ಮಂಗಳೂರು: ‘ಮಂಗಳೂರು ವಿಶ್ವವಿದ್ಯಾನಿಲಯವು ಶನಿವಾರ ಏರ್ಪಡಿಸಿದ್ದ 42ನೇ ಘಟಿಕೋತ್ಸವ ಸಮಾರಂಭವು ರಾಜ್ಯಪಾಲ ಮತ್ತು ವಿಶ್ವವಿದ್ಯಾನಿಲಯದ ಕುಲಾಧಿಪತಿ ಥಾವರಚಂದ್ ಗೆಹಲೋತ್ ಅವರ ನಡವಳಿಕೆಯಿಂದ ಗೊಂದಲದ ಗೂಡಾಗಿ ಪರಿವರ್ತನೆ ಆಗಿದೆ’ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) ಮಂಗಳೂರು ನಗರ ಘಟಕವು ಆಕ್ರೋಶ ವ್ಯಕ್ತಪಡಿಸಿದೆ.
‘ಮಂಗಳೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ರಾಜಪಾಲರು ಶಿಷ್ಟಾಚಾರ ಮೀರಿ ಕೊನೆಯ ಗಳಿಗೆಯಲ್ಲಿ ಕೆಲವೊಂದು ಬದಲಾವಣೆ ಮಾಡಲು ಸೂಚಿಸಿದ್ದರಿಂದ ಕಾರ್ಯಕ್ರಮದಲ್ಲಿ ಗೊಂದಲ ಉಂಟಾಗಿದೆ. ಇದರಿಂದ ವಿದ್ಯಾರ್ಥಿ ಸಮುದಾಯಕ್ಕೆ ಮತ್ತು ವಿಶ್ವವಿದ್ಯಾನಿಲಯದ ಘನತೆ–ಗೌರವಕ್ಕೆ ಧಕ್ಕೆ ಉಂಟಾಗಿದೆ. ಪ್ರತಿಷ್ಠಿತ ವಿಶ್ವವಿದ್ಯಾನಿಲಯದ ಕುಲಪತಿಗಳು ವೇದಿಕೆಯಲ್ಲಿ ಭಾವುಕರಾಗಿ ಕಣ್ಣೀರು ಹಾಕುವಂತಹ ಸ್ಥಿತಿ ವೇದಿಕೆಯಲ್ಲಿ ನಿರ್ಮಾಣವಾಗಿದ್ದು ಒಳ್ಳೆಯ ಬೆಳವಣಿಗೆಯಲ್ಲ.’
‘ವಿಶ್ವವಿದ್ಯಾನಿಲಯ ಮತ್ತು ರಾಜ್ಯಪಾಲರ ಕಚೇರಿಗಳ ನಡುವಿನ ಸಮನ್ವಯದ ಕೊರತೆಯೊ ಅಥವಾ ರಾಜ್ಯಪಾಲರ ದರ್ಪದ ನಡೆಯಿಂದ ವಿಶ್ವವಿದ್ಯಾನಿಲಯಕ್ಕೆ ಹಾಗೂ ವಿದ್ಯಾರ್ಥಿಗಳಿಗೆ ತೀವ್ರ ಮುಜುಗರ ಉಂಟಾಗಿದೆ. ಈ ನಡೆಯನ್ನು ಎಬಿವಿಪಿ ತೀವ್ರವಾಗಿ ಖಂಡಿಸುತ್ತದೆ. ಈ ರೀತಿಯ ಘಟನೆ ಮರುಕಳಿಸಬಾರದು. ವಿಶ್ವವಿದ್ಯಾನಿಲಯದ ಮತ್ತು ಘಟಿಕೋತ್ಸವದ ಗಾಂಭೀರ್ಯ ಉಳಿಸಬೇಕು’ ಎಂದು ಎಬಿವಿಪಿಯ ಮಂಗಳೂರು ನಗರ ಘಟಕದ ಕಾರ್ಯದರ್ಶಿ ಶ್ರೇಯಸ್ ಇತ್ಯಡ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.