ಉಳ್ಳಾಲ: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಾಪು ಬಳಿಯಿರುವ ಗ್ಲೋಬಲ್ ಮಾರುಕಟ್ಟೆಯಲ್ಲಿ (ಕೃಷಿ ಉತ್ಪನ್ನಗಳ ಖಾಸಗಿ ಮಾರುಕಟ್ಟೆ) ಬೆಂಕಿ ಅವಘಡ ಸಂಭವಿಸಿದೆ. 5 ದೊಡ್ಡ ಹಾಗೂ 20 ಸಣ್ಣ ಮಳಿಗೆಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿವೆ.
‘ಕಲ್ಲಾಪು ಗ್ಲೋಬಲ್ ಮಾರುಕಟ್ಟೆಯಲ್ಲಿನ ನವೀದ್ ಮಾಲೀಕತ್ವದ ಎಸ್.ಎನ್. ಫ್ರೂಟ್ಸ್ ಮಳಿಗೆಯೊಂದರಲ್ಲಿಯೇ ಸುಮಾರು ಒಂದು ಕೋಟಿ ರೂಪಾಯಿ ಮೌಲ್ಯದ ನಷ್ಟ ಸಂಭವಿಸಿದೆ. ಸುಹೈಲ್ ಎಂಬವರಿಗೆ ಸೇರಿದ ಕೆಎಫ್ಕೆ, ಲತೀಫ್ ಎಂಬವರ ಕೆ.ಕೆ.ಫ್ರೂಟ್ಸ್, ಇಂಡಿಯನ್, ಸಲಾಂ ಅವರ ಬಿ.ಎಸ್.ಆರ್, ಜುಲ್ಫೀಕರ್ ಅವರ ಪಿಕೆಎಸ್, ನಾಸೀರ್ ಎಂಬವರ ಕೆಜಿಎನ್ ಫ್ರೂಟ್ಸ್ ಮಳಿಗೆಗಳು ಸಂಪೂರ್ಣ ಸುಟ್ಟುಹೋಗಿವೆ. ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ’ ಎಂದು ಮೂಲಗಳು ತಿಳಿಸಿವೆ.
ಎಸ್.ಎನ್. ಫ್ರೂಟ್ಸ್ ಮಾಲೀಕರು ಭಾನುವಾರ ಸಂಜೆ ವೇಳೆಯಷ್ಟೇ ₹40 ಲಕ್ಷ ಬೆಲೆಯ ಹಣ್ಣುಹಂಪಲುಗಳನ್ನು ಮಾರಾಟಕ್ಕೆ ತರಿಸಿದ್ದರು. ಎಲ್ಲಾ ಮಳಿಗೆಗಳಲ್ಲಿ ಫ್ರೀಝರ್ ಗಳಿದ್ದೂ, ಅವುಗಳು ಸುಟ್ಟುಹೋಗಿವೆ. ಬೀಗ ಹಾಕಿದ್ದ ಅಂಗಡಿಗಳ ಒಳಗಿನಿಂದ ಮಧ್ಯರಾತ್ರಿ 2.30 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಎಲ್ಲ ಮಳಿಗೆಗಳಿಗೂ ವ್ಯಾಪಿಸಿದೆ. ಮಂಗಳೂರಿನಿಂದ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದರು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.