ADVERTISEMENT

ಬೆಳ್ತಂಗಡಿ | ಅಶ್ವತ್ಥ್‌ ಮೇಲೆ ನಡೆದ ಹಲ್ಲೆ ಖಂಡನೀಯ: ವಸಂತ ನಡ

​ಪ್ರಜಾವಾಣಿ ವಾರ್ತೆ
Published 6 ಜೂನ್ 2024, 13:51 IST
Last Updated 6 ಜೂನ್ 2024, 13:51 IST

ಬೆಳ್ತಂಗಡಿ: ‘ಉಜಿರೆ ಗ್ರಾಮದ ಮಾಚಾರು ಬಳಿ ಜೂನ್ 2ರಂದು ಮರಾಠಿ ನಾಯ್ಕ ಸಮುದಾಯದ ಅಶ್ವತ್ಥ್‌ ಅವರ ಮೇಲೆ ನಡೆದ ಹಲ್ಲೆ ಘಟನೆ ಖಂಡನೀಯ. ನಮ್ಮ ಸಮುದಾಯದ ಮೇಲೆ ಈ ರೀತಿಯ ಘಟನೆ ಮುಂದುವರಿದರೆ ಬೀದಿಗಿಳಿಯುವುದು ಅನಿವಾರ್ಯ’ ಎಂದು ತಾಲ್ಲೂಕು ಮರಾಠಿ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ವಸಂತ ನಡ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಮಾಚಾರು ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ನಿರತರಾಗಿದ್ದ ಕರುಣಾಕರ ಗೌಡ ಎಂಬುವರು ಹೆಣ್ಣು ಮಕ್ಕಳಿಗೆ ನೀಡುತ್ತಿದ್ದ ಕಿರುಕುಳವನ್ನು ಅಶ್ವತ್ಥ್‌ ಪ್ರಶ್ನಿಸಿದ್ದರಿಂದ ಈ ಹಲ್ಲೆ ನಡೆದಿದೆ. ಕರುಣಾಕರ ಗೌಡ ಈ ಹಿಂದೆ ಅಕ್ರಮ ಕಪ್ಪುಕಲ್ಲು ಗಣಿಗಾರಿಕೆ ನಡೆಸುತ್ತಿದ್ದ. ಹಲ್ಲೆ, ದಾಂದಲೆ, ಗೂಂಡಾಗಿರಿ ನಡೆಸುತ್ತಿದ್ದ ಆತನ ಮೇಲೆ ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಅಶ್ವತ್ಥ್‌ ಅವರು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವಿಚಾರ ತಿಳಿದುಕೊಂಡ ಕರುಣಾಕರ ಗೌಡ ತನ್ನ ತಾಯಿಯನ್ನು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಮಾನಭಂಗಕ್ಕೆ ಯತ್ನ ನಡೆದಿದೆ ಎಂದು ಅಶ್ವತ್ಥ್‌ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವುದು ಖಂಡನೀಯ’ ಎಂದರು.

‘ಕರುಣಾಕರ ಗೌಡನನ್ನು ರೌಡಿ ಪಟ್ಟಿಗೆ ಸೇರಿಸಬೇಕು. ಬೆಳ್ತಂಗಡಿ ತಾಲ್ಲೂಕಿನಿಂದ ಗಡೀಪಾರು ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

ADVERTISEMENT

ಸಂಘದ ಸಂಚಾಲಕ ಪ್ರಶಾಂತ್, ಮಾಚಾರ್ ವಿಶ್ವನಾಥ ನಾಯ್ಕ, ಶೇಖರ ಲಾಯಿಲ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.