ADVERTISEMENT

ಹಿಂದುಗಳಲ್ಲಿ ಬಿರುಕು ಮೂಡಿಸಲು ಕಾಂಗ್ರೆಸ್‌ ತಂತ್ರ: ಹರಿಕೃಷ್ಣ ಬಂಟ್ವಾಳ್‌ ಆರೋಪ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2024, 5:46 IST
Last Updated 21 ಏಪ್ರಿಲ್ 2024, 5:46 IST
ಸುದ್ದಿಗೋಷ್ಠಿಯಲ್ಲಿ ಹರಿಕೃಷ್ಣ ಬಂಟ್ವಾಳ್‌ ಮಾತನಾಡಿದರು. ರಾಜಗೋಪಾಲ ರೈ ಹಾಗೂ ನಿತಿನ್ ಕುಮಾರ್‌ ಭಾಗವಹಿಸಿದ್ದರು
ಸುದ್ದಿಗೋಷ್ಠಿಯಲ್ಲಿ ಹರಿಕೃಷ್ಣ ಬಂಟ್ವಾಳ್‌ ಮಾತನಾಡಿದರು. ರಾಜಗೋಪಾಲ ರೈ ಹಾಗೂ ನಿತಿನ್ ಕುಮಾರ್‌ ಭಾಗವಹಿಸಿದ್ದರು   

ಮಂಗಳೂರು: ‘ತುಳುನಾಡು ಹಿಂದುತ್ವದ  ಭದ್ರನೆಲೆ‌ ಎಂದು ಕಾಂಗ್ರೆಸ್‌ನವರೇ ಒಪ್ಪಿಕೊಂಡಿದ್ದಾರೆ. ಹಿಂದುತ್ವದ ಕೋಟೆಯಲ್ಲಿ ಬಿರುಕು ಹುಟ್ಟಿಸಲು ಕಾಂಗ್ರೆಸ್ ತಂತ್ರಗಾರಿಕೆ ಮಾಡಿದೆ. ಹಾಗಾಗಿ ಈ ಚುನಾವಣೆ ತುಳುನಾಡಿಗೆ ಸವಾಲಿನದಾಗಿದೆ’ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಹೇಳಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘33 ವರ್ಷಗಳಿಂದ  ಜಿಲ್ಲೆಯಲ್ಲಿ ಕಾಂಗ್ರೆಸ್ ತಲೆ ಎತ್ತಲು ಇಲ್ಲಿನ ಹಿಂದೂಗಳು ಬಿಟ್ಟಿಲ್ಲ. ಹಾಗಾಗಿ ಕಾಂಗ್ರೆಸ್ ಕೆಲವರ ಜೊತೆ ರಹಸ್ಯ ಒಪ್ಪಂದ ಮಾಡಿಕೊಂಡಿದೆ. ಕೇರಳದ ಮಲಪ್ಪುರಂನಲ್ಲಿ ಮುಸ್ಲಿಂ ಲೀಗ್‌ನ ‌ಜಿಲ್ಲೆಯನ್ನು ಕಟ್ಟಿದೆ. ಅಂತಹ ಜಿಲ್ಲೆಯನ್ನು ಕರ್ನಾಟಕದಲ್ಲಿ ಕಟ್ಟಲು ದಕ್ಷಿಣ ಕನ್ನಡವನ್ನು ಆರಿಸಿಕೊಂಡಿದ್ದಾರೆ’ ಎಂದು ಆರೋಪಿಸಿದರು.

‘ಇಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿರುವ ಬಿಲ್ಲವರನ್ನು  ಒಡೆಯಲು ಕಾಂಗ್ರೆಸ್ ಯತ್ನಿಸಿದೆ. ಜಿಲ್ಲೆಯಲ್ಲಿ ದಿವಾಳಿಯಾಗಿರುವ ಕಾಂಗ್ರೆಸ್‌ಗೆ ಲೋಕಸಭೆ ಚುನಾವಣೆಯಲ್ಲಿ ಸರಿಯಾದ ಅಭ್ಯರ್ಥಿಗಳೇ ಇಲ್ಲ. 6 ತಿಂಗಳ ಹಿಂದೆ ಆರ್‌.ಪದ್ಮರಾಜ್ ಅವರನ್ನು ಪಕ್ಷದ ಸದಸ್ಯರನ್ನಾಗಿ ಸೇರಿಸಿಕೊಂಡು ಟಿಕೆಟ್ ನೀಡಿದೆ. ಅವರನ್ನು ಗೆಲ್ಲಿಸುವ ಯಾವ ಉದ್ದೇಶವೂ ಕಾಂಗ್ರೆಸ್‌ಗೆ ಇಲ್ಲ. ಬಿಲ್ಲವ ಪ್ರಾಬಲ್ಯ ಇರುವ ಈ ಜಿಲ್ಲೆಯಲ್ಲಿ ಟೂಲ್ ಕಿಟ್ ಆಗಿ  ಅವರನ್ನು ಬಳಸಿಕೊಳ್ಳಲಾಗಿದೆ. ಕುಲಾಲರು, ಬಂಟರು, ಮೊಗವೀರರ ನಡುವೆ ಬಿರುಕು ಹುಟ್ಟಿಸಿ, ಮುಸ್ಲಿಂ ಪ್ರಾಬಲ್ಯ ಮೆರೆಯ ಬೇಕು ಎನ್ನುವ ತಂತ್ರವಿದು. ಚುನಾವಣೆ ಮುಗಿದ ಬಳಿಕ ಸತ್ಯ ಎಲ್ಲರಿಗೂ ಅರ್ಥವಾಗುತ್ತದೆ’ ಎಂದರು. 

ADVERTISEMENT

‘ಯಾವುದೇ ಜಾತಿ ಸಂಘಗಳು ರಾಜಕೀಯ ಮಾಡಬಾರದು. ಅವುಗಳ ಬೈಲಾದಲ್ಲಿ ಅಂತಹ ಅವಕಾಶವೂ ಇಲ್ಲ. ಪದ್ಮರಾಜರ ಪರ ಮತ ಯಾಚಿಸುವ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ರಾಜೇಶ್ ಕೋಟ್ಯಾನ್‌  ಮೊದಲು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಅಧ್ಯಕ್ಷರಾಗಿ ಮುಂದುವರಿಯುವುದೇ ಆದರೆ, ಬಿಲ್ಲವ ಮಹಾಮಂಡಲದ ಹೆಸರನ್ನು ಕಾಂಗ್ರೆಸ್ ಮಹಾಮಂಡಲ ಎಂದು ಬದಲಾಯಿಸಿ’ ಎಂದರು.

‘ಬಿಲ್ಲವರು ದಾರಿ ತಪ್ಪಿ ಖಳನಾಯಕರಾಗಬಾರದು. ಕಾಂಗ್ರೆಸ್‌ನ ಟೂಲ್‌ಕಿಟ್‌ನ ಭಾಗವಾಗಿ ಭವಿಷ್ಯ ಹಾಳು ಮಾಡಿಕೊಳ್ಳಬಾರದು.  ನಿಜವಾದ ಬಿಲ್ಲವರೇ ಆಗಿದ್ದರೆ, ಭಾರತದ ಸಂಸ್ಕೃತಿ ಪರಂಪರೆಯ, ಸನಾತನ ಧರ್ಮದ  ನಾಯಕರಾಗಬೇಕು’ ಎಂದರು. 

‘ಕಾಂಗ್ರೆಸ್‌ನ  ರಾಹುಲ್ ಗಾಂಧಿ  ವಯನಾಡಿನಲ್ಲಿ ನಾಮಪತ್ರ ಸಲ್ಲಿಸುವಾಗ ಆ ಪಕ್ಷದ ಒಂದೇ ಒಂದು  ಧ್ವಜವೂ ಹಾರಲಿಲ್ಲ ಏಕೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಶ್ನಿಸಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ.  ಕಾಂಗ್ರೆಸ್‌ ಧ್ವಜವನ್ನು ನಾಮಪತ್ರ ಸಲ್ಲಿಕೆ ಸಂದರ್ಭ ಹಾರಿಸಬಾರದು ಎಂಬ ಮುಸ್ಲಿಂ ಲೀಗ್‌ನ ಧಮಕಿಗೆ ರಾಹುಲ್ ಗಾಂಧಿ ಬಾಲಮುದುರಿ ಕುಳಿತಿದ್ದಾರೆ. ಉತ್ತರ ಭಾರತದಲ್ಲಿ ಎಲ್ಲೂ ಅವರಿಗೆ ಗೆಲ್ಲುವ ಅವಕಾಶವಿಲ್ಲ. ಕರ್ನಾಟಕದಲ್ಲೂ ಚುನಾವಣೆಗೆ ನಿಲ್ಲುವ ಧೈರ್ಯ ಅವರಿಗಿಲ್ಲ’ ಎಂದರು.  

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ರಾಜಗೋಪಾಲ ರೈ ಹಾಗೂ ನಿತಿನ್ ಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.