ಚಿತ್ರದುರ್ಗ: ಜಿಲ್ಲೆಯಾದ್ಯಂತ ನೂರಾರು ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿದ್ದು, ದುರಸ್ತಿ ರಿಪೇರಿ ಕಾಣದಾಗಿವೆ. ಘಟಕಗಳನ್ನು ನಿರ್ವಹಣೆ ಮಾಡುತ್ತಿದ್ದ ಖಾಸಗಿ ಏಜೆನ್ಸಿಗಳು ಹೇಳದೇ ಕೇಳದೇ ಕಾಲ್ಕಿತ್ತಿದ್ದು, ಮುಂದೆ ಅವುಗಳನ್ನು ನಿರ್ವಹಣೆ ಮಾಡುವವರು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ.
ಅಸಮರ್ಪಕ ನಿರ್ವಹಣೆಯಿಂದಾಗಿ ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳಾಗಿವೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮೀಣ ಜನರಿಗೆ ಶುದ್ಧ ನೀರು ಸಿಗುತ್ತಿಲ್ಲ. ಹೆಸರಿಗಷ್ಟೇ ಆರ್ಒ ಪ್ಲಾಂಟ್ಗಳಿದ್ದು, ಅಲ್ಲಿ ನೀರು ಬರುತ್ತಿಲ್ಲ. ಪ್ರತಿ ಗ್ರಾಮದಲ್ಲೂ ಇಂಥದ್ದೇ ಪರಿಸ್ಥಿತಿ ಇದೆ. ಅವುಗಳನ್ನು ದುರಸ್ತಿ ಮಾಡುವವರು ಯಾರು ಎಂಬ ಪ್ರಶ್ನೆಗೆ ಉತ್ತರ ದೊರೆಯುತ್ತಿಲ್ಲ.
ಬಹುತೇಕ ಘಟಕಗಳಿಗೆ ನೀರಿನ ಸಂಪರ್ಕ ಕಡಿತಗೊಂಡು ಅವು ಕಾರ್ಯನಿರ್ವಹಿಸುತ್ತಿಲ್ಲ. ಜೊತೆಗೆ ಸಾವಿರಾರು ರೂಪಾಯಿ ವಿದ್ಯುತ್ ಬಾಕಿ ಉಳಿಸಿಕೊಂಡ ಕಾರಣ ಘಟಕಗಳಿಗೆ ಪೂರೈಸಿದ್ದ ವಿದ್ಯುತ್ ಸಂಪರ್ಕವನ್ನು ಬೆಸ್ಕಾಂ ಅಧಿಕಾರಿಗಳು ಕಡಿತ ಮಾಡಿದ್ದಾರೆ. ಘಟಕ ಆರಂಭವಾಗಿ ವರ್ಷ ಕಳೆಯುವುದರೊಳಗೆ ಘಟಕಗಳು ಬಂದ್ ಆಗಿದ್ದು, ಶುದ್ಧ ನೀರು ಮರೀಚಿಕೆಯಾಗಿದೆ.
ಅಧಿಕಾರಿಗಳು, ಜನಪ್ರತಿನಿಧಿಗಳು ಹಳ್ಳಿಗೆ ಹೋದರೆ ಜನರು ಮುಗಿ ಬೀಳುತ್ತಿದ್ದು, ಶುದ್ಧ ನೀರಿನ ಘಟಕ ದುರಸ್ತಿ ಮಾಡಿಸಿಕೊಡಿ ಎಂದು ಕೇಳುತ್ತಿದ್ದಾರೆ. ಘಟಕಗಳ ನಿರ್ವಹಣೆಗೆ ಖಾಸಗಿ ಏಜೆನ್ಸಿಗಳು ಲಕ್ಷಾಂತರ ರೂಪಾಯಿ ಹಣ ಪಡೆಯುತ್ತಿವೆ. ಕೆಲವೆಡೆ ನೀರು ಬರುತ್ತಿಲ್ಲ, ಯಂತ್ರ ಕೆಟ್ಟು ಹೋಗಿವೆ. ಆದರೂ ಖಾಸಗಿ ಏಜೆನ್ಸಿಗಳು ನಿರ್ವಹಣಾ ವೆಚ್ಚ ಪಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.
ಜಿಲ್ಲೆಯಲ್ಲಿ 1,055 ಶುದ್ಧ ನೀರಿನ ಘಟಕಗಳಿವೆ. ಪ್ರತಿ ಹಳ್ಳಿಯಲ್ಲಿ ಕನಿಷ್ಠ 1–2 ಘಟಕಗಳನ್ನು ಕಾಣಬಹುದು. ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಅಧಿಕಾರಿಗಳು ನೀಡುವ ಮಾಹಿತಿ ಅನುಸಾರ ಜಿಲ್ಲೆಯಲ್ಲಿ 114 ಘಟಕಗಳು ಮಾತ್ರ ಹಾಳಾಗಿದ್ದು, ಉಳಿದವು ಕಾರ್ಯನಿರ್ವಹಣೆ ಮಾಡುತ್ತಿವೆ. ಆದರೆ ವಾಸ್ತವವಾಗಿ ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ನೀರಿನ ಘಟಕಗಳು ಕೆಟ್ಟು ಹೋಗಿವೆ.
ಶುದ್ಧ ನೀರಿನ ಘಟಕಗಳು ಕೆಟ್ಟು ಹೋಗಿರುವುದಕ್ಕೆ ಖಾಸಗಿ ಏಜೆನ್ಸಿಗಳ ನಿರ್ವಹಣಾ ಅವಧಿ ಮುಕ್ತಾಯಗೊಂಡಿರುವುದು ಮುಖ್ಯ ಕಾರಣ. ನಿಯಮಾನುಸಾರ ಖಾಸಗಿ ಏಜೆನ್ಸಿಗಳ ನಿರ್ವಹಣಾ ಅವಧಿ ಮುಕ್ತಾಯಗೊಂಡ ನಂತರ ಅವುಗಳನ್ನು ಸ್ಥಳೀಯ ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಬೇಕು. ನಂತರ ಅವುಗಳನ್ನು ತಾಲ್ಲೂಕು ಪಂಚಾಯಿತಿ ಸಹಕಾರದೊಂದಿಗೆ ಗ್ರಾಮ ಪಂಚಾಯಿತಿಗಳೇ ನಿರ್ವಹಣೆ ಮಾಡಬೇಕು.
ಆದರೆ ಬಹುತೇಕ ಶುದ್ಧ ನೀರಿನ ಘಟಕಗಳನ್ನು ಗ್ರಾಮ ಪಂಚಾಯಿತಿಗಳು ಹಸ್ತಾಂತರ ಮಾಡಿಸಿಕೊಂಡಿಲ್ಲ. ಖಾಸಗಿ ಏಜೆನ್ಸಿಗಳು ಕಾರ್ಯನಿರ್ವಹಣಾ ಅವಧಿಯಲ್ಲೇ ಹಸ್ತಾಂತರ ಮಾಡಬೇಕು. ಅದಕ್ಕೂ ಮೊದಲು ಯಂತ್ರೋಪಕರಣಗಳು ಸುಸ್ಥಿತಿಯಲ್ಲಿರಬೇಕು. ವಿದ್ಯುತ್ ಬಿಲ್ ಪಾವತಿ ಮಾಡಿರಬೇಕು.
ಆದರೆ ಸದ್ಯದ ಪರಿಸ್ಥಿತಿಯಲ್ಲಿ ಆರ್ಒಗಳು ಹಾಳಾಗಿವೆ. ವಿದ್ಯುತ್ ಬಿಲ್ ಬಾಕಿ ಉಳಿದಿದ್ದು, ದುರಸ್ತಿಯಾಗದ ಆರ್ಒ ಘಟಕಗಳನ್ನು ಪಡೆಯಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಿದ್ಧರಿಲ್ಲ.
ಚಿತ್ರದುರ್ಗ ನಗರದಲ್ಲೇ 20ಕ್ಕೂ ಹೆಚ್ಚು ಆರ್ಒ ಘಟಕ ಹಾಳಾಗಿದ್ದು, ಜನರು ಶುದ್ಧ ನೀರಿಗೆ ಪರದಾಡುವಂತಾಗಿದೆ. ನಗರಸಭೆ ವಿವಿಧ ಬಡಾವಣೆಗಳಿಗೆ 3–4 ದಿನಕ್ಕೊಮ್ಮೆ ನೀರು ಪೂರೈಕೆ ಮಾಡುತ್ತಿದ್ದು, ಕುಡಿಯುವ ನೀರಿಗೆ ಕೊರತೆ ಉಂಟಾಗಿದೆ. ನಗರಕ್ಕೆ ವಿವಿ ಸಾಗರ, ಶಾಂತಿ ಸಾಗರದಿಂದ ನೀರು ಪಡೆಯಲಾಗುತ್ತಿದೆ. ಪೈಪ್ಲೈನ್ ವ್ಯವಸ್ಥೆ ಬೇಡಿಕೆಗಿಂತಲೂ ಕಡಿಮೆ ನೀರು ಪೂರೈಕೆ ಮಾಡುತ್ತಿರುವ ಕಾರಣ ನೀರಿನ ಕೊರತೆ ಇದೆ. ಶುದ್ಧ ಕುಡಿಯುವ ನೀರಿನ ಘಟಕಗಳೂ ಹಾಳಾಗಿದ್ದು, ಕೊರತೆ ಮತ್ತಷ್ಟು ಹೆಚ್ಚಳವಾಗಿದೆ.
ಈಚೆಗೆ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ‘ಅಧಿಕಾರಿಗಳು ಈ ವಿಷಯದಲ್ಲಿ ಏಜೆನ್ಸಿಗಳ ಮೇಲೆ ದೂರು ಹೇಳುವ ಬದಲು ಸಮಸ್ಯೆ ಬಗೆಹರಿಸಲು ಸ್ಥಳೀಯವಾಗಿ ಪರಿಹಾರ ಕಂಡುಕೊಳ್ಳಬೇಕು. ಡಿಎಂಎಫ್ ಅಥವಾ 15ನೇ ಹಣಕಾಸು ಯೋಜನೆ ಅಡಿಯಾದರೂ ಆರ್ಒ ಘಟಕಗಳನ್ನು ನಿರ್ವಹಣೆ ಮಾಡಬೇಕು’ ಎಂದು ಸೂಚಿಸಿದ್ದರು.
ಪಾಳು ಕಟ್ಟಡಗಳಾದ ಆರ್ಒ ಘಟಕಗಳು ನೀರು ಪೂರೈಕೆ ಇಲ್ಲ, ವಿದ್ಯುತ್ ಬಿಲ್ ಬಾಕಿ ಕೆಟ್ಟು ಹೋದ ಯಂತ್ರಗಳು, ಬಾರದ ನೀರು
ಆರ್ಒ ಘಟಕಗಳ ನಿರ್ವಹಣೆ ಮಾಡುತ್ತಿದ್ದ ಏಜೆನ್ಸಿಗಳ ಅವಧಿ ಮುಗಿದಿದೆ. ಮುಂದೆ ಅವುಗಳ ನಿರ್ವಹಣೆ ಕುರಿತಂತೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕಾಗಿದೆ.ದಯಾನಂದ್ ಇಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ
ದುರಸ್ತಿ ಇಲ್ಲದೇ ಕೆಲ ಆರ್ಒ ಘಟಕಗಳು ಪಾಳು ಬಿದ್ದಿವೆ. ಇನ್ನು ಕೆಲವು ಅನೈತಿಕ ಚಟುವಟಿಕೆಯ ಕೇಂದ್ರವಾಗಿ ಮಾರ್ಪಟ್ಟಿವೆ. ಸರ್ಕಾರ ವೆಚ್ಚ ಮಾಡಿದ ಲಕ್ಷಾಂತರ ರೂಪಾಯಿ ಹೊಳೆಯಲ್ಲಿ ಹಾಕಿದಂತಾಗಿದೆ.ನಿಂಗಮ್ಮ ಚಳ್ಳಕೆರೆ
ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಶೇ 40ಕ್ಕೂ ಹೆಚ್ಚು ಘಟಕಗಳು ಕೆಟ್ಟು ನಿಂತಿವೆ. ಉಪ್ಪಿನಾಂಶ ಹೆಚ್ಚು ನೀರು ಇರುವುದರಿಂದ ಫಿಲ್ಟರ್ಗಳು ಬೇಗ ಹಾಳಾಗುತ್ತಿದ್ದು ಗುಣಮಟ್ಟದ ಸಾಮಗ್ರಿ ಬಳಸದಿರುವುದು ಘಟಕಗಳು ಹಾಳಾಗಲು ಕಾರಣ.ರವಿಕುಮಾರ್ ಮೊಳಕಾಲ್ಮುರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.