ADVERTISEMENT

ಚಳ್ಳಕೆರೆ | ಅಗತ್ಯವಿರುವ ಕಡೆ ಗೋಶಾಲೆ ತೆರೆಯಲು ಸಿದ್ಧತೆ: ರೆಹಾನ್‍ ಪಾಷಾ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2023, 14:06 IST
Last Updated 25 ನವೆಂಬರ್ 2023, 14:06 IST

ಚಳ್ಳಕೆರೆ: ಬರ ಪರಿಸ್ಥಿತಿ ಎದುರಿಸಲು ತಾಲ್ಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ತಹಶೀಲ್ದಾರ್ ರೆಹಾನ್‍ ಪಾಷಾ ಹೇಳಿದರು.

‘ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಗೋ ಶಾಲೆ ತೆರೆಯಲು ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿದೆ. ಡಿಸೆಂಬರ್ ಅಂತ್ಯ ಅಥವಾ ಜನವರಿ ಮೊದಲ ವಾರದಲ್ಲಿ ನಗರದ ಅಜ್ಜನಗುಡಿ ದೇವಸ್ಥಾನ, ತಾಲ್ಲೂಕಿನ ತಳಕು ಹೋಬಳಿ ವ್ಯಾಪ್ತಿಯ ದೊಡ್ಡಉಳ್ಳಾರ್ತಿ ಕಾವಲು, ಪರಶುರಾಂಪುರ ಹೋಬಳಿ ಚೌಳೂರು ಗೇಟ್, ನಾಯಕನಹಟ್ಟಿ ಹೋಬಳಿಯ ಚೌಡಮ್ಮನ ಕಾವಲು ಬಳಿ ಗೋ ಶಾಲೆ ತೆರೆಯಲಾಗುವುದು’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸರ್ಕಾರವೇ ಗೋ ಶಾಲೆ ತೆರೆಯುವುದರಿಂದ ಜಾನುವಾರುಗಳ ಕುಡಿಯುವ ನೀರು ಹಾಗೂ ಮೇವಿನ ಕೊರತೆ ನೀಗಲಿದೆ. ಮೇವಿನ ತೀವ್ರತೆ ಎದುರಿಸುತ್ತಿರುವ ರೈತರು, ತಮ್ಮ ಜಾನುವಾರುಗಳನ್ನು ಕುರುಡಿಹಳ್ಳಿ ಬಳಿ ಇರುವ ಪುಣ್ಯಕೋಟಿ ಗೋ ಶಾಲೆಗೆ ತಂದು ಬಿಡಬಹುದು ಎಂದು ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಬಿ. ರೇವಣ್ಣ ಹೇಳಿದರು.

ADVERTISEMENT

ಜನರು ಗುಳೆ ಹೋಗುವುದನ್ನು ತಡೆಯಲು ಈಗಾಗಲೇ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಕಾಮಗಾರಿ ತೀವ್ರಗೊಳಿಸಲಾಗಿದೆ. ಗ್ರಾಮದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಅಭಾವ ಉಂಟಾದಲ್ಲಿ ಖಾಸಗಿ ಕೊಳವೆಬಾವಿಯಿಂದ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಇಒ ಎಚ್. ಶಶಿಧರ್ ಹೇಳಿದರು. 

ಕಂದಾಯ ಅಧಿಕಾರಿ ಪಿ.ಎಲ್. ಲಿಂಗೇಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.