ADVERTISEMENT

ಪುತ್ತೂರು: ತೋಟಗಳಿಗೆ ಕಾಡಾನೆ ದಾಳಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2023, 15:38 IST
Last Updated 21 ಡಿಸೆಂಬರ್ 2023, 15:38 IST
ಪುತ್ತೂರು ತಾಲ್ಲೂಕಿನ ಪೆರ್ನಾಜೆಯ ಕೃಷಿಕ ಕುಮಾರ್ ಪೆರ್ನಾಜೆ ಅವರ ತೋಟಕ್ಕೆ ನುಗ್ಗಿರುವ ಕಾಡಾನೆ ಬೆಳೆ ನಾಶ ಮಾಡಿದೆ
ಪುತ್ತೂರು ತಾಲ್ಲೂಕಿನ ಪೆರ್ನಾಜೆಯ ಕೃಷಿಕ ಕುಮಾರ್ ಪೆರ್ನಾಜೆ ಅವರ ತೋಟಕ್ಕೆ ನುಗ್ಗಿರುವ ಕಾಡಾನೆ ಬೆಳೆ ನಾಶ ಮಾಡಿದೆ   

ಪುತ್ತೂರು: ತಾಲ್ಲೂಕಿನ ನೆಟ್ಟಣಿಗೆಮುಡ್ನೂರು ಗ್ರಾಮದ ಪೆರ್ನಾಜೆ,ನೂಜಿಬೈಲಿನ ತೋಟಗಳಿಗೆ ಕಾಡಾನೆ ದಾಳಿ ನಡೆಸಿ ಬೆಳೆ ಹಾನಿ ಮಾಡಿದೆ.

ಕುಮಾರ್ ಪೆರ್ನಾಜೆ ಅವರ ತೋಟಕ್ಕೆ ನುಗ್ಗಿರುವ ಕಾಡಾನೆ ಈಚಲ ಮರ, ಒಂದು ತೆಂಗಿನ ಮರ, ಎರಡು ಅಡಿಕೆ ಮರ ಹಾಗೂ 3 ಬಾಳೆಗಿಡಗಳನ್ನು ನಾಶ ಮಾಡಿದೆ. ಬಳಿಕ ಆನೆ ತೋಟದ ಕೆರೆಗೆ ಇಳಿದಿದೆ. ಪೆರ್ನಾಜೆಯ ರಾಘವೇಂದ್ರ ಭಟ್ ಅವರ ಮೂರು ಬಾಳೆಗಿಡಗಳನ್ನು ನಾಶಮಾಡಿದೆ.

ನೂಜಿಬೈಲು ಪರಿಸರದ ನೂಜಿಬೈಲು ಜಯಪ್ರಕಾಶ್ ರೈ ಅವರ ತೆಂಗಿನ ತೋಟದ ತಂತಿ ಬೇಲಿಗೆ ಹಾನಿ ಮಾಡಿದೆ. ನೂಜಿಬೈಲು ಮೋಹನದಾಸ್ ಶೆಟ್ಟಿ ಅವರ ಎರಡು ತೆಂಗಿನ ಮರ, ಚಂದ್ರಕಲಾ ಅವರ ಎರಡು ತೆಂಗಿನ ಮರ ಹಾಗೂ 3 ಬಾಳೆಗಿಡಗಳನ್ನು ನಾಶಗೊಳಿಸಿದೆ.

ADVERTISEMENT

ಸುಳ್ಯ ತಾಲ್ಲೂಕಿನ ಮಂಡೆಕೋಲು, ಮೂರೂರು, ಕೇರಳ ಗಡಿಪ್ರದೇಶದ ಬೆಳ್ಳಿಪ್ಪಾಡಿ, ಪಂಜಿಕಲ್ಲು ಪ್ರದೇಶಗಳಲ್ಲಿ ಕಾಡಾನೆ ಹಾವಳಿ ಕಾಣಿಸಿಕೊಂಡಿದ್ದು, ಈ ಪ್ರದೇಶದಲ್ಲಿ ಕೃಷಿಕರ ತೋಟಗಳಿಗೆ ನುಗ್ಗಿ ಕೃಷಿ ಹಾನಿ ಮಾಡುತ್ತಿದ್ದ ಕಾಡಾನೆಗಳ ಪೈಕಿ ಒಂಟಿ ಕಾಡಾನೆ ಬೇರ್ಪಟ್ಟು ಕನಕಮಜಲು, ಮುಗೇರು, ಆನೆಗುಂಡಿ ರಕ್ಷಿತಾರಣ್ಯದ ಮೂಲಕವಾಗಿ ಪೆರ್ನಾಜೆ ಕಡೆಗೆ ಬಂದಿರಬಹುದೆಂಬ ಶಂಕಿಸಲಾಗಿದೆ.

ಕಾಡಾನೆ ಕೃಷಿ ಹಾನಿ ಮಾಡಿರುವ ತೋಟಗಳಿಗೆ ಗುರುವಾರ ಬೆಳಿಗ್ಗೆ ಅರಣ್ಯ ಇಲಾಖೆಯ ಪಾಣಾಜೆ ಉಪ ವಲಯ ಅರಣ್ಯಾಧಿಕಾರಿ ಪ್ರಕಾಶ್ ರೈ, ಗಸ್ತು ಅರಣ್ಯ ಪಾಲಕರಾದ ಉಮೇಶ್, ಲಿಂಗರಾಜು, ಆನೆಗುಂಡಿ ವಲಯದ ಗಸ್ತು ಅರಣ್ಯ ಪಾಲಕ ದೀಪಕ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕೃಷಿ ನಾಶವಾಗಿರುವ ಕುರಿತು ಇಲಾಖೆಗೆ ಅರ್ಜಿ ಸಲ್ಲಿಸಿದರೆ ಇಲಾಖೆಯಿಂದ ಪರಿವಾರ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.

ಆನೆಗುಂಡಿ ರಕ್ಷಿತಾರಣ್ಯದ ಮೂಲಕ ಬಂದಿರುವ ಕಾಡಾನೆ ಕೃಷಿ ನಾಶ ಮಾಡಿ ಮತ್ತೆ ಆನೆಗುಂಡಿ ಅರಣ್ಯ ಕಡೆಗೆ ತೆರಳಿರುವ ಮಾಹಿತಿ ಲಭ್ಯವಾಗಿದೆ. ಒಂಟಿ ಕಾಡಾನೆ ಮತ್ತೆ ಇದೇ ಪರಿಸರಕ್ಕೆ ಬರುವ ಸಾಧ್ಯತೆ ಇರುವುದರಿಂದ ಸಂಜೆ ವೇಳೆ ಮತ್ತು ಬೆಳಗ್ಗಿನ ವೇಳೆ ಸಂಚರಿಸುವವರು ಎಚ್ಚರ ವಹಿಸಬೇಕು. ಅಲ್ಲದೆ, ಪಟಾಕಿ ಸಿಡಿಸುವಂತೆ ಅಲ್ಲಿನವರಿಗೆ ಸೂಚಿಸಿದ್ದೇವೆ. ಇಲಾಖೆಯಿಂದ ಗುರುವಾರ ರಾತ್ರಿ ಗಸ್ತು ವ್ಯವಸ್ಥೆ ಮಾಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಪ್ರಕಾಶ್ ರೈ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.