ADVERTISEMENT

ಹೊಸದುರ್ಗ: ಬರಗಾಲದಲ್ಲೂ ರೈತನ ಕೈಹಿಡಿದ ಕಡಲೆ

ಶ್ವೇತಾ ಜಿ.
Published 9 ಜನವರಿ 2024, 6:51 IST
Last Updated 9 ಜನವರಿ 2024, 6:51 IST
ಹೊಸದುರ್ಗದ ಬಾಗೂರಿನ ರೈತ ವೆಂಕಟೇಶ್ ಅವರ ಜಮೀನಿನಲ್ಲಿನ ಕಡಲೆ ಬೆಳೆ
ಹೊಸದುರ್ಗದ ಬಾಗೂರಿನ ರೈತ ವೆಂಕಟೇಶ್ ಅವರ ಜಮೀನಿನಲ್ಲಿನ ಕಡಲೆ ಬೆಳೆ   

ಹೊಸದುರ್ಗ: ಮುಂಗಾರು ಕೈಕೊಟ್ಟಿದ್ದರಿಂದ ತೀವ್ರ ಆತಂಕದಲ್ಲಿದ್ದ ಈ ಭಾಗದ ರೈತರು, ಹಿಂಗಾರಿನಲ್ಲಿ ಕಡಲೆ ಬಿತ್ತನೆ ಮಾಡಿ‌ ಕೊಂಚ ನಿರಾಳವಾಗಿದ್ದಾರೆ.

ಹಿಂಗಾರು ಹಂಗಾಮಿನಲ್ಲಿ ಎರಡು ಬಾರಿ ಹದ ಮಳೆಯಾಗಿದ್ದರಿಂದ ಕಡಲೆ ಬೆಳೆ ಉತ್ಕೃಷ್ಟವಾಗಿ ಬೆಳೆದಿದ್ದು, ಮುಂಗಾರು ವೈಫಲ್ಯ ಮರೆಯುವಂತೆ ಮಾಡಿದೆ.

ತಾಲ್ಲೂಕಿನ ಕಸಬಾ, ಶ್ರೀರಾಂಪುರ ಹಾಗೂ ಮಾಡದಕೆರೆ ಹೋಬಳಿಗಳಲ್ಲಿ ಕಪ್ಪು ಮಣ್ಣಿನಲ್ಲಿ ಕಡಲೆ ಬಿತ್ತಿರುವ ರೈತರು, ಕಡಿಮೆ ಮಲೆ ಸುರಿದರೂ ಉತ್ತಮವಾಗಿ ಬೆಳೆ ಬಂದಿದ್ದರಿಂದ ಬಾಡಿದಂತಾಗಿದ್ದ ರೈತರ ಮುಖದಲ್ಲಿ ಮತ್ತೆ ಮಂದಹಾಸ ಮೂಡಿದೆ.

ADVERTISEMENT

‘ಮುಂಗಾರು ವೈಫಲ್ಯದಿಂದಾಗಿ ಈರುಳ್ಳಿ ಬೆಳೆ ಕೈ ಸೇರಲಿಲ್ಲ. ಟ್ಯಾಂಕರ್ ನೀರು ತಂದು ಸುರಿದರೂ ಈರುಳ್ಳಿ ಕೈಕೊಟ್ಟಿತ್ತು. ಅದೇ ಬೇಸರದಲ್ಲಿದ್ದ ನಮಗೆ ಅಕ್ಟೋಬರ್– ನವೆಂಬರ್‌ನಲ್ಲಿ ಸುರಿದ ಮಳೆ ನೆಮ್ಮದಿ ತಂದಿದೆ. ಹಿಂಗಾರು ಮಳೆಯೂ ಹದವಾಗಿ ಸುರಿದಿದ್ದರಿಂದ ಕಡಲೆ ಉತ್ಕೃಷ್ಟವಾಗಿ ಬೆಳೆದಿದೆ’ ಎಂದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ.

‘5 ಎಕರೆಯಲ್ಲಿ ಕಡಲೆ ಬಿತ್ತನೆ ಮಾಡಿದ್ದು, ಪ್ರತಿ ಬಾರಿ 20 ಕ್ವಿಂಟಾಲ್ ಇಳುವರಿ ದೊರೆಯುತ್ತಿತ್ತು. ಈ ಬಾರಿ 50 ಕ್ವಿಂಟಾಲ್ ಇಳುವರಿಯ ನಿರೀಕ್ಷೆಯಿದೆ. ಇದುವರೆಗೂ ಪ್ರತಿ ಎಕರೆಗೆ ₹ 8,000 ವ್ಯಯಿಸಿದ್ದು, ಉತ್ತಮ ಆದಾಯ ದೊರೆಯಲಿದೆ. ಹುಳುಗಳು ಬಾಧೆಯೂ ಕಡಿಮೆಯಿದೆ. ಬರಗಾಲದಿಂದಾದ ನಷ್ಟ ಸರಿದೂಗಿಸಲು ಸಹಕಾರಿಯಾಗಬಹುದು’ ಎಂದು ಬಾಗೂರಿನ ರೈತ ವೆಂಕಟೇಶ್ ಹೇಳಿದರು.

ವೆಂಕಟೇಶ್ ಬಾಗೂರು ಪ್ರಗತಿ ಪರ ರೈತ

‘ಹದ ಮಳೆಯಿಂದಾಗಿ ತಾಲ್ಲೂಕಿನಾದ್ಯಂತ ಕಡಲೆ ಬಿತ್ತಲಾಗಿದೆ. ಇದಕ್ಕೆ ಅಧಿಕ ತೇವಾಂಶದ ಅಗತ್ಯವಿಲ್ಲ‌ದ್ದರಿಂದ ಉತ್ತಮ ಫಸಲು ದೊರಯಲಿದೆ. ತಾಲ್ಲೂಕಿನಲ್ಲಿ ಒಟ್ಟು 1,257 ಕ್ವಿಂಟಾಲ್ ಕಡಲೆ ಬಿತ್ತನೆ ಬೀಜವನ್ನು ಸಹಾಯಧನ ಸೌಲಭ್ಯದಲ್ಲಿ ವಿತರಿಸಲಾಗಿದೆ. ಒಟ್ಟು 2450 ಹೆಕ್ಟೇರ್ ಕಡಲೆ ಬಿತ್ತನೆಯಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್. ಈಶ ಮಾಹಿತಿ ನೀಡಿದರು.

‘ಕಡಲೆ ಬೆಳೆಗೆ ಕೆಲವು ಕಡೆಗಳಲ್ಲಿ ಅಲ್ಲಲ್ಲಿ ಕಾಯಿಕೊರಕ ಹುಳುವಿನ ಬಾಧೆಯಿದೆ. ರೈತರು ಈ ಬಗ್ಗೆ ಆತಂಕಪಡುವಂತಿಲ್ಲ’ ಎಂದು ಅವರು ತಿಳಿಸಿದರು.

ಬೆಂಬಲ ಬೆಲೆ ಯೋಜನೆಯಡಿ ಕಡಲೆ ಮಾರಲು ಬೆಳೆ ಸಮೀಕ್ಷೆ ಕಡ್ಡಾಯ. ಸ್ವತಃ ರೈತರೇ ಬೆಳೆ ಸಮೀಕ್ಷೆ ಮಾಡಿಸಿಕೊಳ್ಳಬಹುದು. ಕೂಡಲೇ ರೈತರು ಬೆಳೆ ಸಮೀಕ್ಷೆ ಮಾಡಬೇಕು.
ಸಿ.ಎಸ್. ಈಶ ಸಹಾಯಕ ಕೃಷಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.