ADVERTISEMENT

ರಾಮಚಂದ್ರಪ್ಪಗೆ ಗಡಿನಾಡ ಕನ್ನಡ ನುಡಿ ಸೇವಕ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2024, 14:38 IST
Last Updated 15 ಸೆಪ್ಟೆಂಬರ್ 2024, 14:38 IST
ಪರಶುರಾಂಪುರ ಸಮೀಪದ ನಾಗಪ್ಪನಹಳ್ಳಿ ಗೇಟ್ ಜ್ಞಾನ ವಿಕಾಸ ಶಾಲೆ ಅವರಣದಲ್ಲಿ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಶಾಸಕ ಟಿ. ರಘುಮೂರ್ತಿ ಉದ್ಘಾಟಿಸಿದರು
ಪರಶುರಾಂಪುರ ಸಮೀಪದ ನಾಗಪ್ಪನಹಳ್ಳಿ ಗೇಟ್ ಜ್ಞಾನ ವಿಕಾಸ ಶಾಲೆ ಅವರಣದಲ್ಲಿ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಶಾಸಕ ಟಿ. ರಘುಮೂರ್ತಿ ಉದ್ಘಾಟಿಸಿದರು   

ಪರಶುರಾಂಪುರ: ಕನ್ನಡ ಶಿಕ್ಷಕರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಆಂಧ್ರ ಗಡಿನಾಡು ಘಟಕದ ಅಧ್ಯಕ್ಷರಾಗಿ ಗಡಿ ಭಾಗದಲ್ಲಿ ಕನ್ನಡ ಮತ್ತು ತೆಲುಗು ಭಾಷೆಯ ಮಧ್ಯೆ ಬಾಂಧವ್ಯ ಬೆಸೆಯುವಂತಹ ಕೆಲಸವನ್ನು ಹ.ರಾಮಚಂದ್ರಪ್ಪ ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ಹೋಬಳಿಯ ನಾಗಪ್ಪನಹಳ್ಳಿ ಗೇಟ್ ಜ್ಞಾನ ವಿಕಾಸ ಶಾಲೆ ಅವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆಂಧ್ರ ಗಡಿನಾಡು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಗಡಿಗಾಡ ಕನ್ನಡ ನುಡಿ ಸೇವಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗಡಿಭಾಗದಲ್ಲಿ ದ್ವಿಭಾಷಿಕರೇ ಹೆಚ್ಚು. ಇಲ್ಲಿ ಕನ್ನಡದ ಅನೇಕ ಕಾರ್ಯಕ್ರಮಗಳ ಮೂಲಕ ಕನ್ನಡತನವನ್ನು ಬೆಳೆಸುವಂತಹ ಕೆಲಸವನ್ನು ರಾಮಚಂದ್ರಪ್ಪ ಮಾಡಿದ್ದಾರೆ’ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು. 

ADVERTISEMENT

ಕಾದಂಬರಿಕಾರ ಕುಂ.ವೀರಭದ್ರಪ್ಪ ಮಾತನಾಡಿ, ಕನ್ನಡ ಮೇಷ್ಟ್ರು ಅಂದರೆ ಸಾಕು ನೊಬೆಲ್ ಪ್ರಶಸ್ತಿ ಸಿಕ್ಕಷ್ಟು ಸಂತೋಷವಾಗುತ್ತದೆ. ಆ ಕೆಲಸದ ಜೊತೆಗೆ ಎರಡು ದಶಕಗಳ ಕಾಲ ಗಡಿನಾಡು ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಕನ್ನಡದ ಪರಿಚಾರಕರಾಗಿ ರಾಚಂದ್ರಪ್ಪ ಕೆಲಸ ಮಾಡಿದ್ದಾರೆ. ಗಡಿಭಾಗದಲ್ಲಿ ಕನ್ನಡ ಅಡುಗೆಮನೆ ಭಾಷೆಯಾದರೆ, ತೆಲುಗು ಮನೆಯಂಗಳದ ಭಾಷೆಯಾಗಿರುತ್ತದೆ. ಇವುಗಳ ನಡುವೆ ಪರಸ್ಪರ ಸಂಬಂಧವನ್ನು ಸೃಷ್ಟಿಸುವಂತಹ ಅನೇಕ ಕಾರ್ಯಕ್ರಮಗಳ ಮೂಲಕ ಅವರು ‘ಗಡಿಗಾಡ ಕನ್ನಡ ನುಡಿ ಸೇವಕ ಪ್ರಶಸ್ತಿ’ಗೆ ಅರ್ಹರಾಗಿದ್ದಾರೆ ಎಂದರು.

ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ನಾಗಭೂಷಣ ಬಗ್ಗನಡು ಮಾತನಾಡಿದರು. ಈ ವೇಳೆ ಕವಿಗೋಷ್ಠಿ ಏರ್ಪಡಿಸಲಾಗಿತ್ತು. ಕೊರ್ಲಕುಂಟೆ ತಿಪ್ಪೇಸ್ವಾಮಿ, ಶಿವಗಂಗಾ, ಹರೀಶ್ ಬಾಬು, ಪಗಡಲಬಂಡೆ ನಾಗೇಂದ್ರಪ್ಪ, ಈರಣ್ಣ ಮುಂತಾದವರು ಕವಿತೆಗಳನ್ನು ವಾಚಿಸಿದರು.

ಸಾಹಿತಿ ತಿಪ್ಪಣ್ಣ ಮರಿಕುಂಟೆ, ಕನ್ನಡ ಸಾಹಿತ್ಯ ಪರಿಷತ್ ಆಂಧ್ರ ಗಡಿನಾಡು ಘಟಕದ ಅಧ್ಯಕ್ಷ ಅಂಜನ್ ಕುಮಾರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬುರೆಡ್ಡಿ, ಸಣ್ಣರಾಮರೆಡ್ಡಿ, ನಾಗರಾಜ, ಇ.ಎನ್ ವೆಂಕಟೇಶ, ಅರವಿಂದ, ಕಿಸಾನ್ ನಾಗರಾಜ, ತ್ಯಾಗರಾಜ ಮುಂತಾದವರು ಇದ್ದರು.

ನಾಗಪ್ಪನಹಳ್ಳಿ ಗೇಟ್ ಜ್ಞಾನ ವಿಕಾಸ ಶಾಲೆ ಅವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಂದ್ರ ಗಡಿನಾಡು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಯೋಜನೆ ಮತ್ತು ಸಾಂಖಿಕ ಸಚಿವ ಡಿ.ಸುಧಾಕರ್ ಅವರು ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.