ಮಂಗಳೂರು: ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೋಮವಾರ ಸಂಸತ್ತಿನಲ್ಲಿ ಆಡಿದ ಮಾತುಗಳು ದೇಶದ ಹಿಂದೂಗಳನ್ನು ತೀವ್ರವಾಗಿ ಘಾಸಿಗೊಳಿಸಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ವಕ್ತಾರ ಸತೀಶ್ ಪ್ರಭು ಹೇಳಿದರು.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ ಹಿಂದೂಗಳೆಂದು ಹೇಳಿಕೊಳ್ಳುವವರು ದೇಶದಲ್ಲಿ ಹಿಂಸೆ, ಸುಳ್ಳು, ದ್ವೇಷ ಉತ್ಪಾದಿಸುವವರು ಎಂದು ಹೇಳಿರುವುದು ಖಂಡನೀಯ. ಯಾವುದೇ ಸಮುದಾಯವನ್ನು ಹಿಂಸೆ, ದ್ವೇಷದೊಂದಿಗೆ ಸಮೀಕರಿಸುವುದು ಸರಿಯಲ್ಲ. ಯಾರನ್ನೋ ಓಲೈಸಲು, ರಾಜಕೀಯ ಲಾಭ ಪಡೆಯಲು ವಿಶ್ವಕ್ಕೆ ನಿರ್ಮಲ ಜ್ಞಾನ, ಶಾಂತಿಯ ಸಹಬಾಳ್ವೆಯ ಸಂದೇಶ ನೀಡಿದ ಹಿಂದೂಗಳನ್ನು ಹಿಂಸೆ, ಅಸತ್ಯ, ದ್ವೇಷ ಹರಡುವವರೆಂದು ಬಿಂಬಿಸಿರುವುದು ಅವರ ಅಪಕ್ವ ಮಾನಸಿಕತೆಯನ್ನು ಬಿಂಬಿಸುತ್ತದೆ’ ಎಂದರು.
ರಾಹುಲ್ ಗಾಂಧಿ ದೇಶದ ಹಿಂದೂಗಳ ಕ್ಷಮೆ ಯಾಚಿಸಬೇಕು. ಅಧಿಕಾರ ಉಳಿಸಿಕೊಳ್ಳಲು ಈ ಹಿಂದೆ ಸಂವಿಧಾನಕ್ಕೆ ಹಲವು ಬಾರಿ ತಿದ್ದುಪಡಿ ತಂದ, ದೇಶದ ಜನತೆಯ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯ ಹರಣ ಮಾಡಿದ, ತುರ್ತು ಪರಿಸ್ಥಿತಿ ಜಾರಿಗೊಳಿಸಿ ವಿರೋಧಿಗಳನ್ನು ಹಿಂಸಿಸಿದ ಕಾಂಗ್ರೆಸ್ನ ನಾಯಕರು ಇಂದು ಸಂವಿಧಾನದ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸ ಎಂದು ಟೀಕಿಸಿದರು.
ಪಕ್ಷದ ಪ್ರಮುಖರಾದ ಅರುಣ್ ಜಿ. ಶೇಟ್, ವಸಂತ ಪೂಜಾರಿ, ಗುರುಚರಣ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.