ಮಂಗಳೂರು: ನಗರದ ಉರ್ವ ಸ್ಟೋರ್ ಬಳಿಯ ಅಂಗಡಿಗುಡ್ಡೆ ಕೋಟೆದ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಬಿಂಬಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ ಇದೇ 20ರಿಂದ 25ರ ವರೆಗೆ ನಡೆಯಲಿದೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರಾಜ್ಗೋಪಾಲ್ ರೈ, ಬಬ್ಬುಸ್ವಾಮಿ ಭಕ್ತರು 40 ವರ್ಷಗಳಿಂದ ದೈವಸ್ಥಾನದ ನಿವೇಶನಕ್ಕಾಗಿ ಹೋರಾಟ ಮಾಡಿದ್ದರಿಂದ ಸರ್ಕಾರ 26 ಸೆಂಟ್ ಸ್ಥಳ ನೀಡಿದೆ. ಅದರಲ್ಲಿ ದೈವಸ್ಥಾನ ನಿರ್ಮಾಣವಾಗಿದೆ ಎಂದರು.
20ರಂದು ಚಪ್ಪರ ಮುಹೂರ್ತ, ಉಗ್ರಾಣ ಮುಹೂರ್ತ ಹಾಗೂ ಹೊರೆ ಕಾಣಿಕೆಯ ಮೆರವಣಿಗೆ ನಡೆಯಲಿದೆ. 22ರಂದು ದೇರೆಬೈಲ್ ವಿಠ್ಠಲದಾಸ ತಂತ್ರಿಗಳ ಉಪಸ್ಥಿತಿಯಲ್ಲಿ ಕೃಷ್ಣ ಅಡಿಗ ಅವರ ಪೌರೋಹಿತ್ಯದಲ್ಲಿ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ಗರ್ಭಗುಡಿಯಲ್ಲಿ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ. 23ರಂದು ಬೆಳಿಗ್ಗೆ ಭಂಡಾರ ಆರೋಹಣ ನಡೆದು ಬಬ್ಬುಸ್ವಾಮಿ ದೈವದ ದರ್ಶನ ಸೇವೆ, ರಾತ್ರಿ 10 ಗಂಟೆಯಿಂದ ಬಬ್ಬುಸ್ವಾಮಿ ಹಾಗೂ ತನ್ನಿಮಾನಿಗ ದೈವಗಳ ನೇಮೋತ್ಸವ ನಡೆಯಲಿದೆ. ನಿತ್ಯವೂ ಅನ್ನ ಸಂತರ್ಪಣೆ ಇದೆ ಎಂದು ಅವರು ತಿಳಿಸಿದರು.
ಗುರಿಕಾರ ದಿನಕರ್, ಹೊರೆಕಾಣಿಕೆ ಸಂಚಾಲಕ ರಘುವೀರ್ ಬಾಬುಗುಡ್ಡೆ, ಹರೀಶ್, ಮಹಾನಗರ ಪಾಲಿಕೆ ಸದಸ್ಯರಾದ ಜಯಲಕ್ಷ್ಮಿ, ಗಣೇಶ್ ಕುಲಾಲ್, ಮನೋಹರ್ ಶೆಟ್ಟಿ, ಮುಖಂಡ ಸುಬ್ರಮಣ್ಯ ಎಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.