ಸಿರಿಗೆರೆ: ರೈತ ಉತ್ಪಾದಕ ಸಂಸ್ಥೆಗಳಿಗೆ ಅನುದಾನ ಬಾರದ ಕಾರಣ ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಒತ್ತಾಯಿಸಿ ಸಂಸ್ಥೆಗಳ ಪದಾಧಿಕಾರಿಗಳು ಸಿರಿಗೆರೆಯ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗೆ ಮನವಿ ಸಲ್ಲಿಸಿದರು.
ಇಲ್ಲಿನ ಸದ್ಧರ್ಮ ನ್ಯಾಯಪೀಠದಲ್ಲಿ ಸೋಮವಾರ ತರಳಬಾಳು ಶ್ರೀಗೆ ಮನವಿ ಸಲ್ಲಿಸಿದ ಸಂಸ್ಥೆಯ ಪದಾಧಿಕಾರಿಗಳು, ‘ಒಪ್ಪಂದದ ಪ್ರಕಾರ ಬರಬೇಕಾದ ಅನುದಾನ ಬಂದಿಲ್ಲ. ನೌಕರರಿಗೆ 14 ತಿಂಗಳಿಂದ ವೇತನ ನೀಡಿಲ್ಲ. ಇದರ ಮಧ್ಯೆಯೂ ರೈತ ಉತ್ಪಾದಕ ಸಂಘಗಳ ಪದಾಧಿಕಾರಿಗಳು ರೈತರಿಗೆ ಬೀಜ, ಗೊಬ್ಬರ ಮುಂತಾದ ಕೃಷಿ ಚಟುವಟಿಕೆಗೆ ಬೇಕಾದ ಸಾಮಗ್ರಿಗಳನ್ನು ಪೂರೈಸಿ ರೈತರಿಗೆ ನೆರವಾಗಿವೆ. ಸರ್ಕಾರ ಕೂಡಲೇ ನೆರವು ನೀಡಬೇಕು. ಅನುದಾನ ನೀಡುವ ಅವಧಿಯನ್ನು 5 ವರ್ಷಗಳಿಗೆ ವಿಸ್ತರಿಸಬೇಕು. ಸಂಘಗಳಿಗೆ ಸ್ವಂತ ಕಟ್ಟಡ ಹೊಂದಲು ನಿವೇಶನ ನೀಡಬೇಕು ಎಂಬ ಬೇಡಿಕೆ ಸಲ್ಲಿಸಿದರು.
‘ತರಳಬಾಳು ಶ್ರೀಗಳ ಮಧ್ಯಸ್ಥಿಕೆಯಲ್ಲಿ ಹಲವು ಪ್ರಕರಣಗಳು ಸರ್ಕಾರದ ಮಟ್ಟದಲ್ಲಿ ಬಗೆಹರಿದಿವೆ. ಶ್ರೀಗಳ ಮೊರೆ ಹೊಕ್ಕಿದ್ದೇವೆ. ಸರ್ಕಾರದ ವಲಯದಲ್ಲಿ ಚರ್ಚಿಸಿ ಶ್ರೀಗಳು ನಮಗೆ ನ್ಯಾಯ ದೊರಕಿಸಿಕೊಡುವ ಭರವಸೆ ಇದೆ’ ಎಂದು ಬಿದರಕೆರೆ ರೈತ ಉತ್ಪಾದಕ ಸಂಘದ ಉಪಾಧ್ಯಕ್ಷ ಸೋಮನಗೌಡ ಪಾಟೀಲ್ ಹೇಳಿದರು.
ಜೂನ್ 30ರಂದು ಅಮೃತ ರೈತ ಉತ್ಪಾದಕ ಸಂಘಗಳ ಪದಾಧಿಕಾರಿಗಳ ಸಭೆಯನ್ನು ಸಿರಿಗೆರೆಯಲ್ಲಿ ಕರೆಯಲಾಗುವುದು. ಆ ಸಭೆಯಲ್ಲಿ ಬೇಡಿಕೆ ಬಗ್ಗೆ ಚರ್ಚಿಸಲಾಗುವುದು ಎಂದು ಶ್ರೀಗಳು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.