ADVERTISEMENT

ಬಾಲರಾಮ ವಿಗ್ರಹ ಪ್ರತಿಷ್ಠಾಪನೆ: ಯಕ್ಷಗಾನ ಪ್ರಸಂಗಗಳೂ ರಾಮಮಯ

​ಪ್ರಜಾವಾಣಿ ವಾರ್ತೆ
Published 22 ಜನವರಿ 2024, 20:45 IST
Last Updated 22 ಜನವರಿ 2024, 20:45 IST

ಮಂಗಳೂರು: ಯಕ್ಷಗಾನದ ಬಹುತೇಕ ಮೇಳಗಳು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಲರಾಮ ವಿಗ್ರಹ ಪ್ರತಿಷ್ಠಾಪನೆಯ ಪ್ರಯುಕ್ತ ಸೋಮವಾರ ಶ್ರೀರಾಮನಿಗೆ ಸಂಬಂಧಿಸಿದ ಪ್ರಸಂಗಗಳನ್ನೇ ಪ್ರದರ್ಶಿಸಿದವು.

ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯು ಉಳ್ಳೂರಿನಲ್ಲಿ ‘ರಾಮ ರಾಮ ಶ್ರೀ ರಾಮ’ ಪ್ರಸಂಗವನ್ನು ಆಯೋಜಿಸಿತ್ತು.

ಪೆರ್ಡೂರು ಶ್ರೀ ಅನಂತ ಪದ್ಮನಾಭ ದಶಾವತಾರ ಮೇಳವು ಗೋಕರ್ಣದಲ್ಲಿ ‘ಶ್ರೀರಾಮ ಪಟ್ಟಾಭೀಷೇಕ’, ‘ಲವ ಕುಶ’ ಪ್ರಸಂಗಗಳ ಪ್ರದರ್ಶನ ಆಯೋಜಿಸಿತ್ತು. ಮಂಗಳವಾರವೂ ಈ ಮೇಳವು ಪೆರ್ಡೂರು ಜೋಗಿಬೆಟ್ಟುವಿನಲ್ಲಿ ಶ್ರೀರಾಮದರ್ಶನ ಪ್ರಸಂಗವನ್ನು ಪ್ರದರ್ಶಿಸಲಿದೆ.

ADVERTISEMENT

ಸಾಲಿಗ್ರಾಮ ಮಳವು ಭಟ್ಕಳ ವಡೇರ ಮಠ ವಿ.ವಿ ರೋಡ್‌ನಲ್ಲಿ ಶ್ರೀರಾಮ ಪಟ್ಟಾಭಿಷೇಕ ಪ್ರಸಂಗದ ಪ್ರದರ್ಶನ ಏರ್ಪಡಿಸಿತ್ತು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳವು (ಒಂದನೇ ಮೇಳ) ಕಟೀಲಿನಲ್ಲಿ ಶ್ರೀರಾಮ ಲೀಲಾಮೃತ ಪ್ರಸಂಗವನ್ನು, ಎರಡನೇ ಮೇಳವು ಮುಚ್ಚೂರು ವಿವೇಕನಗರದಲ್ಲಿ ಜೈಶ್ರೀರಾಮ್‌ (ಪಂಚವಟಿ: ಅತಿಕಾಯ, ಕುಶಲವ) ಪ್ರಸಂಗವನ್ನು ಪ್ರದರ್ಶಿಸಿದೆ.

ಪಾವಂಜೆ ನಾಗವೃಜ ಕ್ಷೇತ್ರದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೇಳವು ಕರ್ನಿರೆಯಲ್ಲಿ ‘ಅಯೋಧ್ಯಾ ದೀಪ’ ಪ್ರಸಂಗವನ್ನು, ಮೆಕ್ಕೆಕಟ್ಟು ಮೇಳವು ಬಿದ್ಕಲ್‌ಕಟ್ಟೆಯಲ್ಲಿ ‘ರಾಮಾಶ್ವಮೇಧ’ ಪ್ರಸಂಗವನ್ನು, ಸೂಡಾ ಮೇಳವು  ಕೊಟ್ಟಾರಚೌಕಿಯಲ್ಲಿ ‘ಶ್ರೀರಾಮಚರಿತಾಮೃತಂ’ ಪ್ರಸಂಗವನ್ನು, ಕಳವಾರು ಬೆಂಕಿನಾಥೇಶ್ವರ ಮೇಳವು ಕಡಂಬು ಕಟ್ಟಿಯಲ್ಲಿ ‘ಶ್ರೀರಾಮ ದರ್ಶನ’ ಪ್ರಸಂಗವನ್ನು, ಬಜಪೆ ಸುಂಕದಕಟ್ಟೆ ಮೇಳವು ಫಜೀರುವಿನಲ್ಲಿ ‘ಅಯೋಧ್ಯೆ ಶ್ರೀರಾಮ’ ಪ್ರಸಂಗವನ್ನು, ಶ್ರೀಕ್ಷೇತ್ರ ಹಿರಿಯಡಕ ಮೇಳವು ಹಿರಿಯಡಕದಲ್ಲಿ ‘ಶ್ರೀರಾಮಚರಿತಂ’ ಪ್ರಸಂಗವನ್ನು, ಹಟ್ಟಿಯಂಗಡಿ ಮೇಳವು ಫಿಲ್ಕಳದಲ್ಲಿ ‘ರಾಮಾಶ್ವಮೇಧ’, ಗೆಜ್ಜೆಗಿರಿ ಮೇಳವು ಬೆಳ್ತಂಗಡಿಯಲ್ಲಿ ‘ಅಯೋಧ್ಯಾಧಿಪ ಪಟ್ಟಾಭಿರಾಮ’ ಪ್ರಸಂಗವನ್ನು, ಹನುಮಗಿರಿ ಮೇಳವು ವಿಟ್ಲದಲ್ಲಿ ‘ನಮೋ ರಘುವಂಶದೀಪ’ ಪ್ರಸಂಗವನ್ನು, ಮಡಾಮಕ್ಕಿ ಮೇಳವು ಬಂಟಕಲ್ಲಿನಲ್ಲಿ ‘ಶ್ರೀರಾಮದರ್ಶನ’ ಪ್ರಸಂಗದ ಪ್ರದರ್ಶನವನ್ನು ಏರ್ಪಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.