ADVERTISEMENT

ರಾಮನ ಪ್ರತಿಷ್ಠೆ, ಹಿಂದೂ ನಾಗರಿಕತೆಯ ಪ್ರತಿಷ್ಠೆ: ಕಲ್ಲಡ್ಕ ಪ್ರಭಾಕರ ಭಟ್

​ಪ್ರಜಾವಾಣಿ ವಾರ್ತೆ
Published 20 ಜನವರಿ 2024, 5:19 IST
Last Updated 20 ಜನವರಿ 2024, 5:19 IST
ಮಂಗಳೂರಿನ ಸಂಘನಿಕೇತನದಲ್ಲಿ ಅಖಂಡ ರಾಮಾಯಣ ಪಾರಾಯಣ ಉದ್ಘಾಟಿಸಿದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿದರು
ಮಂಗಳೂರಿನ ಸಂಘನಿಕೇತನದಲ್ಲಿ ಅಖಂಡ ರಾಮಾಯಣ ಪಾರಾಯಣ ಉದ್ಘಾಟಿಸಿದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿದರು   

ಮಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ಎಂದರೆ ಹಿಂದೂ ನಾಗರಿಕತೆಯ ಪ್ರತಿಷ್ಠಾಪನೆ ಆದಂತೆ ಎಂದು ಆರ್‌ಎಸ್‌ಎಸ್ ಮುಖಂಡ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.

ಸಂಸ್ಕೃತ ಭಾರತೀ ಸಂಘಟನೆ ಆಶ್ರಯದಲ್ಲಿ ಮಣ್ಣಗುಡ್ಡೆಯ ‘ಸಂಘನಿಕೇತನ’ದಲ್ಲಿ ಆರಂಭವಾದ ಅಖಂಡ ರಾಮಾಯಣ ಪಾರಾಯಣವನ್ನು ಶುಕ್ರವಾರ ಇಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ರಾಮ ಅಂದರೆ ನಮ್ಮ ಧರ್ಮ, ರಾಮ ಅಂದರೆ ಈ ದೇಶದ ಅಸ್ಮಿತೆ, ಜೀವನ, ಈ ದೇಶದ ಸತ್ವ ಮತ್ತು ತತ್ವ, ಪರಾಕ್ರಮ, ಸೇವೆ, ತ್ಯಾಗ, ಹೀಗೆ ಎಲ್ಲವೂ. ನಮ್ಮ ಬದುಕಿನ ಎಲ್ಲ ಮುಖಗಳಲ್ಲೂ ರಾಮ ಕಾಣುತ್ತಾನೆ. ಅದಕ್ಕಾಗಿ ರಾಮನನ್ನು ಅಧ್ಯಯನ ಮಾಡಬೇಕು. ಯುವ ಪೀಳಿಗೆ ರಾಮನನ್ನು ಅರಿತುಕೊಳ್ಳಬೇಕು. ವೇದ, ಉಪನಿಷತ್‌ಗಳ ಸರ್ವ ಸಾರ ರಾಮಾಯಣದಲ್ಲಿದೆ. ರಾಮನನ್ನು ಅರಿತರೆ ನಾಗರಿಕತೆ ಅರಿತಂತೆ’ ಎಂದರು.

ಸಿಂಧುವಿನಿಂದ ಹುಟ್ಟಿದ ಹಿಂದೂ ದೇಶವು ಸಾವಿರಾರು ವರ್ಷಗಳ ಆಕ್ರಮಣದಲ್ಲಿ, ಮಹತ್ವದ ಭೂಭಾಗಳನ್ನು ಕಳೆದುಕೊಂಡಿದೆ. ದೇಶಕ್ಕೆ ಸ್ವಾತಂತ್ರ್ಯ ದೊರೆತಾಗ ಮುಸ್ಲಿಮರು ಪ್ರತ್ಯೇಕ ದೇಶ ಮಾಡಿಕೊಂಡರು. ಉಳಿದ ದೇಶ ಹಿಂದೂ ಆಗಬೇಕಿತ್ತಲ್ಲವೇ? ಆದರೆ, ಆಗಿನ ಸರ್ಕಾರ ನಮ್ಮ ಮೇಲೆ ಪ್ರಹಾರ ನಡೆಸಿತು ಎಂದು ಆರೋಪಿಸಿದರು. 

ADVERTISEMENT

‘ರಾಮ ಮಂದಿರಕ್ಕಾಗಿ ಹಲವಾರು ವರ್ಷಗಳ ಹೋರಾಟ ನಡೆದಿದೆ. ಭಾರತದ ಶ್ರೇಷ್ಠ ಸಂಸ್ಕೃತಿಯ ಮೂಲ ರಾಮಾಯಣವಾಗಿದ್ದು, ರಾಮ ಸಂಸ್ಕೃತಿಯ ಪ್ರತೀಕವಾಗಿದ್ದಾನೆ. ರಾಮಾಯಣ ಚರಿತ್ರೆ ಅಲ್ಲ, ಅದು ನೈಜ ಘಟನೆ. ರಾಮಾಯಣ ಮತ್ತು ಮಹಾಭಾರತವನ್ನು ಓದಲು ಯುವ ಪೀಳಿಗೆಗೆ ಕಲಿಸಿದರೆ, ನಮ್ಮ ಮತ್ತು ಭೂಮಿಯ ನಂಟು ಉಳಿಯುತ್ತದೆ’ ಎಂದು ಹೇಳಿದರು.

‘ಸಂಸ್ಕೃತ ಭಾರತೀ’ಯ ಅಖಿಲ ಭಾರತ ಪ್ರಶಿಕ್ಷಣ ಪ್ರಮುಖ ವಿಶ್ವಾಸ್ ಎಚ್‌.ಆರ್ ‍ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಕೃತ ಪ್ರಾಧ್ಯಾಪಕ ಉಮಾಮೇಶ್ವರ ನಿರೂಪಿದರು. ವಿಭಾಗ ಸಂಯೋಜಕ ನಟೇಶ್ ವಂದಿಸಿದರು.

ನಂತರ ಅಖಂಡ ರಾಮಾಯಣ ಪಾರಾಯಣ ಪಠಣ ಆರಂಭವಾಯಿತು.

ಮೂರು ದಿನ ನಡೆಯಲಿರುವ ರಾಮಾಯಣ ಪಾರಾಯಣ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳ ಭಕ್ತರು ಭಾಗಿ ಸಾರ್ವಜನಿಕರಿಗೂ ಶ್ಲೋಕ ಪಠಣದಲ್ಲಿ ಪಾಲ್ಗೊಳ್ಳಲು ಅವಕಾಶ
ದೇಶದುದ್ದಕ್ಕೂ ರಾಮನ ಹೆಸರಿನ ವ್ಯಕ್ತಿಗಳು ನಮ್ಮ ನಡುವೆ ಇದ್ದಾರೆ. ರಾಮ ನಮ್ಮ ರಕ್ತದಲ್ಲೇ ಇದ್ದಾನೆ. ರಾಮ ಭಕ್ತಿ ರಾಷ್ಟ್ರ ಶಕ್ತಿಯಾಗಿದೆ.
ದಿನೇಶ್ ಕಾಮತ್ ಸಂಸ್ಕೃತ ಭಾರತೀಯ ಅಖಿಲ ಭಾರತ ಸಂಘಟನಾ ಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.