ಸುರತ್ಕಲ್: ಇಲ್ಲಿಗೆ ಸಮೀಪದ ಕೃಷ್ಣಾಪುರ 8ನೇ ಬ್ಲಾಕ್ ಬಳಿ ಮನೆಯಲ್ಲೇ ಭಾರಿ ಅಕ್ರಮ ಕಸಾಯಿಖಾನೆಯನ್ನು ನಡೆಸುತ್ತಿರುವುದು ಭಾನುವಾರ ಪತ್ತೆಯಾಗಿದೆ. ಸ್ಥಳದಲ್ಲಿದ್ದ 16 ಜಾನುವಾರುಗಳನ್ನು ರಕ್ಷಿಸಿರುವ ಪೊಲೀಸರು, ಗೋಮಾಂಸ ಹಾಗೂ ಅದರ ಸಾಗಣೆಗೆ ಬಳಸುತ್ತಿದ್ದ ಆಟೊರಿಕ್ಷಾವನ್ನು ವಶಕ್ಕೆ ಪಡೆದಿದ್ದಾರೆ.
ಸುಸಜ್ಜಿತ ಕಾಂಕ್ರಿಟ್ ಮನೆಯೊಂದರಲ್ಲಿ ಜಾನುವಾರುಗಳನ್ನು ಕಡಿದು ಮಾಂಸ ತಯಾರಿಸಿ ಸ್ಥಳೀಯ ಹೋಟೆಲ್ಗಳೂ ಸೇರಿದಂತೆ ವಿವಿಧೆಡೆ ಸರಬರಾಜು ಮಾಡಲಾಗುತ್ತಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಪ್ರಮುಖರು ನೀಡಿದ ಮಾಹಿತಿ ಆಧರಿಸಿ ಕೃಷ್ಣಾಪುರದ ಮನೆಯೊಂದಕ್ಕೆ ದಾಳಿ ನಡೆಸಿದಾಗ 16ಕ್ಕೂ ಹೆಚ್ಚು ಜಾನುವಾರುಗಳು ಪತ್ತೆಯಾಗಿದ್ದು, ಅವುಗಳನ್ನು ಸಂರಕ್ಷಿಸಲಾಗಿದೆ. ಕೆ.ಜಿ ಗಟ್ಟಲೆ ಗೋಮಾಂಸವೂ ಪತ್ತೆಯಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘ಸ್ಥಳದಲ್ಲಿ ಪತ್ತೆಯಾದ ಗೋಮಾಂಸವನ್ನು ಹಾಗೂ ಅದರ ಸಾಗಾಟಕ್ಕೆ ಬಳಸಿದ ಆಟೊ ರಿಕ್ಷಾವನ್ನು ವಶಕ್ಕೆ ಪಡೆದಿದ್ದೇವೆ. ಸ್ಥಳದಲ್ಲಿದ್ದ ಆರೋಪಿಗಳು ಪರಾರಿಯಾಗಿದ್ದಾರೆ. ಒಟ್ಟು ಎಷ್ಟು ಕೆ.ಜಿ. ಮಾಂಸ ಪತ್ತೆಯಾಗಿದೆ ಎಂದು ಇನ್ನಷ್ಟೇ ತಿಳಿಯಬೇಕಿದೆ’ ಎಂದು ಅವರು ತಿಳಿಸಿದ್ದಾರೆ.
ಸುರತ್ಕಲ್ ಠಾಣೆಯಲ್ಲ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.