ಉಪ್ಪಿನಂಗಡಿ: ಕುಮಾರಧಾರಾ, ನೇತ್ರಾವತಿ ನದಿಗಳ ಸಂಗಮ ತಾಣವಾಗಿರುವ ಉಪ್ಪಿನಂಗಡಿಯಲ್ಲಿ ಬಸ್ಗಳಿಗೆ, ಯಾತ್ರಾರ್ಥಿಗಳ ಉಪಯೋಗಕ್ಕೆ ತಕ್ಕುದಾದ ಬಸ್ ನಿಲ್ದಾಣ ಇಲ್ಲದೆ ಪರದಾಡುವಂತಾಗಿದೆ. ಸುಸಜ್ಜಿತ ಬಸ್ ನಿಲ್ದಾಣ ಆಗಬೇಕು ಎನ್ನುವ ಹಲವು ವರ್ಷಗಳ ಬೇಡಿಕೆ ಇನ್ನೂ ಈಡೇರಿಲ್ಲ.
ಜಿಲ್ಲೆಯ, ಪುತ್ತೂರು ತಾಲ್ಲೂಕಿನ ಅತಿ ದೊಡ್ಡ ಹೋಬಳಿ ಕೇಂದ್ರವಾಗಿರುವ ಉಪ್ಪಿನಂಗಡಿಯು ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಕಡಬ ತಾಲ್ಲೂಕು ವ್ಯಾಪ್ತಿಯ ಕನಿಷ್ಠ 10 ಗ್ರಾಮಸ್ಥರಿಗೆ ಉಪ್ಪಿನಂಗಡಿಯೇ ಕೇಂದ್ರ ಸ್ಥಾನವಾಗಿದೆ. ಈ ಗ್ರಾಮಗಳಿಗೆ ಇಲ್ಲಿಂದಲೇ ಬಸ್ಗಳು ಸಂಚರಿಸುತ್ತವೆಯಾದರೂ ವ್ಯವಸ್ಥಿತ ನಿಲ್ದಾಣವೇ ಇಲ್ಲವಾಗಿದೆ.
ಪಂಚಾಯಿತಿ ಅಧೀನದ ಬಸ್ ನಿಲ್ದಾಣ: ಈಗ ಇರುವ ಬಸ್ ನಿಲ್ದಾಣ ಉಪ್ಪಿನಂಗಡಿ ಗ್ರಾಮ ಪಂಚಾಯಿತಿಯ ಅಧೀನದಲ್ಲಿದೆ. ಇಕ್ಕಟ್ಟಾಗಿರುವ ಈ ಬಸ್ ನಿಲ್ದಾಣದ ಸುತ್ತ ಪಂಚಾಯಿತಿ ಅಧೀನದ ಅಂಗಡಿಗಳಿವೆ. ಇವುಗಳ ಮಧ್ಯೆ ಇರುವ ಜಾಗದಲ್ಲಿ ಬಸ್ಗಳು ಜನರನ್ನು ಇಳಿಸಿ, ಹತ್ತಿಸಿಕೊಂಡು ಹೋಗುತ್ತವೆ. ಪ್ರತಿದಿನವೂ ವಾಹನ, ಜನದಟ್ಟಣೆ ಇರುತ್ತದೆ.
ದಕ್ಷಿಣಕಾಶಿ ಪ್ರತೀತಿ ಕೇಂದ್ರ: ಇಲ್ಲಿನ ಬಸ್ ನಿಲ್ದಾಣದ ಸಮೀಪದಲ್ಲೇ ಸಹಸ್ರಲಿಂಗೇಶ್ವರ ದೇವಸ್ಥಾನ ಇದೆ. ಈ ದೇವಸ್ಥಾನದ ಎದುರಿನಲ್ಲೇ 2 ನದಿಗಳ ಸಂಗಮವಾಗುತ್ತದೆ. ಇಲ್ಲಿ ಪಿಂಡ ಪ್ರದಾನ ಮಾಡಲು ಬರುವ ಭಕ್ತರ ಸಂಖ್ಯೆಯೂ ಹೆಚ್ಚೇ ಇದೆ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ ಪ್ರತಿದಿನ ಸುಮಾರು 2ಸಾವಿರ ವಿದ್ಯಾರ್ಥಿಗಳು ಬಂದು ಹೋಗುತ್ತಾರೆ. ಆದರೆ, ಇಲ್ಲಿ ಕನಿಷ್ಠ ಸೌಲಭ್ಯವೂ ಇಲ್ಲ.
ದೂರದ ಊರುಗಳಿಂದ ಹಿಡಿದು ಸುತ್ತಮುತ್ತಲಿನ ಹಳ್ಳಿಗಳಿಗೆ ಹೋಗುವ ಸುಮಾರು 350 ಕೆಎಸ್ಆರ್ಟಿಸಿ ಬಸ್ಗಳು ಇಲ್ಲಿನ ಬಸ್ ನಿಲ್ದಾಣಕ್ಕೆ ಬರುತ್ತವೆ. ಉಪ್ಪಿನಂಗಡಿಯಿಂದ ಮಂಗಳೂರಿಗೆ ಹಾಗೂ ಬಹುತೇಕ ಹಳ್ಳಿಗಳಿಗೆ ಖಾಸಗಿ ಸರ್ವಿಸ್ ಬಸ್ಗಳೂ ಓಡಾಡುತ್ತವೆ. ಬೆಳ್ತಂಗಡಿ ತಾಲ್ಲೂಕು ವ್ಯಾಪ್ತಿಯ ಪದ್ಮುಂಜ, ಬಂದಾರು, ಅಜಿಲಮೊಗರು, ಮೂರುಗೋಳಿ, ತುರ್ಕಳಿಕೆ, ಕಕ್ಕೆಪದವು, ಬಾಜಾರು, ಇಳಂತಿಲ, ಪುತ್ತೂರು ತಾಲ್ಲೂಕು ವ್ಯಾಪ್ತಿಯಲ್ಲಿರುವ ಹಿರೇಬಂಡಾಡಿ, ನೆಹರೂತೋಟಕ್ಕೆ ಇದೇ ಬಸ್ ನಿಲ್ದಾಣದಿಂದ ಸುಮಾರು 200 ಬಾರಿ ಖಾಸಗಿ ಸರ್ವಿಸ್ ಬಸ್ಗಳು ಸಂಚಾರ ನಡೆಸುತ್ತವೆ.
ಜಾಗದ ಕೊರತೆ: ಸುಸಜ್ಜಿತ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಆಗಬೇಕು ಎನ್ನುವ ಬೇಡಿಕೆ ಸುಮಾರು 20 ವರ್ಷಗಳಿಂದ ಕೇಳಿ ಬರುತ್ತಿದೆ. ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸಲಾಗುತ್ತಿದೆ. ಇದಕ್ಕಾಗಿ ನಟ್ಟಿಬೈಲ್ನಲ್ಲಿ ವ್ಯಕ್ತಿಯೊಬ್ಬರ ಜಾಗ ಮತ್ತು ಹಿರೇಬಂಡಾಡಿ ತಿರುವು ಬಳಿ ಇರುವ ಪ್ರವಾಸಿ ಮಂದಿರ ಇದ್ದ ಜಾಗವನ್ನು ತೋರಿಸಲಾಗಿತ್ತು. ಅಧಿಕಾರಿಗಳೂ ಪರಿಶೀಲನೆ ನಡೆಸಿದ್ದರು. ಆದರೆ, ಇಲಾಖೆ
ಅಧಿಕಾರಿಗಳು ಈ ಬಗ್ಗೆ ಪೂರಕವಾಗಿ ಸ್ಪಂದಿಸದೆ ಇರುವುದರಿಂದ ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಈ ಯೋಜನೆ ನನೆಗುದಿಗೆ ಬಿದ್ದಿದೆ ಎಂದು ಸಾರ್ವಜನಿಕರು ದೂರುತ್ತಾರೆ.
ಸರ್ಕಾರಕ್ಕೆ ಮನವಿ ಮಾಡಲಾಗಿದೆ: ಇಲ್ಲಿ ಬಸ್ ನಿಲ್ದಾಣಕ್ಕೆ ಜಾಗದ ಕೊರತೆ ಇದೆ. ಪಂಚಾಯಿತಿಯಿಂದ ಹಲವು ಬಾರಿ ನಿರ್ಣಯ ಅಂಗೀಕರಿಸಿ ಸರ್ಕಾರವನ್ನು ಕೇಳಿಕೊಂಡಿದ್ದೇವೆ. ಈಗಲೂ ಪ್ರಯತ್ನದಲ್ಲಿ ಇದ್ದೇವೆ. ಅಧಿಕಾರಿಗಳೂ ಈ ಬಗ್ಗೆ ಮುತುವರ್ಜಿ ವಹಿಸಿದರೆ ಮಾತ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎನ್ನುತ್ತಾರೆ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ಪ್ರಭು.
1981ರಿಂದ ಉಪ್ಪಿನಂಗಡಿಯಲ್ಲಿ ಬಸ್ ನಿಲ್ದಾಣ ಇದೆ. ರಾಜ್ಯದಾದ್ಯಂತ ಎಲ್ಲ ಹೋಬಳಿ ಕೇಂದ್ರದಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಇದೆಯಾದರೂ ಉಪ್ಪಿನಂಗಡಿಯಲ್ಲಿ ಮಾತ್ರ ಇಲ್ಲ. ಆದ್ಯತೆ ಮೇರೆಗೆ ಉಪ್ಪಿನಂಗಡಿಯಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗಬೇಕು ಎಂದುನಿವೃತ್ತ ಸಂಚಾರ ನಿಯಂತ್ರಕ ವೆಂಕಟರಮಣ ಭಟ್ ಹೇಳಿದರು.
ಜಾಗ ತೋರಿಸಿ, ಬೇಡಿಕೆ ಸಲ್ಲಿಕೆಯಾಗಿದೆ: ಉಪ್ಪಿನಂಗಡಿಗೆ ಹೊಸ ಬಸ್ ನಿಲ್ದಾಣ ಆಗಬೇಕು ಎಂದು ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಹಲವು ಬಾರಿ ಮನವಿ ಸಲ್ಲಿಕೆಯಾಗಿದೆ. ನಟ್ಟಿಬೈಲ್ ಸಮೀಪದಲ್ಲಿ ಮತ್ತು ಈ ಹಿಂದಿನ ಪ್ರವಾಸಿ ಮಂದಿರದ ಜಾಗವನ್ನು ತೋರಿಸಿದ್ದೇವೆ. ಆದರೆ, ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ ಎಂಬ ಆರೋಪ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ ಸಮಿತಿಯ ಮಾಜಿ ಸದಸ್ಯ ಎ.ಕೃಷ್ಣ ರಾವ್ ಅರ್ತಿಲ ಅವರದ್ದು.
ಪಂಚಾಯಿತಿ ಅಧೀನದ ಬಸ್ ನಿಲ್ದಾಣ ಕೆಎಸ್ಆರ್ಟಿಸಿ, ಖಾಸಗಿ ಬಸ್ಗಳಿಗೆ ಒಂದೇ ತಾಣ ಬಸ್ ನಿಲ್ದಾಣ ನಿರ್ಮಾಣಕ್ಕೆ ಜಾಗದ ಕೊರತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.