ಮಂಗಳೂರು: ಇಲ್ಲಿನ ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿ ಅನ್ವೇಶ್ ಅಂಬೆಕಲ್ಲು ಷೋಡಷಾವಧಾನದಲ್ಲಿ ಹರಿಯಾಣದ ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ನಲ್ಲಿ ದಾಖಲೆ ಬರೆದಿದ್ದಾರೆ ಎಂದು ಕೇಂದ್ರದ ನಿರ್ದೇಶಕ ಗೋಪಾಡ್ಕರ್ ಹೇಳಿದರು.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘16 ಮಂದಿ ನೀಡಿದ ವಿಷಯಗಳನ್ನು ಏಕಕಾಲಕ್ಕೆ ಗಮನಿಸಿ, ಸ್ಮರಣಶಕ್ತಿಯಲ್ಲಿ ದಾಖಲಿಸಿಕೊಂಡು ಅನ್ವೇಶ್ ಪ್ರಸ್ತುತ ಪಡಿಸಿದ ಷೋಡಷಾವಧಾನ ದಾಖಲೆ ಸೃಷ್ಟಿಸಿತು. ಪುಸ್ತಕಗಳ ಹೆಸರು, ಪ್ರಶ್ನೆ, ಸಂಖ್ಯೆ, ವಸ್ತುಗಳ ಹೆಸರು, ಚಿತ್ರಗಳು, ಹಾಡು, ಘಂಟೆ ಶಬ್ದ, ಕ್ರಿಯೇಟಿವ್ ಆರ್ಟ್ ಜೊತೆಗೆ ಎರಡೂ ಕೈಗಳಿಗೂ ನಿರಂತರ ಕೆಲಸ, ರೂಬಿಕ್ಸ್ ಕ್ಯೂಬ್ ಪರಿಹರಿಸಿ, ಕಾಳುಗಳನ್ನು ಎಣಿಸುತ್ತ, ನಡುವೆ ಅಧಿಕ ಪ್ರಸಂಗಿಯನ್ನು ಸಹಿಸಿಕೊಂಡು 16 ವಿಷಯಗಳನ್ನು ನೆನಪಿನಲ್ಲಿಟ್ಟುಕೊಂಡು ಅನ್ವೇಶ್ ಈ ಸಾಧನೆ ಮಾಡಿದ್ದಾರೆ’ ಎಂದರು.
ನೆನಪಿನ 10 ತಂತ್ರಗಳ ಮೂಲಕ ಮಕ್ಕಳಲ್ಲಿರುವ ಅಗಾಧ ಸಾಮರ್ಥ್ಯವನ್ನು ಸ್ವರೂಪ ಶಿಕ್ಷಣ ಕೇಂದ್ರವು ಪರಿಚಯಿಸುತ್ತದೆ. ಏಳನೇ ತರಗತಿವರೆಗೆ ಉಪ್ಪಿನಂಗಡಿಯಲ್ಲಿ ಕಲಿತಿರುವ ಅನ್ವೇಶ್, ನಂತರ ಸ್ವರೂಪ ಕೇಂದ್ರಕ್ಕೆ ಸೇರಿದ್ದು, ಈಗ ಒಂಬತ್ತನೇ ತರಗತಿ ವಿದ್ಯಾರ್ಥಿ. ಪಠ್ಯದೊಂದಿಗೆ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಮಿಮಿಕ್ರಿ ಬೀಟ್ಬಾಕ್ಸ್, ಚಿತ್ರಕಲೆ, ವಯೋಲಿನ್ ಅಭ್ಯಾಸ ಮಾಡುತ್ತಿದ್ದಾರೆ. ಬಂಟ್ವಾಳದ ಮೆಲ್ಕಾರ್ ನಿವಾಸಿ ಎಂಜಿನಿಯರ್ ಮಧುಸೂದನ್ ಮತ್ತು ಶಿಕ್ಷಕಿ ತೇಜಸ್ವಿ ಪುತ್ರ ಅನ್ವೇಶ್, ಒಂಬತ್ತನೇ ತರಗತಿ ಪಠ್ಯದ ಜೊತೆಗೆ ಎಸ್ಎಸ್ಎಲ್ಸಿ ಪಠ್ಯವನ್ನು ಕೇವಲ ಒಂದು ತಿಂಗಳಿನಲ್ಲಿ ಮುಗಿಸಿ, ಇತರ ಹಲವು ವಿಷಯಗಳಲ್ಲಿ ವಿಶ್ವದಾಖಲೆ ಮಾಡುವ ಸಿದ್ಧತೆಯಲ್ಲಿದ್ದಾರೆ ಎಂದು ಹೇಳಿದರು.
ಆದಿ ಸ್ವರೂಪ, ಕಾವ್ಯ ಸ್ವರೂಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.