗುತ್ತದೆ. 160 ಗಿಡಕ್ಕೆ 1,600 ಕೆ.ಜಿ ಹಣ್ಣು ಸಿಗುತ್ತದೆ. ಈಗಿನ ದರ ₹ 200 ಸಿಕ್ಕರೂ ₹ 3.20 ಲಕ್ಷ ಒಂದು ಸೀಜನ್‌ಗೆ ಸಿಗುತ್ತದೆ. ವರ್ಷದಲ್ಲಿ 9 ತಿಂಗಳು ಹಣ್ಣು ಬಿಡುತ್ತದೆ. ಪ್ರತಿ ವರ್ಷ ಒಂದು ಗಿಡದಲ್ಲಿ ಕನಿಷ್ಠ 5 ಕೆ.ಜಿ ಎಲೆ ಮಾರಾಟ ಮಾಡಿದರೂ ₹ 1.20 ಲಕ್ಷ ಆದಾಯ ಸಿಗುತ್ತದೆ. ಇನ್ನೂ 2 ವರ್ಷ ಕಳೆದ ಮೇಲೆ ಲಕ್ಷ್ಮಣಫಲ ಬೆಳೆಯಿಂದ ವಾರ್ಷಿಕ ₹ 5 ಲಕ್ಷ ನಿರೀಕ್ಷೆ ಮಾಡುತ್ತಿದ್ದೇನೆ. ಹಣ್ಣುಗಳ ಮೌಲ್ಯವರ್ಧನೆ ಮಾಡಿದರೆ ಇನ್ನೂ ಹೆಚ್ಚು ಆದಾಯ ಸಿಗುತ್ತದೆ. ತೆಂಗು, ಮಾವು, ಹಲಸು, ಮೂಸಂಬಿ, ಬಟರ್‌ಫ್ರೂಪ್‌ ಸೇರಿ ಇನ್ನಿತರ ಬೆಳೆಗಳಿಂದಲೂ ಲಕ್ಷಾಂತರ ರೂಪಾಯಿ ನಿಯಮಿತವಾಗಿ ವಾರ್ಷಿಕ ಆದಾಯ ಬರುತ್ತದೆ. 15 ವರ್ಷ ಕಳೆದ ಮೇಲೆ ಶ್ರೀಗಂಧ ಮರದಿಂದ
₹ 7 ಕೋಟಿ ಆದಾಯ ಬರುವ ನಿರೀಕ್ಷೆ ಇದೆ’ ಎನ್ನುತ್ತಾರೆ ಬೆಳೆಗಾರ.

............

ವಿವಿಧ ಹಣ್ಣುಗಳನ್ನು ಪ್ಯಾಕ್‌ಹೌಸ್‌ ಹಾಗೂ ಮೌಲ್ಯವರ್ಧನೆ ಮಾಡಲು ತೋಟಗಾರಿಕೆ ಇಲಾಖೆಯ ಸಹಾಯಧನದ ನಿರೀಕ್ಷೆಯಲ್ಲಿ ಇದ್ದೇವೆ.
– ಆರ್‌.ಎಸ್‌. ರಮೇಶ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.