ಕಾಸರಗೋಡು: ಕಾಸರಗೋಡಿನಿಂದ ವರ್ಗಾವಣೆಗೊಂಡು, ಕಣ್ಣೂರಿನ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದ ನವೀನ್ ಬಾಬು ಅಲ್ಲಿನ ಪಳ್ಳಿಕುನ್ನು ಎಂಬಲ್ಲಿನ ಅವರ ಮನೆಯಲ್ಲಿ ಮಂಗಳವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತ್ತನಂತಿಟ್ಟಕ್ಕೆ ವರ್ಗಾವಣೆಗೊಂಡ ಸಂಬಂಧ ಸೋಮವಾರ ಅವರಿಗೆ ಕಣ್ಣೂರು ಜಿಲ್ಲಾಡಳಿತದಿಂದ ವಿದಾಯಕೂಟ ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಕಣ್ಣೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಪಿ.ದಿವ್ಯಾ ಅವರು ಪೆಟ್ರೋಲ್ ಬಂಕ್ ಒಂದಕ್ಕೆ ಸಂಬಂಧಿಸಿ, ‘ನವೀನ್ ಬಾಬು ಅವರು ಭ್ರಷ್ಟಾಚಾರ ನಡೆಸಿದ್ದಾರೆ’ ಎಂದು ಆರೋಪಿಸಿದ್ದರು.
ಕಾಸರಗೋಡಿನಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದ ಅವರು ಅವರು ಕಳೆದ ಲೋಕಸಭೆ ಚುನಾವಣೆಗೆ ಮುನ್ನ ವರ್ಗಾವಣೆಗೊಂಡು ಕಣ್ಣೂರಿಗೆ ತೆರಳಿದ್ದರು.
ಆರೋಪಿ ಬಂಧನ
ಕಾಸರಗೋಡು: ಸಂಚರಿಸುತ್ತಿದ್ದ ರೈಲಿನಲ್ಲಿ ಬಾಲಕಿಗೆ ಕಿರುಕುಳ ನೀಡಿದ ಆರೋಪಿ, ನಾಟೆಕಲ್ಲು ನಿವಾಸಿ ಇಬ್ರಾಹಿಂ ಬಾದ್ ಷಾ (28) ಎಂಬಾತನನ್ನು ನಗರದ ರೈಲುನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿಗೆ ತೆರಳುತ್ತಿದ್ದ ವೆಸ್ಟ್ ಕೋಸ್ಟ್ ರೈಲಿನಲ್ಲಿ ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿತ್ತು. ರೈಲಿನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ನೀಡಿದ ದೂರಿನಂತೆ ನಿಲ್ದಾಣದಲ್ಲಿ ಕಾಸರಗೋಡು ರೈಲ್ವೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಬಂಧನ
ಕಾಸರಗೋಡು: ನಗರದ ನೂತನ ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ ಕಾರೊಂದರಲ್ಲಿ 1.72 ಗ್ರಾಂ ಎಂಡಿಎಂಎ ಪತ್ತೆಯಾಗಿದೆ. ಈ ಸಂಬಂಧ ಅಡೂರು ಪಳ್ಳಂಗೋಡು ಮೀತ್ತಲಾಡಿ ನಿವಾಸಿ ಎಂ.ಎಂ.ಮುಹಮ್ಮದ್ ಷಬಾದ್ (30) ಎಂಬಾತನನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.