ಮಂಗಳೂರು: ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ, ಪ್ರಾಂತ ಕಾರ್ಯಕಾರಿಣಿಯು ಕುದ್ರೋಳಿಯ ಉಮಾಧಂ ಸಭಾಭವನದಲ್ಲಿ ಸೆ.21 ಮತ್ತು 22ರಂದು ನಡೆಯಲಿದೆ ಎಂದು ರಾಜ್ಯ ಘಟಕದ ಕಾರ್ಯದರ್ಶಿ ಪ್ರವೀಣ್ ಎಚ್.ಕೆ. ಹೇಳಿದರು.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಕಾರ್ಯಕಾರಿಣಿಯಲ್ಲಿ ರಾಜ್ಯದ ಶೈಕ್ಷಣಿಕ ಪರಿಸ್ಥಿತಿ, ವರ್ತಮಾನದ ಆಗುಹೋಗುಗಳ ಬಗ್ಗೆ ಎರಡು ಕರಡು ನಿರ್ಣಯಗಳನ್ನು ಮಂಡಿಸಿ, ಅಂಗೀಕರಿಸಲಾಗುತ್ತದೆ. ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಿಗೆ ಏಕರೂಪದ ವೇಳಾಪಟ್ಟಿ, ಯುಯುಸಿಎಂಎಸ್ ತಂತ್ರಾಂಶದ ಸಮರ್ಪಕ ಕಾರ್ಯನಿರ್ವಹಣೆ, ಗೊಂದಲ ಪರಿಹಾರ, ಕೆಪಿಎಸ್ಸಿ, ಕೆಇಎ ನಡೆಸುವ ಪರೀಕ್ಷೆಗಳಲ್ಲಿ ಪಾರದರ್ಶಕತೆ, ವರ್ತಮಾನದ ಪರಿಸ್ಥಿತಿಗೆ ಸಂಬಂಧಿಸಿ ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ ಸಮರ್ಪಕ ತನಿಖೆ, ಕಾನೂನು ಸುವ್ಯವಸ್ಥೆಯ ಸಮರ್ಪಕ ನಿರ್ವಹಣೆ, ಆನ್ಲೈನ್ ಗೇಮಿಂಗ್ಗೆ ಕಡಿವಾಣ, ಗುಡ್ಡ ಕುಸಿತ, ಗಣಿಗಾರಿಕೆಯಿಂದ ಆಗುವ ದುಷ್ಪರಿಣಾಮ ತಡೆಗೆ ಆಗ್ರಹಿಸಿ ಕರಡು ಮಂಡಿಸಲಾಗುವುದು ಎಂದರು.
‘ಜಾಗತಿಕ ರಾಜಕಾರಣದಲ್ಲಿ ಭಾರತದ ಪಾತ್ರ’ ಈ ಕುರಿತು ತುಮಕೂರು ವಿಶ್ವವಿದ್ಯಾಲಯದ ಸಾಮಾಜಿಕ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಸುರೇಶ್ ಉಪನ್ಯಾಸ ನೀಡುವರು. ಕಾರ್ಯಕಾರಿಣಿಯಲ್ಲಿ ಸಂಘಟನೆಯ ಪ್ರಮುಖರು ಭಾಗವಹಿಸುವರು. ಸೆ.21ರಂದು ಬೆಳಿಗ್ಗೆ 11 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ, ರಾಜ್ಯ ಘಟಕದ ಅಧ್ಯಕ್ಷ ಸತೀಶ್ ಭಾಗವಹಿಸುವರು ಎಂದು ಹೇಳಿದರು.
ವಿಭಾಗ ಸಂಚಾಲಕ ಗಣೇಶ್ ಪೂಜಾರಿ, ಮಂದಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.