ADVERTISEMENT

ಹೊಳಲ್ಕೆರೆ: ಸಂಭ್ರಮದ ಹಿಂದೂ ಗಣಪತಿ ಮೆರವಣಿಗೆ

ಶೋಭಾಯಾತ್ರೆಯಲ್ಲಿ ಭಕ್ತರ ಸಡಗರ, ಬಿಸಿಲು ಲೆಕ್ಕಿಸದೆ ಕುಣಿದ ಜನ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2024, 15:30 IST
Last Updated 21 ಸೆಪ್ಟೆಂಬರ್ 2024, 15:30 IST
ಹೊಳಲ್ಕೆರೆಯಲ್ಲಿ ಶನಿವಾರ ನಡೆದ ಹಿಂದೂ ಮಹಾಗಣಪತಿ ಮೆರವಣಿಗೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು
ಹೊಳಲ್ಕೆರೆಯಲ್ಲಿ ಶನಿವಾರ ನಡೆದ ಹಿಂದೂ ಮಹಾಗಣಪತಿ ಮೆರವಣಿಗೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದರು   

ಹೊಳಲ್ಕೆರೆ: ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಪ್ರತಿಷ್ಠಾಪಿಸಿದ್ದ 11ನೇ ವರ್ಷದ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಶನಿವಾರ ಸಂಭ್ರಮದಿಂದ ನಡೆಯಿತು.

ಗಣಪತಿ ಮೂರ್ತಿಯನ್ನು ಅಲಂಕೃತ ಟ್ರ್ಯಾಕ್ಟರ್‌ನಲ್ಲಿ ಕೂರಿಸಿ ಭವ್ಯ ಮೆರವಣಿಗೆ ನಡೆಸಲಾಯಿತು. ಚಿತ್ರದುರ್ಗದ ಮಾದಾರ ಚೆನ್ನಯ್ಯ ಸ್ವಾಮೀಜಿ, ಪುರುಷೋತ್ತಮಾನಂದ ಸ್ವಾಮೀಜಿ, ಕೃಷ್ಣ ಯಾದವಾನಂದ ಸ್ವಾಮೀಜಿ ಹಾಗೂ ಶಾಸಕ ಎಂ.ಚಂದ್ರಪ್ಪ ಅವರು ಚಿತ್ರದುರ್ಗ ರಸ್ತೆಯ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಶೋಭಾಯಾತ್ರೆಗೆ ಚಾಲನೆ ನೀಡಿದರು. ಮಧ್ಯಾಹ್ನ 12ಕ್ಕೆ ಆರಂಭವಾದ ಮೆರವಣಿಗೆ ಮುಖ್ಯವೃತ್ತಕ್ಕೆ ಬರುವ ಹೊತ್ತಿಗೆ ಸಂಜೆ 5 ಗಂಟೆ ಆಗಿತ್ತು.

ಎರಡು ಡಿ.ಜೆ.ಗಳ ಸದ್ದಿಗೆ ಯುವಕರು, ಯುವತಿಯರು, ಮಕ್ಕಳು ಕುಣಿದು ಕುಪ್ಪಳಿಸಿದರು. ಬಿಸಿಲನ್ನೂ ಲೆಕ್ಕಿಸದೆ ಜನ ನೃತ್ಯ ಮಾಡಿ ಸಂಭ್ರಮಿಸಿದರು. ಚಂಡೆ ವಾದ್ಯ ಜನರ ಗಮನ ಸೆಳೆಯಿತು. ಕೆಲವರು ಕೇಸರಿ ಪೇಟ, ಕೇಸರಿ ಶಾಲು ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿದರು. ಬಿಜೆಪಿ ಯುವ ಮುಖಂಡ ರಘುಚಂದನ್ ಯುವಕರನ್ನು ಹುರಿದುಂಬಿಸಿದರು. ಹಲವರು ಮೆರವಣಿಗೆಯಲ್ಲಿ ಸೆಲ್ಫಿ ತೆಗೆದುಕೊಂಡು ಸಂಭ್ರಮಸಿದರು.

ADVERTISEMENT

ಮೆರವಣಿಗೆಯಲ್ಲಿ ಭಾಗವಹಿಸಿದ್ದವರು ಕೇಸರಿ ಬಾವುಟ ಹಿಡಿದು ಜೈ ಶ್ರೀರಾಮ್, ಜೈ ಭಜರಂಗಿ ಘೋಷಣೆ ಕೂಗಿದರು. ಗ್ರಾಮೀಣ ಪ್ರದೇಶ ಹಾಗೂ ಪಕ್ಕದ ತಾಲ್ಲೂಕುಗಳಿಂದಲೂ ಹೆಚ್ಚು ಜನ ಬಂದಿದ್ದರು. ಭಕ್ತರಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

ಮೆರವಣಿಗೆ ಸುಗಮವಾಗಿ ನಡೆಯಲು ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಪಟ್ಟಣದ ಒಳಗೆ ವಾಹನ ಸಂಚಾರ ನಿಷೇಧಿಸಲಾಗಿತ್ತು. ಶಿವಮೊಗ್ಗ ರಸ್ತೆಯ ತಾಲ್ಲೂಕು ಪಂಚಾಯಿತಿ ಕಚೇರಿ ಹಿಂದೆ ನಿರ್ಮಿಸಿದ್ದ ಹೊಂಡದಲ್ಲಿ ರಾತ್ರಿ ಗಣಪತಿ ವಿಸರ್ಜನೆ ಮಾಡಲಾಯಿತು.

ವಿಶ್ವ ಹಿಂದೂ ಪರಷತ್‌ ದಕ್ಷಿಣ ಪ್ರಾಂತ ಧರ್ಮ ಪ್ರಸಾರ ಪ್ರಮುಖರಾದ ಕೆ.ಆರ್.ಸುನಿಲ್, ಮಂಜುನಾಥ ಸ್ವಾಮಿ, ಶಿವಮೊಗ್ಗ ವಿಭಾಗೀಯ ಕಾರ್ಯದರ್ಶಿ ಚಂದ್ರಶೇಖರ್, ವಿಶ್ವ ಹಿಂದೂ ಮಹಾಗಣಪತಿಯ ಗೌರವ ಅಧ್ಯಕ್ಷ ಗೋಪಾಲಸ್ವಾಮಿ ನಾಯಕ, ಅಧ್ಯಕ್ಷ ಹೀರಾಲಾಲ್, ಕಾರ್ಯದರ್ಶಿ ಭೈರೇಶ್, ಖಜಾಂಚಿ ಎಚ್.ಬಿ.ವಿಜಯ ಕುಮಾರ್, ಅಣ್ಣಪ್ಪ, ಮನು, ಹಿಂದೂ ಗಿರೀಶ್, ಪುರಸಭೆ ಸದಸ್ಯ ಆರ್.ಎ.ಅಶೋಕ್, ಮಲ್ಲಿಕಾರ್ಜುನ ಸ್ವಾಮಿ, ಬಸವರಾಜ ಯಾದವ್, ವಿಶ್ವ ಹಿಂದೂ ಮಹಾಗಣಪತಿ ಉತ್ಸವ ಸಮಿತಿಯ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.