ADVERTISEMENT

ಬ್ಲೇಡ್' ನಿಂದ ಹಲ್ಲೆ ನಡೆಸಿದ ಸಹ ವಿದ್ಯಾರ್ಥಿ: ವಿದ್ಯಾರ್ಥಿನಿ ಆರೋಪ

ಪುತ್ತೂರು: ಪೋಕ್ಸೊ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2024, 7:37 IST
Last Updated 21 ಆಗಸ್ಟ್ 2024, 7:37 IST
ಪುತ್ತೂರಿನ ಸರ್ಕಾರಿ ಆಸ್ಪತ್ರೆಯ ಬಳಿ ಜಮಾಯಿಸಿದ್ದ ಮುಸ್ಲಿಂ ಸಂಘಟನೆಯ ಕಾರ್ಯಕರ್ತರನ್ನು ಪೊಲೀಸರು ಅಲ್ಲಿಂದ ಕಳಿಸಿದರು
ಪುತ್ತೂರಿನ ಸರ್ಕಾರಿ ಆಸ್ಪತ್ರೆಯ ಬಳಿ ಜಮಾಯಿಸಿದ್ದ ಮುಸ್ಲಿಂ ಸಂಘಟನೆಯ ಕಾರ್ಯಕರ್ತರನ್ನು ಪೊಲೀಸರು ಅಲ್ಲಿಂದ ಕಳಿಸಿದರು    

ಪುತ್ತೂರು (ದಕ್ಷಿಣ ಕನ್ನಡ): ‘ತಾಲ್ಲೂಕಿನ ಪದವಿ ಪೂರ್ವ ಕಾಲೇಜೊಂದರ ಪ್ರಥಮ ವರ್ಷದ ಕಲಾ ವಿಭಾಗದ ವಿದ್ಯಾರ್ಥಿಯು ನನ್ನ ಕೈಗೆ ಬ್ಲೇಡ್‌ನಿಂದ ಹಲ್ಲೆ ಮಾಡಿದ್ದಾನೆ’ ಎಂದು ಅದೇ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯೊಬ್ಬಳು ಆರೋಪಿಸಿದ್ದಾಳೆ. ಈ ಸಂಬಂಧ ಪೊಲೀಸರು ವಿದ್ಯಾರ್ಥಿ ವಿರುದ್ಧ ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿದ್ಯಾರ್ಥಿನಿಯು ಮುಸ್ಲಿಂ ಸಮುದಾಯದವಳಾಗಿದ್ದು, ಆರೋಪ ಎದುರಿಸುತ್ತಿರುವ ವಿದ್ಯಾರ್ಥಿ ಹಿಂದೂ. ವಿದ್ಯಾರ್ಥಿನಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾಳೆ.

‘ನಾನು ಕಾಲೇಜಿಗೆ ಬರುವಾಗ ಕಲಾ ವಿಭಾಗದಲ್ಲಿ ಕಲಿಯುತ್ತಿರುವ ಹಿಂದೂ ಸಮುದಾಯದ ಕೆಲ ವಿದ್ಯಾರ್ಥಿಗಳು ನನ್ನನ್ನು ಹಿಂಬಾಲಿಸಿಕೊಂಡು ಬಂದಿದ್ದರು. ನನಗೆ ಹೆದರಿಕೆಯಾಯಿತು. ಒಬ್ಬ ವಿದ್ಯಾರ್ಥಿಯನ್ನು ಬಿಟ್ಟು ಉಳಿದವರೆಲ್ಲರೂ ಓಡಿ ಹೋದರು. ನನ್ನ ಹಿಂದೆಯೇ ಬಂದ ಆ ವಿದ್ಯಾರ್ಥಿ, ‘ನೀನು (ಇನ್ನೊಬ್ಬ ವಿದ್ಯಾರ್ಥಿನಿಯ ಹೆಸರು ಹೇಳಿ) ಅವಳ ಫ್ರೆಂಡ್ ಅಲ್ವಾ’ ಎಂದು ಕೇಳಿದ. ನಾನು ‘ಹೌದು’ ಎಂದೆ. ಆಗ ಆತ ‘ನಾನು ಅವಳನ್ನು ಲವ್ ಮಾಡುವುದಿಲ್ಲ. ನಿನ್ನನ್ನೇ ಲವ್ ಮಾಡುತ್ತೇನೆ’ ಎಂದ. ಆಗ ಆತನಿಗೆ ಬೈದು, ಜಾತಿ ಗಲಾಟೆ ಎಬ್ಬಿಸಲು ಹೀಗೆಲ್ಲಾ ಮಾಡುತ್ತೀಯಾ ಎಂದು ಪ್ರಶ್ನಿಸಿದೆ. ಆ ವೇಳೆ ಆತ. ‘ಹಾಗಲ್ಲ, ನಾನು ನಿನ್ನನ್ನೇ ಲವ್ ಮಾಡುತ್ತೇನೆ’ ಎಂದು ಕೈಯನ್ನು ಅಡ್ಡ ಹಿಡಿದ. ಆಗ ನಾನು ಕೈಗೆ ಕುಟ್ಟಿದೆ. ಆಗ ಆತ ನನ್ನ ಕೈಗೆ ಕೊಯ್ದು ಓಡಿದ. ಆತ ಬ್ಲೇಡಿನಿಂದ ಕೊಯ್ದಿರಬಹುದು’ ಎಂದು ಆಕೆ ಘಟನೆಯ ಕುರಿತು ಹೇಳಿಕೆ ನೀಡಿದ್ದಾಳೆ.

ADVERTISEMENT

‘ನಾನು ಕಾಲೇಜಿಗೆ ತೆರಳಿ ಮಾಹಿತಿ ನೀಡಿದಾಗ ಉಪನ್ಯಾಸಕಿಯೊಬ್ಬರು, ‘ಕೈಗೆ ಕೊಯ್ದದ್ದೆಂದು ಹೇಳಬೇಡ, ಗಾಜು ತಾಗಿ ಗಾಯಗೊಂಡಿದ್ದು ಎಂದು ಹೇಳು’ ಎಂದು ತಿಳಿಸಿ ಆಸ್ಪತ್ರೆಗೆ ಕಳುಹಿಸಿದ್ದರು’ ಎಂದು ವಿದ್ಯಾರ್ಥಿನಿ ತಿಳಿಸಿದ್ದಾಳೆ.

ಈ ಘಟನೆಯ ಕುರಿತು ಸುದ್ದಿ ಹರಡುತ್ತಿದ್ದಂತೆಯೇ ಎಸ್‌ಡಿಪಿಐ ಸೇರಿದಂತೆ ವಿವಿಧ ಮುಸ್ಲಿಂ ಸಂಘಟನೆಗಳ ಪ್ರಮುಖರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಆಸ್ಪತ್ರೆಯ ಬಳಿ ಜಮಾಯಿಸಿ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ‘ಕೈಗೆ ಬ್ಲೇಡ್‌ನಿಂದ ಕೊಯ್ದಿದ್ದಾನೆ ಎಂದು ಹೇಳಬೇಡ ಎಂದು ಸಲಹೆ ನೀಡಿದ್ದ ಉಪನ್ಯಾಸಕಿ ವಿರುದ್ದವೂ ಪ್ರಕರಣ ದಾಖಲಿಸಿಕೊಳ್ಳಬೇಕು’ ಎಂದು ಒತ್ತಾಯಿಸಿದರು. ಇದರಿಂದಾಗಿ ಆಸ್ಪತ್ರೆಯ ವಠಾರದಲ್ಲಿ ಗೊಂದಲದ  ವಾತಾವರಣ ನಿರ್ಮಾಣವಾಯಿತು.

ಆಸ್ಪತ್ರೆಗೆ ಧಾವಿಸಿದ ಪುತ್ತೂರು ನಗರ ಠಾಣೆ ಹಾಗೂ ಮಹಿಳಾ ಠಾಣೆಯ ಪೊಲೀಸರು ಆಸ್ಪತ್ರೆಯಲ್ಲಿ ಸೇರಿದ್ದವರನ್ನು ಹೊರಗೆ ಕಳುಹಿಸಿದರು. 

ಆರಂಭದಲ್ಲಿ ಕೈಗೆ ಗಾಯವಾಗಿದೆ ಎಂದಿದ್ದ ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ಬ್ಯಾಂಡೇಜ್ ಹಾಕಿಸಿಕೊಂಡು ಮನೆಗೆ ತೆರಳಿದ್ದಳು. ಆ ಬಳಿಕ ಆಕೆಯನ್ನು ಮತ್ತೆ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿಜಾಂಶ ಪತ್ತೆ– ಪೊಲೀಸರಿಗೆ ತಲೆನೋವು

‘ವಿದ್ಯಾರ್ಥಿನಿ ಹೇಳಿದಂತೆ ತಾನು ಆ ದಾರಿಯಲ್ಲಿ ಬಂದೇ ಇಲ್ಲ. ಈ ವಿಚಾರವೇ ತನಗೆ ಗೊತ್ತಿಲ್ಲ ಎಂದು ವಿದ್ಯಾರ್ಥಿ ಹೇಳಿಕೆ ನೀಡಿದ್ದಾನೆ. ವಿದ್ಯಾರ್ಥಿನಿ ಹೇಳಿದ್ದ ದಾರಿಯ ಬಳಿಯ ಸಿ.ಸಿ. ಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಲಾಗಿದೆ. ಅದರಲ್ಲೂ ವಿದ್ಯಾರ್ಥಿನಿ ಹಾಗೂ ವಿದ್ಯಾರ್ಥಿ ಸಾಗಿರುವ ಹಾಗೂ ವಿದ್ಯಾರ್ಥಿನಿ ಆರೋಪಿಸಿದಂತಹ ಘಟನೆ ನಡೆದ ದೃಶ್ಯಗಳು ಸಿಕ್ಕಿಲ್ಲ. ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳಿಬ್ಬರೂ ಅಪ್ರಾಪ್ತ ವಯಸ್ಸಿನವರು. ಸೂಕ್ಷ್ಮ ವಾಗಿರುವ ಈ ಪ್ರಕರಣದಲ್ಲಿ ನಿಜಾಂಶ ಪತ್ತೆ ಸವಾಲಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ‘ಸದ್ಯಕ್ಕೆ ವಿದ್ಯಾರ್ಥಿನಿಯ ಹೇಳಿಕೆ ಪ್ರಕಾರ ಪೊಕ್ಸೊ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ತನಿಖೆಯಲ್ಲಿ ನಿಜಾಂಶ ಏನೆಂಬುದು ತಿಳಿದು ಬರಲಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್‌ ಎನ್‌. ಅವರು ‘ಪ್ರಜಾವಾಣಿ‘ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.