ಮಂಗಳೂರು: ‘ಹಿಂದುತ್ವ ಸಂಘಟನೆಗಳ ನಾಯಕರಿಗೆ ಚಿತ್ರಹಿಂಸೆ ನೀಡುವ ದುರುದ್ದೇಶದಿಂದ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಹ ಸಂಯೋಜಕ ಸಮಿತ್ರಾಜ್ ಧರೆಗುಡ್ಡೆ ವಿರುದ್ಧ ಗಡಿಪಾರು ಆದೇಶಕ್ಕೆ ಪೊಲೀಸ್ ಇಲಾಖೆ ಸಿದ್ಧತೆ ನಡೆಸುತ್ತಿರುವುದು ಖಂಡನೀಯ’ ಎಂದು ಹಿಂದೂ ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲೆಯ ಸಂಯೋಜಕ ನರಸಿಂಹ ಶೆಟ್ಟಿ ಮಾಣಿ ಹೇಳಿದರು.
ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಿತ್ರಾಜ್ ವಿರುದ್ಧ ಗಡಿಪಾರು ಆದೇಶ ಮಾಡಿದರೆ ಪ್ರತಿಭಟನೆ ನಡೆಸುವ ಜತೆಗೆ ಕಾನೂನು ಹೋರಾಟ ಮಾಡಲಾಗುವುದು. ಹಿಂದುತ್ವವಾದಿ ಸಂಘಟನೆಗಳ ವಿರುದ್ಧ ನಿರಂತರ ಸುಳ್ಳು ಪ್ರಕರಣಗಳನ್ನು ದಾಖಲಿಸಿ ದಮನಿಸಲು ಯತ್ನಿಸುತ್ತಿರುವ ರಾಜ್ಯ ಸರ್ಕಾರ, ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಎಂದರು.
2013ರಿಂದ 2018ರವರೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಇದ್ದಾಗ ಸಮಿತ್ ರಾಜ್ ವಿರುದ್ಧ ಹಲವು ಸುಳ್ಳು ಪ್ರಕರಣಗಳು ದಾಖಲಾಗಿದ್ದವು. ನ್ಯಾಯಾಲಯದ ವಿಚಾರಣೆಯಲ್ಲಿ ಅವರು ಕೆಲವು ಪ್ರಕರಣಗಳಲ್ಲಿ ದೋಷಮುಕ್ತಗೊಂಡಿದ್ದು, ಇನ್ನು ಕೆಲವು ವಿಚಾರಣೆ ಹಂತದಲ್ಲಿವೆ. ಈಗ ಮತ್ತೆ ಅವರನ್ನು ಗಡಿಪಾರು ಮಾಡುವ ಪ್ರಯತ್ನ ನಡೆಯುತ್ತಿದೆ. ಸಮಿತ್ ವಿರುದ್ಧ ಎರಡು ವರ್ಷಗಳಿಂದ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ. ರಾಜಕೀಯ ಒತ್ತಡದಿಂದ ಇಂತಹ ಪ್ರಯತ್ನಗಳು ನಡೆಯುತ್ತಿವೆ’ ಎಂದು ಆರೋಪಿಸಿದರು.
ಸಂಘಟನೆಯ ಪ್ರಮುಖರಾದ ಹರೀಶ್ ಶಕ್ತಿನಗರ, ರಾಜೇಶ್ ಬೊಳ್ಳುಕಲ್ಲು, ಸಂದೀಪ್ ಹೆಗ್ಡೆ, ಗಣೇಶ್ ಕೆದಿಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.