ಉಜಿರೆ: ಚಾರ್ಮಾಡಿ ಘಾಟಿರಸ್ತೆಯಲ್ಲಿ ಬುಧವಾರ ತಡರಾತ್ರಿ ಕಾಡಾನೆಯೊಂದು ರಸ್ತೆಗೆ ಅಡ್ಡನಿಂತು ವಾಹನ ಸಂಚಾರ ಸ್ಥಗಿತಗೊಂಡ ಸುಮಾರು ಎರಡು ಕಿ.ಮೀ.ವರೆಗೆ ಎರಡೂ ಕಡೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯ 7 ಮತ್ತು 8ನೇ ತಿರುವಿನ ಮಧ್ಯದ ರಸ್ತೆಯಲ್ಲಿ ಸುಮಾರು ಅರ್ಧ ಗಂಟೆ ಆಹಾರ ತಿನ್ನುತ್ತಾ ನಿಂತ ಆನೆ ಬಳಿಕ ಕಾಡಿಗೆ ಹೋಯಿತು. ರಸ್ತೆಯಲ್ಲಿ ಮರವನ್ನು ಮುರಿದು ಹಾಕಿ ತಿನ್ನುತ್ತಿದ್ದ ಆನೆಯನ್ನು ಗಮನಿಸಿದ ಕೆಎಸ್ಆರ್ಟಿಸಿ ಬಸ್ ಚಾಲಕ ಆನೆ ರಸ್ತೆ ದಾಟುವ ವರೆಗೆ ಬಸ್ ನಿಲ್ಲಿಸಿದ್ದರು. ಈ ವೇಳೆ ರಸ್ತೆಯ ಎರಡೂ ಕಡೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತು.
ಎರಡು ತಿಂಗಳಿಂದ ಚಾರ್ಮಾಡಿ ಘಾಟಿ ಪರಿಸರದಲ್ಲಿ ಹಗಲು ಹಾಗೂ ರಾತ್ರಿ ವೇಳೆ ಆಗಾಗ ಆನೆಗಳು ಕಂಡು ಬರುತ್ತಿವೆ. ಪಟಾಕಿ ಸಿಡಿಸಿ ಆನೆಗಳನ್ನು ಓಡಿಸಲು ಪ್ರಯತ್ನ ಪಟ್ಟರೂ ಆನೆಗಳು ಬೆದರುತ್ತಿಲ್ಲ. ಆನೆ ಕಂದಕಗಳು ಮುಚ್ಚಿ ಹೋಗಿವೆ. ಪ್ರಯಾಣಿಕರು ಈ ರಸ್ತೆಯಲ್ಲಿ ಓಡಾಡುವಾಗ ಎಚ್ಚರ ವಹಿಸಬೇಕಾಗಿದೆ. ಅರಣ್ಯ ಇಲಾಖಾ ಅಧಿಕಾರಿಗಳು ತಕ್ಷಣ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.