ಪರಶುರಾಂಪುರ: ಹೋಬಳಿ ವ್ಯಾಪ್ತಿಯ ಕ್ಯಾದಿಗುಂಟೆ ಬಳಿ ಇರುವ ಬಹುಗ್ರಾಮ ಶುದ್ಧ ಕುಡಿಯುವ ನೀರಿನ ಘಟಕದ ಕಾಮಗಾರಿಯನ್ನು ಬುಧವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ವೀಕ್ಷಿಸಿದರು.
ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ತುಂಗಭದ್ರ ಡ್ಯಾಂನಿಂದ ಪಾವಗಡ ತಾಲ್ಗೂಕಿಗೆ ಕುಡಿಯುವ ನೀರಿನ ಯೋಜನೆಯನ್ನು ಬುಧವಾರ ಪ್ರಾಯೋಗಿಕವಾಗಿ ಚಾಲನೆ ನೀಡಿದರು. ಅಲ್ಪ- ಸ್ವಲ್ಪ ಉಳಿದಿರುವ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಸಚಿವರು ಸೂಚಿಸಿದರು.
‘ಪಾವಗಡ ತಾಲ್ಲೂಕು ಕೇಂದ್ರವು ಆಂಧ್ರ ಗಡಿಗೆ ಹೊಂದಿಕೊಂಡಿದ್ದು, ಅತ್ಯಂತ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಹೊಂದಿದೆ. ಹಾಗಾಗಿ ನಮ್ಮ ಸರ್ಕಾರದ ಅವಧಿಯಲ್ಲಿ ಸೋಲಾರ್ ವ್ಯವಸ್ಥೆಯನ್ನು ಜಾರಿಗೊಳಿಸಿದ್ದೆವು. ಈಗ ಕುಡಿಯುವ ನೀರನ್ನು ನಮ್ಮ ಅವಧಿಯಲ್ಲಿಯೇ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಅಭಿವೃದ್ಧಿ ಮಾಡುತ್ತೇವೆ’ ಎಂದು ತಿಳಿಸಿದರು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಪಾವಗಡ ಶಾಸಕ ವಿ.ವೆಂಕಟೇಶ ಹಾಗೂ ತಹಶೀಲ್ದಾರ್ ರೇಹಾನ್ ಪಾಷ, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮೈಲ್ಯ ಇಲಾಖೆಯ ಎಇಇ ದಯನಂದಸ್ವಾಮಿ, ಎ.ಇ ತಿಪ್ಪೇಸ್ವಾಮಿ, ಪಂಚಾಯತಿ ರಾಜ್ ಇಲಾಖೆಯ ಎ.ಇ. ಹನುಮಂತಪ್ಪ, ಎಇಇ ಕಾವ್ಯಾ ಮುಂತಾದವರು ಉಪಸ್ಥಿತರಿದ್ದರು.
Cut-off box - ‘ವಿರೋಧ ಪಕ್ಷದ ಕೆಲಸ ಮಾಡಲಿ’ ‘35- 40 ಶಾಸಕರು ಬಿಜೆಪಿಯವರ ಸಂಪರ್ಕದಲ್ಲಿದ್ದಾರೆ. ಸರ್ಕಾರ ಬಿಳಿಸುತ್ತಾರಾ?’ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ ಖರ್ಗೆ ‘ನಮ್ಮ ಯಾವುದೇ ಶಾಸಕರನ್ನು ಕರೆದೊಯ್ಯಲು ಅವರಿಂದ ಸಾಧ್ಯವಿಲ್ಲ. ವಿರೋಧ ಪಕ್ಷವಾಗಿ ಅವರ ಕೆಲಸವನ್ನು ಅವರು ಮಾಡಲಿ ಸಾಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.