ಬೆಳ್ತಂಗಡಿ: ಹಿಂದೂ ದೇವಾಲಯಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಗೊಳಿಸಿ ಪ್ರತ್ಯೇಕ ಸ್ವಾಯತ್ತ ಮಂಡಳಿ ರಚಿಸುವಂತೆ ಆಗ್ರಹಿಸಿ ವಿಶ್ವಹಿಂದೂ ಪರಿಷತ್ ಪುತ್ತೂರು ಘಟಕದಿಂದ ಒಂದು ದಿನದ ಉಪವಾಸ ಸತ್ಯಾಗ್ರಹ ಭಾನುವಾರ ಕೊಕ್ಕಡದ ಸೌತಡ್ಕ ಮಹಾಗಣಪತಿ ಕ್ಷೇತ್ರದಲ್ಲಿ ನಡೆಯಿತು.
ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಸರ್ಕಾರವು ವ್ಯಾಪಾರ ಕೇಂದ್ರಗಳಂತೆ ನೋಡಿಕೊಳ್ಳುತ್ತಿರುವುದು ಹಿಂದೂಗಳ ಮನಸ್ಸಿಗೆ ಘಾಸಿಯನ್ನುಂಟು ಮಾಡಿದೆ. ಹಿಂದೂ ಧಾರ್ಮಿಕ ಧತ್ತಿ ಇಲಾಖೆ ಆಡಳಿತಕ್ಕೆ ಒಳಪಟ್ಟ (ಎ, ಬಿ ಹಾಗೂ ಸಿ ಗ್ರೇಡ್) ದೇವಾಲಯಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಗೊಳಿಸುವಂತೆ ಒತ್ತಾಯಿಸಲಾಯಿತು.
ಸೌತಡ್ಕ ಕ್ಷೇತ್ರದಲ್ಲಿ ಮಹಾಗಣಪತಿಗೆ ಪೂಜೆ ಸಲ್ಲಿಸಿ, ಬಳಿಕ ಕೊಕ್ಕಡದ ಮಹಾಗಣಪತಿ ಸೇವಾ ಟ್ರಸ್ಟ್ ಅಧೀನದ ವಠಾರದಲ್ಲಿ ಹಾಕಲಾಗಿದ್ದ ಸಭಾ ಮಂಟಪದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಲಾಯಿತು. ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಕೃಷ್ಣ ಭಟ್ ಕೊಕ್ಕಡ ಹಾಗೂ ಕೊಕ್ಕಡದ ಡಾ. ಮೋಹನ್ದಾಸ್ ಗೌಡ ಸತ್ಯಾಗ್ರಹಕ್ಕೆ ಚಾಲನೆ ನೀಡಿದರು.
ವಿಶ್ವಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಮಾತನಾಡಿ, ‘ಹಿಂದೂ ದೇವಾಲಯಗಳು ಮತ್ತು ಅದರ ಸ್ವತ್ತುಗಳು ಜಾತ್ಯತೀತ ಸರ್ಕಾರದ ಆಡಳಿತಕ್ಕೆ ಒಳಪಟ್ಟಿದ್ದರಿಂದ ಹಿಂದೂಗಳ ಧಾರ್ಮಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಿದಂತಾಗಿದ್ದು, ಇದರಿಂದ ಹಿಂದೂಗಳ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟಾಗಿದೆ. ಹಿಂದೂ ಧಾರ್ಮಿಕ ನಂಬಿಕೆ, ವೈವಿಧ್ಯತೆ ಹಾಗೂ ಸಂಸ್ಕೃತಿಯ ಉಳಿವಿಗಾಗಿ ಹಾಗೂ ಪ್ರಸಾರಕ್ಕಾಗಿ ದೇವಾಲಯಗಳನ್ನು ಸರ್ಕಾರದ ಕಪಿಮುಷ್ಠಿಯಿಂದ ಹೊರ ತರುವುದು ಅನಿವಾರ್ಯವಾಗಿದೆ' ಎಂದರು.
ಸುಬ್ರಹ್ಮಣ್ಯ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ವಿಶ್ವಹಿಂದೂ ಪರಿಷತ್ ವಿಭಾಗ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್, ವಿಭಾಗ ಸಾಮರಸ್ಯ ಪ್ರಮುಖ್ ಭಾಸ್ಕರ ಧರ್ಮಸ್ಥಳ, ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣ ಪ್ರಸನ್ನ, ಉಪಾಧ್ಯಕ್ಷ ಸತೀಶ್ ಬಿ.ಎಸ್., ಕಾರ್ಯದರ್ಶಿ ನವೀನ್ ನೆರಿಯ, ಸಹ ಕಾರ್ಯದರ್ಶಿ ಶ್ರೀಧರ್, ಪ್ರಮುಖರಾದ ಮೂಲಚಂದ್ರ ಕಾಂಚನ, ಪ್ರಮೋದ್ ಕಡಬ, ರಮೇಶ್ ಧರ್ಮಸ್ಥಳ, ಗಣೇಶ್ ಕಳೆಂಜ, ಸಂತೋಷ ಅತ್ತಾಜೆ, ಮೋಹನ್ ಬೆಳ್ತಂಗಡಿ, ಆರ್ಎಸ್ಎಸ್ ತಾಲ್ಲೂಕು ಸಂಘ ಚಾಲಕ್ ಗಣೇಶ್ ಕಾಂತಾಜೆ, ವಿಭಾಗ ಸಾಮರಸ್ಯ ಸಂಯೋಜಕ್ ಶಿಪಪ್ರಸಾದ್ ಮಲೆಬೆಟ್ಟು, ಧರ್ಮಾಚಾರ್ಯ ಪ್ರಮುಖ್ ಶಶಾಂಕ್ ಭಟ್, ಕಳೆಂಜ ಗೋಶಾಲೆ ಟ್ರಸ್ಟ್ ಅಧ್ಯಕ್ಷ ಎಂ.ಎಂ ದಯಾಕರ್. ಬಿ.ಎಂ.ಎಸ್ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್ ಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರನಾಥ ಶೆಟ್ಟಿ, ಕುಶಾಲಪ್ಪ ಗೌಡ ಪೂವಾಜೆ, ಹರೀಶ್ ರಾವ್ ಮುಂಡ್ರುಪ್ಪಾಡಿ, ಪುರುಷೋತ್ತಮ ಭಟ್ ವೇಣೂರು, ಪ್ರಸನ್ನ ದರ್ಬೆ, ಕಿಶೋರ್ ಶಿರಾಡಿ, ರವೀಶ್ ಪಡುಮಲೆ, ಬಾಲಕೃಷ್ಣ ನೈಮಿಷ. ಪ್ರಕಾಶ್ ಚಾರ್ಮಾಡಿ, ಪ್ರಶಾಂತ್ ಕೊಕ್ಕಡ, ಭಾಸ್ಕರ ಪೈ, ಪ್ರಕಾಶ ನಾರಾಯಣ, ಪುರಂದರ ಗೌಡ, ಪ್ರಭಾಕರ ಗೌಡ, ಪುರುಷೋತ್ತಮ ಕೊಕ್ಕಡ, ರವಿಚಂದ್ರ ಪಿ., ಶಶಿಧರ ಕೊಕ್ಕಡ, ಗಣೇಶ್ ಕೊಕ್ಕಡ ಮತ್ತಿತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.