ADVERTISEMENT

ಉಪ್ಪಿನಂಗಡಿ | ಹಿಮ್ಮುಖವಾಗಿ ಚಲಿಸಿದ ಬಸ್‌: ಅಂಗಡಿ, ವಾಹನಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2024, 12:29 IST
Last Updated 3 ಮಾರ್ಚ್ 2024, 12:29 IST
ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಬಸ್ ಹಿಮ್ಮುಖವಾಗಿ ಚಲಿಸಿ ಅಂಗಡಿಗೆ ಹಾನಿಯಾಗಿದೆ
ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಬಸ್ ಹಿಮ್ಮುಖವಾಗಿ ಚಲಿಸಿ ಅಂಗಡಿಗೆ ಹಾನಿಯಾಗಿದೆ   

ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌ ಶನಿವಾರ ರಾತ್ರಿ ಹಿಮ್ಮಖವಾಗಿ ಚಲಿಸಿದ್ದರಿಂದ ಎರಡು ಅಂಗಡಿಗಳಿಗೆ ಮತ್ತು ಹಲವು ಅಂಗಡಿಗಳಿಗೆ ಹಾನಿಯಾಗಿದೆ. ಸ್ಥಳದಲ್ಲಿದ್ದ ಸಾರ್ವಜನಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಉಪ್ಪಿನಂಗಡಿಯಿಂದ ಬೆಳ್ತಂಗಡಿಗೆ ಹೋಗುವ ಕೆ.ಎ-21-ಬಿ.4724 ನೋಂದಣಿ ಸಂಖ್ಯೆಯ ಖಾಸಗಿ ಬಸ್ಸನ್ನು ಅದರ ಚಾಲಕ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಹಿಮ್ಮುಖವಾಗಿ ಚಲಾಯಿಸಿದಾಗ, ಅವಘಡ ಸಂಭವಿಸಿದೆ. ಬಸ್‌ ವಾಹನ ನಿಲುಗಡೆ ಪ್ರದೇಶವನ್ನು ದಾಟಿ, ನಿಲ್ದಾಣದ ಒಳಗಡೆ ಇರುವ ವಾಣಿಜ್ಯ ಕಟ್ಟಡಕ್ಕೆ ನುಗ್ಗಿದ್ದರಿಂದ ಅಲ್ಲಿರುವ ಅಂಗಡಿಗಳಿಗೆ ಹಾನಿಯಾಗಿದೆ.

ನಾಗರಾಜ್ ಭಟ್ ಎಂಬುವರಿಗೆ ಸೇರಿದ ಬೇಕರಿ, ತಂಪು ಪಾನೀಯ ಮಾರಾಟದ ಅಂಗಡಿಗೆ ಹಾಗೂ ಅನಿಲ್ ಕುಮಾರ್ ಎಂಬುವರಿಗೆ ಸೇರಿದ ಬೇಕರಿ ಮತ್ತು ಸಿಹಿ ತಿಂಡಿ ಮಾರಾಟದ ಅಂಗಡಿಗೆ ಹಾನಿಯಾಗಿದೆ. ಎರಡೂ ಅಂಗಡಿಗಳಿಗೆ ತಲಾ ₹60 ಸಾವಿರದಷ್ಟು ಹಾನಿ ಉಂಟಾಗಿದೆ ಎಂದು ಅಂಗಡಿ ಮಾಲೀಕರು ದೂರಿದ್ದಾರೆ.

ADVERTISEMENT

ವಾಹನ ನಿಲುಗಡೆ ಪ್ರದೇಶದಲ್ಲಿದ್ದ 1 ಕಾರು ಮತ್ತು 4 ದ್ವಿಚಕ್ರ ವಾಹನಗಳಿಗೆ ಬಸ್‌ ಡಿಕ್ಕಿ ಹೊಡೆದು ಹಾನಿಯಾಗಿದೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್ ನಿಲ್ದಾಣದ  ಪ್ರದೇಶ ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದು, ಅಂಗಡಿಗಳಲ್ಲೂ ಜನರು ಇರುತ್ತಿದ್ದರು. ಆದರೆ, ದುರ್ಘಟನೆ ನಡೆದ  ಸಂದರ್ಭದಲ್ಲಿ ಬೆರಳೆಣಿಕೆಯ ಜನರಿದ್ದು, ಅಪಾಯ ಅರಿತ ಅವರು ಸ್ಥಳದಿಂದ ಓಡಿ ಪಾರಾಗಿದ್ದಾರೆ. ಅಂಗಡಿಯಲ್ಲಿದ್ದವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.