ADVERTISEMENT

ಪುತ್ತೂರು | ಕ್ರಿಡಿಟ್ ಕಾರ್ಡ್‌ ಬಳಸಿ ಮೋಸ: ಆರೋಪಿ ಸೆರೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2024, 14:08 IST
Last Updated 29 ಸೆಪ್ಟೆಂಬರ್ 2024, 14:08 IST
ಮಹಮ್ಮದ್ ಇಕ್ಬಾಲ್
ಮಹಮ್ಮದ್ ಇಕ್ಬಾಲ್   

ಪುತ್ತೂರು: ನಕಲಿ ಕ್ರೆಡಿಟ್ ಕಾರ್ಡ್‌ ಬಳಸಿ ಮೋಸ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ, ವಿಳಾಸವನ್ನು ಬದಲಾಯಿಸಿಕೊಂಡು ತಲೆಮರೆಸಿಕೊಂಡಿದ್ದ 6 ವರ್ಷದ ಹಿಂದಿನ ಪ್ರಕರಣವೊಂದರ ಆರೋಪಿಯನ್ನು ಸಂಪ್ಯ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಮೂಲತಃ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯವನಾಗಿದ್ದು, ಪ್ರಸ್ತುತ ತೆಲಂಗಾಣದ ಹೈದರಾಬಾದ್‌ನಲ್ಲಿ ವಾಸ್ತವ್ಯ ಹೊಂದಿದ್ದ ಮಹಮ್ಮದ್ ಇಕ್ಬಾಲ್ ಯಾನೆ ಪ್ರವೀಣ್‌ಕುಮಾರ್‌ ತೋಮರ್ (53) ಬಂಧಿತ ಆರೋಪಿ.

ಆರೋಪಿಯು 2008ರಲ್ಲಿ ನಕಲಿ ಕಾರ್ಡ್‌ ಬಳಸಿ ಮೋಸ ಮಾಡಿದ್ದ. ಆಗಿನ ಸಂಪ್ಯ ಪೊಲೀಸ್ ಠಾಣೆಯ ಎಸ್ಐ ಟಿ.ಡಿ.ರಾಗರಾಜ್ ಅವರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಆತ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿರಲಿಲ್ಲ. ಪುತ್ತೂರು ನ್ಯಾಯಾಲಯ ಆರೋಪಿ ವಿರುದ್ಧ ವಾರಂಟ್ ಜಾರಿಗೊಳಿಸಿತ್ತು.

ADVERTISEMENT

ಪುತ್ತೂರು ಗ್ರಾಮಾಂತರ ಸಿಪಿಐ ರವಿ ಬಿ.ಎಸ್. ಮತ್ತು ಸಂಪ್ಯ ಠಾಣೆಯ ಎಸ್.ಐ.ಜಂಬೂರಾಜ್ ಮಹಾಜನ್ ಮಾರ್ಗದರ್ಶನದಲ್ಲಿ ಎಎಸ್ಐ ಪರಮೇಶ್ವರ್ ಕೆ., ಹೆಡ್‌ಕಾನ್‌ಸ್ಟೆಬಲ್‌ ಮಧು ಕೆ.ಎನ್‌., ಕಾನ್‌ಸ್ಟೆಬಲ್‌ ಅಸ್ತಮಾ ಅವರ ತಂಡ ಆರೋಪಿಯನ್ನು ಹೈದರಾಬಾದ್‌ನಲ್ಲಿ ಪತ್ತೆ ಮಾಡಿ ಪುತ್ತೂರು ನ್ಯಾಯಾಲಯಕ್ಕೆ ಶನಿವಾರ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.