ADVERTISEMENT

ಬೆಳ್ತಂಗಡಿ | ಮನೆ ಆವರಣದೊಳಗೆ ನುಗ್ಗಿ ಪಟಾಕಿ ಸಿಡಿಸಿ ಸಂಭ್ರಮ: ಖಂಡನೀಯ

​ಪ್ರಜಾವಾಣಿ ವಾರ್ತೆ
Published 6 ಜೂನ್ 2024, 13:54 IST
Last Updated 6 ಜೂನ್ 2024, 13:54 IST

ಬೆಳ್ತಂಗಡಿ: ‘ಕಳೆಂಜ ಗ್ರಾಮದ ಬಿಜೆಪಿ ಕಾರ್ಯಕರ್ತ ರಾಜೇಶ್ ಎಂಬುವರು ವಿಜಯೋತ್ಸವದ ಸಂಭ್ರಮಾಚರಣೆ ನೆಪದಲ್ಲಿ ಅದೇ ಗ್ರಾಮದ ಕಜೆ ಮನೆಯ ಕುಶಾಲಪ್ಪ ಗೌಡ ಅವರ ಮನೆಯ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿ ಸುಡುಮದ್ದು ಸಿಡಿಸಿ ಮನೆಯಲ್ಲಿದ್ದ ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ದೌರ್ಜನ್ಯ ಮಾಡಿದ್ದಾರೆ. ಈ ಸಂದರ್ಭ ಮಾತಿಗೆ ಮಾತು ಬೆಳೆದು ತನ್ನ ಕುಟುಂಬದ ರಕ್ಷಣೆಗಾಗಿ ಕುಶಾಲಪ್ಪಗೌಡ ಅವರು ಪ್ರತಿರೋಧ ಒಡ್ಡಿದ್ದು, ಆಗ ನಡೆದ ಘಟನೆಯಲ್ಲಿ ಗಾಯಗಳಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶೇಖರ್ ಕುಕ್ಕೇಡಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಲೋಕಸಭೆ ಚುನಾವಣೆ ಸಂಬಂಧ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದರೂ ಕಾನೂನು ಮೀರಿ ಕುಶಾಲಪ್ಪ ಗೌಡ ಅವರ ಆವರಣದ ಒಳಗೆ ಸಿಡಿಮದ್ದು ಸಿಡಿಸಿ ಸಂಭ್ರಮಾಚರಿಸಿರುವುದು, ಹೆಣ್ಣು ಮಗಳ ಮೇಲೆ ದೌರ್ಜನ್ಯ ಮಾಡಿರುವುದು ಖಂಡನೀಯ. ಈ ವೇಳೆ ಪರಸ್ಪರ ಹಲ್ಲೆ ನಡೆದಿರುವುದು ವಿಷಾದನೀಯ. ಆದರೆ, ಈ ಪ್ರಕರಣವನ್ನು ರಾಜಕೀಯ ದುರುದ್ದೇಶಕ್ಕಾಗಿ ಬಿಜೆಪಿ ಬಳಸಿಕೊಂಡು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹೆಸರನ್ನು ಎಳೆದು ತಂದಿರುವುದು ಸರಿಯಲ್ಲ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆ ಕೂಡಲೇ ತಪ್ಪಿತಸ್ಥರನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಿರುವುದು ಶ್ಲಾಘನೀಯ’ ಎಂದರು.

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ನಗರ ಅಧ್ಯಕ್ಷ ಸತೀಶ್ ಕೆ.ಬಂಗೇರ ಕಾಶಿಪಟ್ಣ, ನಗರ ಎಸ್.ಟಿ. ಘಟಕದ ಅಧ್ಯಕ್ಷ ಜಯಾನಂದ ಪಿಲಿಕಲ, ಗ್ರಾಮೀಣ ಎಸ್.ಸಿ.ಘಟಕದ ಅಧ್ಯಕ್ಷ ನೇಮಿರಾಜ್ ಕಿಲ್ಲೂರು, ಅಕ್ರಮ ಸಕ್ರಮ ಸದಸ್ಯ ಶ್ರೀಧರ್ ಕಳೆಂಜ, ತಾಲ್ಲೂಕು ಅಲ್ಪ ಸಂಖ್ಯಾತ ಘಟಕ ಅಧ್ಯಕ್ಷ ಜೈಸನ್ ಪಟ್ಟೇರಿ, ಪಕ್ಷದ ಮುಖಂಡರಾದ ಬಿ.ಕೆ.ವಸಂತ್, ನಾರಾಯಣ ಗೌಡ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.