ಮೊಳಕಾಲ್ಮುರು: ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಬುಧವಾರ ಆಗಮಿಸಿದ ಯೋಧ ಎಸ್.ಕೆ. ಬಸವರಾಜ್ ಅವರನ್ನು ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ ಗ್ರಾಮಸ್ಥರು ಆತ್ಮೀಯವಾಗಿ ಸ್ವಾಗತಿಸಿದರು.
ಗ್ರಾಮದ ಮೊಗಲಹಳ್ಳಿ ರಸ್ತೆಯಲ್ಲಿನ ಬೀರಲಿಂಗೇಶ್ವರ ದೇವಸ್ಥಾನ ಮುಂಭಾಗದಿಂದ ಆರಂಭವಾದ ತೆರೆದ ಜೀಪಿನ ಮೆರವಣಿಗೆ ಗ್ರಾಮದ ಮುಖ್ಯಬೀದಿಗಳಲ್ಲಿ ಸಂಚರಿಸಿತು. ಡೊಳ್ಳು ಕುಣಿತ ಮೆರುಗು ನೀಡಿತು. ವಿವಿಧ ವೇಷಧಾರಿಗಳು ಗಮನ ಸೆಳೆದರು.
ಗ್ರಾಮದ ಕುರುಬ ಜನಾಂಗದ ಎಸ್. ಕೋಟೆಪ್ಪ ಹಾಗೂ ಲಕ್ಕಮ್ಮ ದಂಪತಿಯ ಪುತ್ರ ಬಸವರಾಜ್ 2003ರಲ್ಲಿ ಗಡಿ ಭದ್ರತಾ ಪಡೆಯನ್ನು ಸೇರಿದರು. ಬಾಂಗ್ಲಾ ಗಡಿ, ಎಲ್ಒಸಿ, ರಾಜಭವನ್, ಜೈಸಲ್ಮೇರ್, ಮೇಘಾಲಯ, ಜಮ್ಮು- ಕಾಶ್ಮೀರ್ ಗಡಿಯಲ್ಲಿ ಒಟ್ಟು 21 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
‘ಇದು ಗ್ರಾಮದ ಹೆಮ್ಮೆ ವಿಷಯವಾಗಿದ್ದು, ನಿವೃತ್ತಿಯಾಗಿ ಗ್ರಾಮಕ್ಕೆ ಬರುತ್ತಿರುವ ಕಾರಣ ಗೌರವ ಸಲ್ಲಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಆಯೋಜಕರು ಮಾಹಿತಿ ನೀಡಿದರು.
ʼಗ್ರಾಮಸ್ಥರು ನೀಡಿರುವ ಸ್ವಾಗತವು ನನ್ನ ಜೀವಮಾನದ ಮುಖ್ಯಘಟ್ಟವಾಗಿದೆ. ಜನರು ತೋರಿಸಿದ ಪ್ರೀತಿಯಿಂದ ಇಷ್ಟು ವರ್ಷ ದೇಶ ಕಾಯುವ ಕಾರ್ಯವನ್ನು ಮಾಡಿದ್ದು ಸಾರ್ಥಕ ಭಾವ ಮೂಡಿಸಿದೆ. ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಜನಪರ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ’ ಎಂದು ಯೋದ ಬಸವರಾಜ್ ಅನಿಸಿಕೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.