ADVERTISEMENT

ನಟಿಯರ ಹೇಳಿಕೆ; ರೇಣುಕಸ್ವಾಮಿ ತಂದೆ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 15:59 IST
Last Updated 3 ಜುಲೈ 2024, 15:59 IST

ಚಿತ್ರದುರ್ಗ: ರೇಣುಕಸ್ವಾಮಿ ಕಳುಹಿಸುತ್ತಿದ್ದರು ಎನ್ನಲಾದ ಅಶ್ಲೀಲ ಸಂದೇಶ ಕುರಿತಂತೆ ಕೆಲವು ನಟಿಯರು ನೀಡುತ್ತಿರುವ ಹೇಳಿಕೆಗಳ ಬಗ್ಗೆ ರೇಣುಕಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡರ್‌ ಬುಧವಾರ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನನ್ನ ಮಗ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದರೆ ಆಗಲೇ ಪೊಲೀಸರಿಗೆ ದೂರು ನೀಡಬೇಕಾಗಿತ್ತು. ದೂರು ಕೊಟ್ಟಿದ್ದರೆ ಕಾನೂನು ಕ್ರಮವಾಗುತ್ತಿತ್ತು. ಆಗ ನೀವೆಲ್ಲರೂ ಏಕೆ ಸುಮ್ಮನಿದ್ದೀರಿ. ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಎನ್ನುವ ಕಾರಣಕ್ಕೆ ಚಿತ್ರಹಿಂಸೆ ನೀಡಿ ಕೊಲೆ ಮಾಡುವುದು ಉತ್ತರವೇ? ಕಾನೂನು ಕೈಗೆ ತೆಗೆದುಕೊಂಡು ಕೊಲೆ ಮಾಡಿ ಒಂದು ಹೆಣ್ಣಿನ ಜೀವನ ಹಾಳು ಮಾಡಿದ್ದು ಏಕೆ’ ಎಂದು ಪ್ರಶ್ನಿಸಿದರು.

‘ಮಗ ಕೊಲೆಯಾದ ನಂತರ ನಮ್ಮ ಕುಟುಂಬ ಸಂಪೂರ್ಣವಾಗಿ ಹಾಳಾಗಿದೆ. ನಮಗೂ ವಯಸ್ಸಾಗಿದೆ. ತಂದೆ– ತಾಯಿ, ಅಜ್ಜಿಯನ್ನು ನೋಡಿಕೊಳ್ಳುವವರು ಯಾರು? ಚಿತ್ರಹಿಂಸೆ ನೀಡಿ ಕೊಲೆ ಮಾಡಿದವರನ್ನು ಕೆಲವು ನಟಿಯರು ಸಮರ್ಥಿಸಿಕೊಂಡು ಮಾತನಾಡುತ್ತಿದ್ದಾರೆ. ಕಾನೂನು, ಕೋರ್ಟ್‌, ಕಚೇರಿ ಬಿಟ್ಟು ಕೊಲೆ ಮಾಡಿರುವುದನ್ನು ಯಾರೂ ಸಮರ್ಥಿಸಿಕೊಳ್ಳಬಾರದು’ ಎಂದರು.

ADVERTISEMENT

‘ನನ್ನ ಮಗ ತಪ್ಪು ಮಾಡಿದ್ದರೆ ಆತನಿಗೆ ಶಿಕ್ಷೆಯಾಗಲಿ ಎಂದು ನಾನೂ ಹೇಳುತ್ತಿದ್ದೆ. ಕೆಲವು ನಟಿಯರು ನನ್ನ ಸ್ಥಾನದಲ್ಲಿ ನಿಂತು ಯೋಚನೆ ಮಾಡಲಿ. ಆತ ತಪ್ಪಾದ ಸಂದೇಶ ಕಳುಹಿಸಿದ್ದರೆ ಆತನ ವಿರುದ್ಧ ದೂರು ಕೊಡಬಹುದಿತ್ತು. ಆಗ ದೂರು ಕೊಟ್ಟಿದ್ದರೆ ಅವನಿಗೆ ಶಿಕ್ಷೆಯಾಗುತ್ತಿತ್ತು. ಆತನ ಪ್ರಾಣವೂ ಉಳಿಯುತ್ತಿತ್ತು. ಈಗ ಜೀವವನ್ನೇ ತೆಗೆದು ನಮ್ಮ ಕುಟುಂಬ ಹಾಳು ಮಾಡಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.