ಚಳ್ಳಕೆರೆ: ‘ಬಯಲುಸೀಮೆ ಪ್ರದೇಶದಲ್ಲಿ ಶೇಂಗಾದ ಜತೆ ಸೂರ್ಯಕಾಂತಿ, ಎಳ್ಳು, ಕುಸುಮೆ ಮುಂತಾದ ಎಣ್ಣೆಕಾಳು ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಮೂಲಕ ರೈತರು ಆರ್ಥಿಕವಾಗಿ ಸದೃಢರಾಗಬೇಕು’ ಎಂದು ಹೈದರಬಾದ್ ರಾಷ್ಟ್ರೀಯ ಎಣ್ಣೆಕಾಳು ಅಭಿವೃದ್ಧಿ ಕೇಂದ್ರದ ವಿಜ್ಞಾನಿ ಡಾ.ಮಂಜುನಾಥ್ ಕಿವಿಮಾತು ಹೇಳಿದರು.
ನಗರದ ಕೃಷಿ ಸಹಾಯಕ ನಿರ್ದೇಶಕರ ಕಚೇರಿ ಆವರಣದಲ್ಲಿ ಸೋಮವಾರ ಆತ್ಮ ಯೋಜನೆಯಡಿ ಆಯೋಜಿಸಿದ್ದ ತರಬೇತಿ, ಮುಂಗಾರು ಹಂಗಾಮಿನ ಕಾರ್ಯಾಗಾರ ಮತ್ತು ವಿಜ್ಞಾನಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಎಣ್ಣೆಕಾಳು ಬೆಳೆಗೆ ಹೆಚ್ಚು ನೀರಿನ ಅಗತ್ಯ ಇಲ್ಲ. ಹೀಗಾಗಿ, ನೀರಾವರಿ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳ ಮಧ್ಯೆ ಎಣ್ಣೆಕಾಳು ಬೆಳೆಯಲು ಅವಕಾಶವಿದೆ’ ಎಂದು ಹೇಳಿದರು.
‘ಪ್ರತಿ ವರ್ಷ ಒಂದೇ ಬೆಳೆ ಬೆಳೆದರೆ ಆ ಬೆಳೆ ಹೆಚ್ಚು ಇಳುವರಿ ನೀಡುವುದಿಲ್ಲ. ಹಾಗಾಗಿ ಶೇಂಗಾದ ಬದಲಿಗೆ ಪರ್ಯಾಯ ಬೆಳೆಗಳಾದ ಸಜ್ಜೆ, ಜೋಳ, ನವಣೆ, ಸಿರಿಧಾನ್ಯ ಮತ್ತು ಹೆಸರು, ತೊಗರಿ, ಔಡಲ ಮುಂತಾದ ಅಕ್ಕಡಿ ಬೆಳೆಗಳನ್ನು ಬೆಳೆಯುವುದರ ಕಡೆಗೆ ಹೆಚ್ಚು ಗಮನರಿಸಬೇಕು’ ಎಂದು ಶಾಸಕ ಟಿ.ರಘುಮೂರ್ತಿ ರೈತರಿಗೆ ಸಲಹೆ ನೀಡಿದರು.
ಚಿತ್ರದುರ್ಗ ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಮಂಜುನಾಥ್, ರೈತ ಮುಖಂಡ ಕೆ.ಪಿ.ಭೂತಯ್ಯ, ರೈತ ಮುಖಂಡ ರೆಡ್ಡಿಹಳ್ಳಿ ವೀರಣ್ಣ, ಬಬ್ಬೂರು ಫಾರಂ ಕೃಷಿ ವಿಜ್ಞಾನಿ ಡಾ.ಓಂಕಾರಪ್ಪ, ಚಿತ್ರದುರ್ಗ ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ. ಮಂಜುನಾಥ್ ಮಾತನಾಡಿದರು.
ಪ್ರಗತಿಪರ ರೈತ ಆರ್.ಎ.ದಯಾನಂದಮೂರ್ತಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಸ್.ರೇವಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.