ಚಳ್ಳಕೆರೆ: ತಾಲ್ಲೂಕಿನ ನನ್ನಿವಾಳ ಗ್ರಾಮದ ಕೆರೆ ಏರಿ ಮೇಲೆ ಸೀಮೆಜಾಲಿ ಗಿಡಗಳು ದಟ್ಟವಾಗಿ ಬೆಳೆದಿರುವ ಕಾರಣ, ಅಲ್ಲಲ್ಲಿ ಸಣ್ಣಸಣ್ಣ ರಂಧ್ರಗಳು ಬಿದ್ದಿದ್ದು ನೀರು ಸೋರಿಕೆಯಾಗುತ್ತಿದೆ. ಇದರಿಂದ ಗ್ರಾಮದ ಕೆರೆಯಲ್ಲಿ ನೀರಿನ ಸಂಗ್ರಹ ಬರಿದಾಗುತ್ತಿರುವ ಸ್ಥಿತಿಗೆ ತಲುಪುತ್ತಿದೆ ಎಂದು ಜನರು ಆತಂಕ ಗೊಂಡಿದ್ದಾರೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 500 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿರುವ ಈ ಕೆರೆ, 200 ಎಕರೆ ವಿಸ್ತೀರ್ಣ ಹಾಗೂ ಸಾವಿರ ಮೀಟರ್ ಉದ್ದದ ಏರಿ ಹೊಂದಿದೆ. ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ಕೆರೆ ತೂಬಿಗೆ ಅಳವಡಿಸಿದ್ದ ಕಬ್ಬಿಣದ ಸರಳು ತುಕ್ಕು ಹಿಡಿದಿದೆ. ಜಾಲಿಗಿಡದ ಬೇರುಗಳ ಮೂಲಕ ಗೊದ್ದ, ಇರುವೆಗಳು ಏರಿ ಒಳ ಭಾಗದಲ್ಲಿ ನುಸುಳಿ ಸಣ್ಣಸಣ್ಣ ರಂಧ್ರ ಸೃಷ್ಟಿಸಿವೆ.
‘ಹೀಗಾಗಿ ಕೆರೆಯಲ್ಲಿ ಸಂಗ್ರಹವಾಗಿದ್ದ ಮೂರನೇ ಒಂದು ಭಾಗದಷ್ಟು ನೀರು ಸೋರಿಕೆಯಾಗಿದೆ. ಕೋಡಿ, ತೂಬು, ಕೆರೆಯಂಗಳ ಪ್ರದೇಶದ ಒತ್ತುವರಿಯನ್ನು ತೆರವುಗೊಳಿಸಬೇಕು. ಏರಿ ದುರಸ್ತಿ ಕಾರ್ಯದ ಜತೆಗೆ ದಟ್ಟವಾಗಿ ಬೆಳೆದ ಗಿಡಗಳನ್ನು ಕೂಡಲೇ ತೆರವುಗೊಳಿಸಿ ಕೆರೆ ಸುತ್ತಲೂ ಟ್ರಂಚ್ ಮಾಡಿಸಬೇಕು’ ಎಂದು ಗ್ರಾಮದ ಮುಖಂಡ ದೊರೆ ಬೈಯಣ್ಣ ಜಿಲ್ಲಾಡತಳಿಕ್ಕೆ ಒತ್ತಾಯಿಸಿದ್ದಾರೆ.
ನೀರು ಸೋರಿಕೆ ತಡೆಗೆ ಕ್ರಮ:
‘ಸ್ಥಳಕ್ಕೆ ಭೇಟಿ ನೀಡಿ ಸೋರುತ್ತಿರುವ ಕೆರೆಯನ್ನು ಪರಿಶೀಲಿಸಲಾಗಿದೆ. ತೂಬು ಹಾಳಾಗಿರುವ ಕಾರಣ ನೀರು ಸೋರಿಕೆಯಾಗಿದೆ. ಜೆಸಿಬಿ ಯಂತ್ರದ ಮೂಲಕ ಮಣ್ಣು ಹಾಗೂ ಮರಳು ತುಂಬಿದ ಚೀಲಗಳನ್ನು ಏರಿಗೆ ಹಾಕುವ ನೀರಿನ ಸೋರಿಕೆಯನ್ನು ನಿಯಂತ್ರಿಸಲಾಗುವುದು. ಹಾಳಾಗಿರುವ ಕೆರೆ ತೂಬು ರಿಪೇರಿ ಹಾಗೂ ಕೋಡಿ ದುರಸ್ತಿ ಮಾಡಿಸಬೇಕಿರು ವಿಚಾರವನ್ನು ಸಣ್ಣ ನೀರಾವರಿ ಇಲಾಖೆ ಗಮನಕ್ಕೆ ತರಲಾಗಿದೆ’ ಎಂದು ಪಿಡಿಒ ಇನಾಯಿತ್ ಪಾಷ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.