ADVERTISEMENT

‘ಆರೋಗ್ಯವಂತ ಯುವಜನತೆಯೇ ರಾಷ್ಟ್ರದ ಸಂಪತ್ತು’

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2024, 14:48 IST
Last Updated 28 ಸೆಪ್ಟೆಂಬರ್ 2024, 14:48 IST
ನಾಯಕನಹಟ್ಟಿ ಹೋಬಳಿಯ ಮುಷ್ಠಲಗುಮ್ಮಿ ಗ್ರಾಮದ ವೀರಭದ್ರೇಶ್ವರ ಪ್ರೌಢಶಾಲೆಯ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು
ನಾಯಕನಹಟ್ಟಿ ಹೋಬಳಿಯ ಮುಷ್ಠಲಗುಮ್ಮಿ ಗ್ರಾಮದ ವೀರಭದ್ರೇಶ್ವರ ಪ್ರೌಢಶಾಲೆಯ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು   

ನಾಯಕನಹಟ್ಟಿ: ‘ಆರೋಗ್ಯವಂತ, ಜ್ಞಾನವಂತ, ಸಂಸ್ಕೃತಿ, ಸಂಸ್ಕಾರ, ಆಚಾರ-ವಿಚಾರಗಳನ್ನು ಮೈಗೂಡಿಸಿಕೊಂಡು ಪೋಷಕರು, ಹುಟ್ಟಿದ ಊರು ಮತ್ತು ಕಲಿತ ಶಾಲೆಯ ಬಗ್ಗೆ ಗೌರವ ಹೊಂದಿರುವ ಯುವಜನತೆಯೇ ರಾಷ್ಟ್ರದ ನಿಜವಾದ ಸಂಪತ್ತು’ ಎಂದು ಜಗಳೂರು ತಾಲ್ಲೂಕಿನ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು. 

ಹೋಬಳಿಯ ಮುಷ್ಠಲಗುಮ್ಮಿ ಗ್ರಾಮದ ವೀರಭದ್ರೇಶ್ವರ ಪ್ರೌಢಶಾಲೆಯ ವಜ್ರ ಮಹೋತ್ಸವ ಸಂಭ್ರಮ ಮತ್ತು ನೂತನ ಶಾಲಾಕಟ್ಟಡ ಹಸ್ತಾಂತರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. 

‘ಮನೆಯಲ್ಲಿ ಪೋಷಕರು ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯದ ಬುನಾದಿ ಹಾಕಬೇಕು. ಆಗ ಮಕ್ಕಳು ಯಶಸ್ಸಿನ ಹಾದಿಯಲ್ಲಿ ಸಾಗುತ್ತಾರೆ. ಒಬ್ಬ ಸಮರ್ಥವಾದ ಶಿಕ್ಷಕ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರ ಕಾರ್ಯಗಳಾದ ಸೃಷ್ಟಿ, ರಕ್ಷಣೆ, ಲಯ ಇವುಗಳನ್ನು ನಿರ್ವಹಿಸುತ್ತಾನೆ. ಅಂದರೆ ಶಿಕ್ಷಕ ಒಬ್ಬ ವಿದ್ಯಾರ್ಥಿಯಲ್ಲಿ ಜ್ಞಾನ, ತತ್ವ, ಸಿದ್ಧಾಂತ, ನೀತಿ, ನಿಯಮ, ಆಚಾರ ವಿಚಾರ, ಶಿಸ್ತು, ಸಂಸ್ಕಾರ, ಸನ್ನಡತೆಯನ್ನು ಸೃಷ್ಟಿಸುತ್ತಾರೆ. ಈ ಎಲ್ಲ ಜ್ಞಾನವನ್ನು ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳುವ ರಕ್ಷಿಸುವ ಕಾರ್ಯವನ್ನು ಮಾಡುತ್ತಾನೆ’ ಎಂದು ಹೇಳಿದರು. 

ADVERTISEMENT

‘ಶಿಕ್ಷಕರು ವಿದ್ಯಾರ್ಥಿಯಲ್ಲಿರುವ ಮೂಢನಂಬಿಕೆ, ಅಜ್ಞಾನ, ಅಂಧಕಾರವನ್ನು ಅಳಿಸಿ, ಸನ್ಮಾರ್ಗವನ್ನು ತೋರಿಸುತ್ತಾರೆ. ಯುವಜನತೆಗೆ ಸಮರ್ಥವಾದ ಶಕ್ತಿ ತುಂಬುವುದೇ ಶಿಕ್ಷಕ. ಪರರಿಗೆ ಉಪಕಾರ ಮಾಡುವುದೇ ಪುಣ್ಯದ ಕೆಲಸ. ಅಂತಹ ಪುಣ್ಯದ ಕೆಲಸವನ್ನು ಮುಷ್ಠಲಗುಮ್ಮಿ ಶಾಲೆಯ ಹಳೆಯ ವಿದ್ಯಾರ್ಥಿಗಳು ನೆರವೇರಿಸಿದ್ದಾರೆ. ಎಲ್ಲರೂ ಒಗ್ಗೂಡಿ ದೇಣಿಗೆ ಸಂಗ್ರಹಿಸಿ ಶಾಲೆಗೆ ನೂತನ ಕೊಠಡಿಗಳನ್ನು ನಿರ್ಮಿಸಿಕೊಟ್ಟಿರುವುದು ಪುಣ್ಯದ ಕೆಲಸ’ ಎಂದರು. 

‘ಶಿಕ್ಷಕರು ವಿದ್ಯಾರ್ಥಿಗಳಿಗೆ ಸಂಸ್ಕೃತಿ, ಸಂಸ್ಕಾರ, ಜ್ಞಾನವನ್ನು ಧಾರೆ ಎರೆಯಬೇಕು. ಮುಂದಿನ ದಿನಗಳಲ್ಲಿ ಆದ್ಯತೆಯ ಮೇರೆಗೆ ಈ ಶಾಲೆ ಮತ್ತು ಮುಷ್ಠಲಗುಮ್ಮಿ ಗ್ರಾಮದ ಅಭಿವೃದ್ಧಿಗೆ ಮುಂದಾಗುತ್ತೇನೆ’ ಎಂದರು. 

ಇದೇ ವೇಳೆ ಸಂಸ್ಥೆಯ ಅಧ್ಯಕ್ಷೆ ಕೆ.ವಿ.ಶಶಿಕಲಾ ನಾಗರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಿ.ಬೋರಯ್ಯ, ನಿವೃತ್ತ ಶಿಕ್ಷಕರಾದ ಕೆ.ಚಂದ್ರಪ್ಪ, ಬಿ.ಎಂ.ತಿಪ್ಪೇರುದ್ರಸ್ವಾಮಿ, ಎಚ್.ಸಿ.ಶಿವಶಂಕರ್‌ಮೂರ್ತಿ, ಬಿ.ಎಂ.ಜಗದೀಶ, ಪೀತಾಂಬರ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾಪಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.