ಮೂಡುಬಿದಿರೆ: ಕಷ್ಟದಲ್ಲಿರುವವರಿಗೆ ನೆರವಾಗಲು ಸಾಮಾಜಿಕ ಸಂಘ, ಸಂಸ್ಥೆಗಳು ಮುಂದೆ ಬರಬೇಕು. ಇಂಥ ಸೇವೆ ಮಾಡುವಾಗ ಯಾವುದೇ ಜಾತಿ, ಧರ್ಮ ನೋಡಬಾರದು ಎಂದು ಸಮಾಜ ಸೇವಕ ಅನಿಲ್ ಮೆಂಡೋನ್ಸ ಹೇಳಿದರು.
ಸಮಾಜ ಮಂದಿರದಲ್ಲಿ ಭಾನುವಾರ ‘ತ್ರಿಶೂಲ್ ಫ್ರೆಂಡ್ಸ್ ಬೆದ್ರ’ ಇದರ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
‘ಕಷ್ಟದಲ್ಲಿರುವವರಿಗೆ ನೆರವು ನೀಡುವುದು ನನ್ನ ಗುಣ. 15 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಬಿರಾವುನಲ್ಲಿ ಬಡಕುಟುಂಬವೊಂದಕ್ಕೆ ಉಚಿತ ಮನೆ ಕಟ್ಟಿಕೊಡುವ ಕೆಲಸ ಪ್ರಗತಿಯಲ್ಲಿದೆ’ ಎಂದರು.
ಕೋವಿಡ್ ಸಂದರ್ಭದಲ್ಲಿ ಸುಮಾರು 800ಕ್ಕೂ ಅಧಿಕ ಶ್ವಾನಗಳಿಗೆ ಆಹಾರ ನೀಡಿದ ಮಂಗಳೂರಿನ ಸಮಾಜ ಸೇವಕಿ, ಪ್ರಾಣಿಪ್ರಿಯೆ ರಜನಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಪ್ರಥಮ ಸೇವಾ ಯೋಜನೆಯಾಗಿ ಕೊಡಂಗಲ್ಲಿನ ಬಾಲಕೃಷ್ಣ ನಾಯಕ್ ಅವರಿಗೆ ವಾಕರ್ (ನಡೆಯುವ ಸಾಧನ), ಅನಂತ ಮತಿ ಅವರಿಗೆ ಏರ್ ಬೆಡ್ ಹಸ್ತಾಂತರಿಸಲಾಯಿತು. ತ್ರಿಶೂಲ್ ಫ್ರೆಂಡ್ಸ್ಗೆ ರಜನಿ ಶೆಟ್ಟಿ ₹ 15 ಸಾವಿರ ದೇಣಿಗೆ ನೀಡಿದರು.
ಮುಖ್ಯ ಅತಿಥಿ ಪುರಸಭೆ ಸದಸ್ಯೆ ಜಯಶ್ರೀ ಮಾತನಾಡಿದರು.
ಗೌರವ ಅಧ್ಯಕ್ಷ ಅಶ್ವತ್ಥ ಪಣಪಿಲ, ಬಡವರ, ಅಶಕ್ತರ ನೆರವಿಗಾಗಿ ಹುಟ್ಟಿಕೊಂಡಿರುವ ಸಂಘದ ಸಮಾಜ ಸೇವೆ ನಿರಂತರವಾಗಿರಲಿದೆ. ಮುಂದಿನ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಕಲಿಯುವ ಐದು ಬಡ ಮಕ್ಕಳ ಶೈಕ್ಷಣಿಕ ವೆಚ್ಚವನ್ನು ಭರಿಸುವ ಚಿಂತನೆ ಇದೆ ಎಂದರು.
ತ್ರಿಶೂಲ್ ಫ್ರೆಂಡ್ಸ್ ಅಧ್ಯಕ್ಷ ರಕ್ಷಿತ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಸಂದರ್ಭ ತ್ರಿಶೂಲ್ ಫ್ರೆಂಡ್ಸ್ ಬೆದ್ರ ಇದರ ಲೋಗೊ ಅನಾವರಣಗೊಳಿಸಲಾಯಿತು. ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ರೇಖಾ ಸಾಲ್ಯಾನ್ ಭಾಗವಹಿಸಿದ್ದರು. ಶ್ರೀರಾಜ್ ಸನಿಲ್ ನಿರೂಪಿಸಿದರು. ಗೌತಮ್ ಶೆಟ್ಟಿಗಾರ್ ಸ್ವಾಗತಿಸಿದರು. ಆಶಿಶ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.