ADVERTISEMENT

ಸಿಎ ವಿದ್ಯಾರ್ಥಿಗಳ ಸಮಾವೇಶ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 3:23 IST
Last Updated 13 ಜೂನ್ 2024, 3:23 IST

ಮಂಗಳೂರು: ಭಾರತದ ಚಾರ್ಟೆಡ್‌ ಅಕೌಂಟಂಟ್ಸ್ ಸಂಸ್ಥೆಯು (ಐಸಿಎಐ) ಶೈಕ್ಷಣಿಕ ಮಂಡಳಿ ಆಶ್ರಯದಲ್ಲಿ ‘ಪರಿವರ್ತನ: ಬದಲಾವಣೆಯನ್ನು ಅಪ್ಪಿಕೊಳ್ಳಿ, ಭವಿಷ್ಯವನ್ನು ರೂಪಿಸಿ’  ಎಂಬ ಧ್ಯೇಯವಾಕ್ಯದಡಿ ಸಿ.ಎ ವಿದ್ಯಾರ್ಥಿಗಳ ರಾಷ್ಟ್ರೀಯ ಸಮಾವೇಶವನ್ನು ಇದೇ 14   ಮತ್ತು 15  ನಗರದ ಕುದ್ಮುಲ್ ರಂಗರಾವ್‌ ಪುರಭವನದಲ್ಲಿ ಏರ್ಪಡಿಸಲಾಗಿದೆ ಎಂದು ಐಸಿಎಐ ದಕ್ಷಿಣ ಭಾರತದ ಪ್ರಾದೇಶಿಕ ಮಂಡಳಿ (ಎಸ್‌ಐಆರ್‌ಸಿ) ಮಂಗಳೂರು ಶಾಖೆ ಅಧ್ಯಕ್ಷ  ಗೌತಮ್ ಪೈ ಡಿ  ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ದಕ್ಷಿಣ ಭಾರತದ ಸಿ.ಎ ವಿದ್ಯಾರ್ಥಿಗಳ ಸಂಘದ (ಎಸ್‌ಐಸಿಎಎಸ್‌ಎ) ಸಹಯೋಗದಲ್ಲಿ ನಡೆಯುವ ಈ ಸಮಾವೇಶದಲ್ಲಿ ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಅನುಪಮ್ ಅಗರ್ವಾಲ್, ಸಂಸದ ಕ್ಯಾ.ಬ್ರಿಜೇಶ್ ಚೌಟ ಭಾಗವಹಿಸಲಿದ್ದಾರೆ. ಐಸಿಎಐ  ಶೈಕ್ಷಣಿಕ ಮಂಡಳಿ ಅಧ್ಯಕ್ಷಯ ರಾಜಕುಮಾರ್ ಎಸ್. ಅಡುಕಿಯಾ, ಉಪಾಧ್ಯಕ್ಷ  ಶ್ರೀಧರ್‌ ಮುಪ್ಪಾಲ ಜೊತೆ ಸಂವಾದ ಇರಲಿದೆ. ನರೇಂದ್ರ ನಾಯಕ್, ಮಂಗೇಶ್ ಕಿನರೆ ಮತ್ತು ಶಿವಮ್ ಪಾಲನ್ ಪ್ರೇರಣಾದಾಯಕ ಉಪನ್ಯಾಸ ನೀಡಲಿದ್ದಾರೆ. ವಿತ್ತ ನಿರ್ವಹಣೆ, ಲೆಕ್ಕಪರಿಶೋಧನೆ, ಕೃತಕ ಬುದ್ಧಿಮತ್ತೆ ಮತ್ತು ಬೌದ್ಧಿಕ ಸ್ವತ್ತು ಹಕ್ಕುಗಳು, ತೆರಿಗೆ ಮತ್ತಿತರ ವಿಷಯಗಳ ಕುರಿತ ಉಪನ್ಯಾಸಗಳು ಇರಲಿವೆ’ ಎಂದರು.

‘ಎಸ್‌ಐಆರ್‌ಸಿಯ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ 1 ಸಾವಿರಕ್ಕಿಂತ ಹೆಚ್ಚು ಸದಸ್ಯರಿದ್ದಾರೆ. ಈ ಸಮಾವೇಶವು ಸಿ.ಎ ವಿದ್ಯಾರ್ಥಿಗಳು ಹಾಗೂ ಮಾತೃ ಸಂಸ್ಥೆಯೊಂದಿಗೆ ಬಾಂಧವ್ಯ ಸ್ಥಾಪಿಸಲು ನೆರವಾಗಲಿದೆ. ವಿದ್ಯಾರ್ಥಿಗಳ ವೃತ್ತಿ ಜೀವನ ರೂಪಿಸಲು ಪೂರಕ ಅನುಭವಗಳನ್ನು ಒದಗಿಸಲಿದೆ. ಕಲಿಕೆ, ಜಾಲತಾಣ ಮತ್ತು ವೈಯಕ್ತಿಕ ಬೆಳವಣಿಗೆಯ ಅವಕಾಶಗಳನ್ನು ಒಳಗೊಂಡ ವಿಭಿನ್ನ ಮಿಶ್ರಣವನ್ನು ಕಟ್ಟಿಕೊಡಲಿದೆ. ಜ್ಞಾನ, ಕೌಶಲ ಮತ್ತು ಆಲೋಚನೆಗಳನ್ನು ವಿವಿಧ ಚಟುವಟಿಕೆಗಳ ಮೂಲಕ ಪ್ರದರ್ಶಿಸಲು ವಿದ್ಯಾರ್ಥಿಗಳಿಗೆ ವೇದಿಕೆ ಒದಗಿಸಲಿದೆ. ಪ್ರಬಂಧ ಮಂಡನೆ, ತಜ್ಞರ ಜೊತೆ ಸಮಾಲೋಚನೆಗಳು ವಿದ್ಯಾರ್ಥಿಗಳಿಗೆ ನೆರವಾಗಲಿವೆ’ ಎಂದರು. 

ADVERTISEMENT

ಸುದ್ದಿಗೋಷ್ಠಿಯಲ್ಲಿ ಎಸ್‌ಐಸಿಎಎಸ್‌ಎ ಅಧ್ಯಕ್ಷ ಪ್ರಶಾಂತ್ ಪೈ ಕೆ., ಉಪಾಧ್ಯಕ್ಷ  ಪ್ರಜ್ವಲ್ ಪಿರೇರ, ಕಾರ್ಯದರ್ಶಿ ಬಿ. ಶಶಿಧರ ಪೈ ಹಾಗೂ ಎಸ್‌ಐಆರ್‌ಸಿ ಮಂಗಳೂರು ಶಾಖೆಯ ಕಾರ್ಯದರ್ಶಿ ಡ್ಯಾನಿಯಲ್ ಪಿರೇರ ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.