ಮಂಗಳೂರು: ನಗರದ ಸೆಂಟ್ರಲ್ ರೈಲು ನಿಲ್ದಾಣದ ಬಳಿ ಯುವಕನೊಬ್ಬನಿಗೆ ಸೋಮವಾರ ಬೆಳಿಗ್ಗೆ ಚೂರಿ ಇರಿತವಾಗಿದೆ. ಆತನ ಸ್ನೇಹಿತನೇ ಈ ಕೃತ್ಯ ನಡೆಸಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲ್ಲೂಕಿನ ಪುಣಚ ನಿವಾಸಿ ಸಚಿನ್ (31) ಚೂರಿ ಇರಿತಕ್ಕೆ ಒಳಗಾದವರು. ಕೇರಳದ ಕೊಲ್ಲಂ ಜಿಲ್ಲೆಯ ಮೊಹಮ್ಮದ್ ನೌಫಲ್ (21) ಚೂರಿ ಇರಿದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ನೌಫಲ್ ತನ್ನ ಸ್ನೇಹಿತನಾದ ಅನಾಸ್ ಎಂಬಾತನ ಜೊತೆ ಮಂಗಳೂರಿಗೆ ರೈಲಿನಲ್ಲಿ ಭಾನುವಾರ ಸಂಜೆ ಬಂದಿದ್ದನು. ಸಚಿನ್ ಅವರಿಬ್ಬರನ್ನು ಭೇಟಿಯಾಗಿದ್ದು, ರಾತ್ರಿ ಮೂವರೂ ಒಟ್ಟಿಗೆ ಊಟ ಮಾಡಿ ರೈಲು ನಿಲ್ದಾಣದ ಬಳಿ ಮಲಗಿದ್ದರು.
‘ನನ್ನ ಮೊಬೈಲ್ ಹಾಗೂ ₹ 1 ಸಾವಿರವನ್ನು ಕದ್ದಿದ್ದೀಯ’ ಎಂದು ಆರೋಪಿಸಿ ನೌಫಾಲ್ ಭಾನುವಾರ ಬೆಳಿಗ್ಗೆ ಸಚಿನ್ ಜೊತೆ ಜಗಳವಾಡಿದ್ದ. ಈ ಆರೋಪವನ್ನು ಸಚಿನ್ ಅಲ್ಲಗಳೆದಿದ್ದ. ಇದರಿಂದ ಸಿಟ್ಟಿಗೆದ್ದ ನೌಫಲ್ ಜೇಬಿನಿಂದ ಚೂರಿ ತೆಗೆದು ಸಚಿನ್ ಹೊಟ್ಟೆಗೆ ಇರಿದಿದ್ದ. ಗಾಯಾಳುವನ್ನು ತಕ್ಷಣವೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಆತ ಪ್ರಣಾಪಾಯದಿಂದ ಪಾರಾಗಿದ್ದಾನೆ. ನಗರದ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.