ಬೆಳ್ತಂಗಡಿ: ಇಲ್ಲಿನ ಸ್ಪಂದನ ಬಂಟರ ಸೇವಾ ತಂಡದ 25ನೇ ಸೇವಾ ಕಾರ್ಯಕ್ರಮವು ಬೆಳ್ತಂಗಡಿ ಬಂಟರ ಭವನದಲ್ಲಿ ಸೋಮವಾರ ನಡೆಯಿತು.
ಶಾಸಕ ಹರೀಶ್ ಪೂಂಜ ಮಾತನಾಡಿ, ‘ಸಮಾಜದ ಕಟ್ಟಕಡೆಯ ಅಶಕ್ತ ವ್ಯಕ್ತಿಗಳನ್ನು ಗುರುತಿಸಿ ಅವರ ಸಮಸ್ಯೆಗೆ ಸ್ಪಂದಿಸಿದ ‘ಸ್ಪಂದನ ಬಂಟರ ಸೇವಾ ತಂಡದ’ 25ನೇ ಸೇವಾ ಯೋಜನೆಯ ಈ ಕಾರ್ಯಕ್ರಮ ಪ್ರೇರಣದಾಯಕ. ಕೊರೊನಾ ಸಂದರ್ಭದಲ್ಲಿ ಬಂಟ ಸಮಾಜದವರ ಸಮಸ್ಯೆಗೆ ಸ್ಪಂದಿಸಬೇಕು ಎಂಬ ಉದ್ದೇಶದಿಂದ ಉದ್ಯಮಿ ಶಶಿಧರ ಶೆಟ್ಟಿ ಗೌರವಾಧ್ಯಕ್ಷತೆಯಲ್ಲಿ ಸ್ಪಂದನ ಬಂಟರ ಸೇವಾ ತಂಡ ಆರಂಭವಾಯಿತು. ಆದರೆ, ಇಂದು ಕೇವಲ ಒಂದೇ ಸಮುದಾಯದಕ್ಕೆ ಸೀಮಿತವಾಗದೆ ಎಲ್ಲ ಸಮುದಾಯದ ಕಷ್ಟಕ್ಕೂ ಸ್ಪಂದಿಸುತ್ತೇವೆ ಎನ್ನುವ ಮೂಲಕ ನಾವು ಎಲ್ಲರೂ ಹಿಂದೂ ಸಮುದಾಯದವರು ಎಂಬ ಪರಿಕಲ್ಪನೆಯನ್ನು ವ್ಯಕ್ತಪಡಿಸಿದೆ’ ಎಂದರು.
ಇಂಥ ಕಾರ್ಯಕ್ರಮ ಇನ್ನಷ್ಟು ನಡೆಯಲಿ. ಅಶಕ್ತರಿಗೆ ನೆರವಾಗಲು ನೆರವು ನೀಡುವುದಾಗಿ ಅವರು ಭರವಸೆ ನೀಡಿದರು.
ಗೌರವಾಧ್ಯಕ್ಷ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಮಾತನಾಡಿ, ‘ಬಡತನದಿಂದ ಹೊರಬರುವ ಬಗ್ಗೆ ಯೋಚಿಸಬೇಕು. ಬಂಟ ಸಮಾಜದ ಕಾರ್ಯಕ್ರಮಗಳ ಜತೆ ನಾನು ಸದಾ ಇರುತ್ತೇನೆ. ಎಲ್ಲ ಸಮುದಾಯವನ್ನು ಒಂದೇ ಭಾವನೆಯಲ್ಲಿ ನೋಡೋಣ. ತಾಲ್ಲೂಕಿನಲ್ಲಿ ಸ್ಪಂದನ ಒಂದು ಉತ್ತಮ ಸಂಸ್ಥೆಯಾಗಬೇಕು. ಮುಂದೆ ಹತ್ತು ಪಟ್ಟು ಸಹಾಯ ನೀಡುವ ಕಾರ್ಯಕ್ರಮ ನಡೆಯಲಿ’ ಎಂದರು.
ವಿವಿಧ ಸಮಾಜದ 25 ಮಂದಿ ಅಶಕ್ತ ಕುಟುಂಬಗಳಿಗೆ ತಲಾ ₹ 10 ಸಾವಿರದಂತೆ ಸಹಾಯಧನ ವಿತರಿಸಲಾಯಿತು.
ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಜಯರಾಮ್ ಶೆಟ್ಟಿ ಮುಂಡಾಡಿಗುತ್ತು, ಬಂಟರ ಗ್ರಾಮ ಸಮಿತಿ ಲಾಯಿಲ ಅಧ್ಯಕ್ಷ ಜನಾರ್ಧನ ಶೆಟ್ಟಿ ಪೆರಿಂದಿಲೆ, ಸ್ಪಂದನ ಸೇವಾ ತಂಡದ ಕಾರ್ಯದರ್ಶಿ ಶ್ರೀನಿವಾಸ್ ಎಣಿಂಜೆ ಇದ್ದರು.
ಸ್ಪಂದನಾ ಸೇವಾ ತಂಡದ ಅಧ್ಯಕ್ಷ ಸುರೇಶ್ ಶೆಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ ಸುರೇಶ್ ಶೆಟ್ಟಿ ಪಾಲ್ತ್ಯಾರ್ ಸ್ಪಂದನಾ ಸೇವಾ ಯೋಜನೆಗಳ ವಿವರಗಳನ್ನು ನೀಡಿದರು. ಕಿರಣ್ ಶೆಟ್ಟಿ ವಂದಿಸಿ, ಪ್ರಕಾಶ್ ಶೆಟ್ಟಿ ನೊಚ್ಚ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.