ADVERTISEMENT

11 ಅಭ್ಯರ್ಥಿಗಳಿಂದ ನಾಮಪತ್ರ; ಇಂದು ಪರಿಶೀಲನೆ

ಲೋಕಸಭಾ ಚುನಾವಣೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಕೊನೆಯ ದಿನ 6 ಅಭ್ಯರ್ಥಿಗಳಿಂದ ಉಮೇದುವಾರಿಕೆ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2024, 6:08 IST
Last Updated 5 ಏಪ್ರಿಲ್ 2024, 6:08 IST

ಮಂಗಳೂರು: ಲೋಕಸಭಾ ಚುನಾವಣೆಯ ನಾಮಪತ್ರಗಳ ಸಲ್ಲಿಕೆಯ ಕೊನೆಯ ದಿನವಾದ ಗುರುವಾರ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಆರು ಅಭ್ಯರ್ಥಿಗಳಿಂದ ಒಟ್ಟು ಎಂಟು ನಾಮಪತ್ರಗಳು ಸಲ್ಲಿಕೆಯಾಗಿವೆ. ಇದುವರೆಗೆ ಕ್ಷೇತ್ರದಲ್ಲಿ ಒಟ್ಟು 11 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಬೃಜೇಶ್‌ ಚೌಟ (ಬಿಜೆಪಿ), ಆರ್‌. ಪದ್ಮರಾಜ್ (ಕಾಂಗ್ರೆಸ್‌), ಕಾಂತಪ್ಪ (ಬಿಎಸ್‌ಪಿ), ರಂಜಿನಿ ಎಂ. (ಕರ್ನಾಟಕ ರಾಷ್ಟ್ರ ಸಮಿತಿ–ಕೆಆರ್‌ಎಸ್‌), ಕೆ.ಇ.ಮನೋಹರ (ಉತ್ತಮ ಪ್ರಜಾಕೀಯ ಪಕ್ಷ), ದುರ್ಗಾಪ್ರಸಾದ್‌ (ಕರುನಾಡ ಸೇವಕ ಪಕ್ಷ), ಸುಪ್ರೀತ್‌ ಕುಮಾರ್‌ ಪೂಜಾರಿ (ಜನತಾದಳ ಸಂಯುಕ್ತ), ಮ್ಯಾಕ್ಸಿಂ ಪಿಂಟೊ, ಫ್ರಾನ್ಸಿಸ್‌ ಲ್ಯಾನ್ಸಿ ಮಾಡ್ತಾ ಹಾಗೂ ಸತೀಶ್ ಬಿ. (ಪಕ್ಷೇತರ) ನಾಮಪತ್ರ ಸಲ್ಲಿಸಿದ್ದಾರೆ. ಆರಂಭದಲ್ಲಿ ಜೆಡಿಯುನಿಂದ ನಾಮಪತ್ರ ಸಲ್ಲಿಸಿದ್ದ ಸುಪ್ರೀತ್‌ ಕುಮಾರ್‌ ಪೂಜಾರಿ ಆ ಬಳಿಕ ಜನಹಿತ ಪಕ್ಷದಿಂದಲೂ ನಾಮಪತ್ರ ಸಲ್ಲಿಸಿದ್ದರು.

ಶುಕ್ರವಾರ (ಏ. 5ರಂದು) ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಏ. 8 ಕೊನೆಯ ದಿನ.

ADVERTISEMENT

ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ಅಭ್ಯರ್ಥಿಯಾಗಿ ಕಾಂತಪ್ಪ, ಪಕ್ಷೇತರ ಅಭ್ಯರ್ಥಿಗಳಾಗಿ ಮ್ಯಾಕ್ಸಿಮ್ ಪಿಂಟೋ, ಪ್ರಾನ್ಸಿಸ್ ಲ್ಯಾನ್ಸಿ ಮಾಡ್ತಾ ಹಾಗೂ ಸತೀಶ್ ಬಿ. ಗುರುವಾರ ನಾಮಪತ್ರಗಳು ಸಲ್ಲಿಸಿದರು. ಬುಧವಾರ ಮೂರು ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿ ಆರ್‌.ಪದ್ಮರಾಜ್‌ ಅವರು ಗುರುವಾರ ಮತ್ತೊಂದು ನಾಮಪತ್ರ ಸಲ್ಲಿಸಿದರು. ಮಾ. 28ರಂದು ಒಂದು ನಾಮಪತ್ರ ಸಲ್ಲಿಸಿದ್ದ ಕ್ಯಾ. ಬ್ರಿಜೇಶ್ ಚೌಟ ಅವರು ಗುರುವಾರ ಮತ್ತೆ ಮೂರು ನಾಮಪತ್ರ ಸಲ್ಲಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.