ಶ್ರೀರಾಂಪುರ: ನಕಲಿ ಫೋನ್ ಪೇ ಆ್ಯಪ್ ಮೂಲಕ ಸ್ಕ್ಯಾನ್ ಮಾಡಿ ವಂಚಿಸುತ್ತಿದ್ದ ಮೂವರು ಆರೋಪಿಗಳನ್ನು ಶ್ರೀರಾಂಪುರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಚಿತ್ರದುರ್ಗ ನಗರದ ನಿವಾಸಿಗಳಾದ ಧೀರಜ್ (21), ತರುಣ್ (20) ಹಾಗೂ ತುರುವನೂರು ಹೋಬಳಿಯ ಸೂರನಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಕಿರಣ್ (24) ಬಂಧಿತರು. ಕೃತ್ಯಕ್ಕೆ ಸಹಕರಿಸಿದ ಸೂರನಹಳ್ಳಿ ಗೊಲ್ಲರಹಟ್ಟಿಯ ಶಿವಕುಮಾರ (28) ಹಾಗೂ ಚಿತ್ರದುರ್ಗ ತಾಲ್ಲೂಕು ಮಾಳಪ್ಪನಹಟ್ಟಿ ಗ್ರಾಮದ ದೇವರಾಜ (28) ಅವರ ವಿರುದ್ಧವೂ ದೂರು ದಾಖಲಾಗಿದ್ದು, ಇಬ್ಬರು ತಲೆ ಮರೆಸಿಕೊಂಡಿದ್ದಾರೆ.
ಬಂಧಿತರು ಅ. 4ರಂದು ಶ್ರೀರಾಂಪುರ ಹಾಗೂ ಬೆಲಗೂರು ಗ್ರಾಮಗಳಲ್ಲಿನ 3 ಅಂಗಡಿಗಳಲ್ಲಿ ಅಂದಾಜು ₹ 22,000 ಮೌಲ್ಯದ ಗುಟ್ಕಾ, ಸಿಗರೇಟ್ ಖರೀದಿ ಮಾಡಿ ಅಂಗಡಿಯ ಫೋನ್ ಪೇ ಸ್ಕ್ಯಾನರ್ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ. ಅಂಗಡಿ ಮಾಲೀಕರ ಮೊಬೈಲ್ಗೆ ಹಣ ವರ್ಗಾವಣೆ ಆಗಿರುವ ಬಗ್ಗೆ ಸಂದೇಶ ಸಹ ಬಂದಿದೆ. ಆದರೆ, ಬ್ಯಾಂಕ್ ಖಾತೆಗೆ ಹಣ ಜಮಾ ಆಗಿಲ್ಲ.
ಅಂಗಡಿ ಮಾಲೀಕರು ಅನುಮಾನಗೊಂಡು ಶ್ರೀರಾಂಪುರ ಠಾಣೆಯಲ್ಲಿ ಈಚೆಗೆ ದೂರು ದಾಖಲಿಸಿದ್ದರು.
ಶ್ರೀರಾಂಪುರ ಪೊಲೀಸರು ತನಿಖೆ ನಡೆಸಿ ಹುಳಿಯಾರು ಬಸ್ ನಿಲ್ದಾಣದಲ್ಲಿದ್ದ ಮೂವರು ಆರೋಪಿತರನ್ನು ಬಂಧಿಸಿ, ಅವರಿಂದ ₹ 10 ಲಕ್ಷ ಮೌಲ್ಯದ ಕಾರು ಹಾಗೂ ವಂಚಿಸಿ ಖರೀದಿ ಮಾಡಿದ್ದ ₹ 22,000 ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.