ಹೊಳಲ್ಕೆರೆ: ‘ಭಾರತೀಯ ಸೈನ್ಯ ಸೇರುವ ಮೂಲಕ ದೇಶ ಸೇವೆ ಮಾಡಬೇಕು’ ಎಂದು ನಿವೃತ್ತ ಯೋಧ ಪಿ.ಷಣ್ಮುಖಪ್ಪ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸೇವೆಯಿಂದ ನಿವೃತ್ತರಾಗಿ ಶನಿವಾರ ಸ್ವಗ್ರಾಮ ತಾಳ್ಯಕ್ಕೆ ವಾಪಸ್ಸಾದಾಗ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
‘ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುವುದು ಪುಣ್ಯದ ಕೆಲಸ. ಮಕ್ಕಳಿಗೆ ಚಿಕ್ಕಂದಿನಿಂದಲೇ ದೇಶಪ್ರೇಮ, ರಾಷ್ಟ್ರೀಯ ಭಾವೈಕ್ಯದ ಗುಣಗಳನ್ನು ಬೆಳೆಸಬೇಕು. ನಾನು ಜಮ್ಮು– ಕಾಶ್ಮೀರದಲ್ಲಿ ಸೈನಿಕನಾಗಿ ಕರ್ತವ್ಯ ನಿರ್ವಹಿಸಿದ್ದು, ಹಲವು ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದೆ. ಶತ್ರುಗಳು, ಭಯೋತ್ಪಾದಕರನ್ನು ಹಿಮ್ಮೆಟ್ಟಿಸಿದಾಗ ದೇಶಸೇವೆ ಮಾಡಿದ ಸಂತೃಪ್ತ ಭಾವ ಮೂಡುತ್ತದೆ’ ಎಂದರು.
ಬಿಜೆಪಿ ಯುವ ಮುಖಂಡ ರಘುಚಂದನ್ ಮಾತನಾಡಿ, ‘ಯೋಧ ಷಣ್ಮುಖಪ್ಪ ಅವರು ಆಪರೇಷನ್ ಪರಾಕ್ರಮ್, ಆಪರೇಷನ್ ಸಹಾಯತ್, ಆಪರೇಷನ್ ಸ್ನೋ ಲಿಯೋಪಾರ್ಡ್, ಮೇಘದೂತ್ನಂತಹ ಕಾರ್ಯಾಚರಣೆಗಳಲ್ಲಿ ಭಾಗವಹಿಸಿ ಯಶಸ್ಸು ಕಂಡಿದ್ದಾರೆ. ರೆಜಿಮೆಂಟ್ ಸುಬೇದಾರ್ವರೆಗೆ ಸೇನೆಯ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ಹಲವು ಮೆಡಲ್ಗಳನ್ನು ಪಡೆದಿದ್ದಾರೆ. ಅವರು ಯುವಕರಿಗೆ ಸ್ಪೂರ್ತಿಯಾಗಿದ್ದಾರೆ’ ಎಂದರು.
ಚಿತ್ರಹಳ್ಳಿ ಪಿಎಸ್ಐ ಕಾಂತರಾಜ್, ಆಂಜನೇಯ ಸ್ವಾಮಿ ಪಿಯಸಿ ಕಾಲೇಜು ಅಧ್ಯಕ್ಷ ಜಿ.ಎಮ್.ನಟರಾಜ್, ನಿವೃತ್ತ ಪ್ರಾಂಶುಪಾಲ ಟಿ.ಹನುಮಂತಪ್ಪ, ಪ್ರಾಂಶುಪಾಲ ಮಂಜುನಾಥ ನಾಯ್ಕ, ಎಂ.ಎಂ.ಸದಾಶಿವಪ್ಪ, ನಿವೃತ್ತ ಶಿಕ್ಷಕ ಜಿ.ಚನ್ನಬಸಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಜೆ.ಬಸವರಾಜ್, ಎಚ್.ಎಂ.ಟಿ.ಸುರೇಶ್, ಶ್ರೀಧರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.